ಚಾಮರಾಜನಗರ :ಫೆ.11: ಪೊಲೀಸ್ ಇನ್ಸ್ಪೆಕ್ಟರ್ ಹುದ್ದೆಗೆ ರಾಜೀನಾಮೆ ಕೊಟ್ಟು ರಾಜಕೀಯ ಅಖಾಡಕ್ಕೆ ಧುಮುಕಿರುವ ಬಿ.ಪುಟ್ಟಸ್ವಾಮಿ ಇಂದು ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿಯಲ್ಲಿ ನಡೆಸಿದ ಅಭಿಮಾನಿಗಳ ಬೃಹತ್ ಸಮಾವೇಶದ ಬಳಿಕ ರಾಜಕೀಯ ಹೈಡ್ರಾಮಾ ನಡೆದಿದೆ.


ಸಮಾವೇಶ ಮುಗಿಸಿ ಬಿ.ಪುಟ್ಟಸ್ವಾಮಿ ವಾಪಾಸ್ ಆಗುತ್ತಿದ್ದ ವೇಳೆ ಎಂಟ್ರಿ ಕೊಟ್ಟ ಪತ್ನಿ ಸುನೀತಾ ” ಏಕವಚನದಲ್ಲೇ ಪುಟ್ಟಸ್ವಾಮಿ ವಿರುದ್ಧ ಹರಿಹಾಯ್ದಿದ್ದು ರಾಜಕೀಯಕ್ಕೆ ಬರುವಿಕೆಯನ್ನು ವಿರೋಧಿಸಿ ಮಾತನಾಡಿದ್ದಾರೆ. ಸಮಾಧಾನದಿಂದಲೇ ಕೇಳಿಸಿಕೊಂಡ ಪುಟ್ಟಸ್ವಾಮಿ ಏನು ಮಾತನಾಡದೇ ತೆರಳಿದ್ದಾರೆ.

ಇದರಿಂದ ವ್ಯಗ್ರರಾದ ಬಿ.ಪುಟ್ಟಸ್ವಾಮಿ ಅಭಿಮಾನಿಗಳು ಪ್ರವಾಸಿ ಮಂದಿರದಲ್ಲಿದ್ದ ಶಾಸಕ ಎನ್.ಮಹೇಶ್ ಅವರ ಮಸಲತ್ತಿನಿಂದಲೇ ಇಷ್ಟೆಲ್ಲ ನಡೆದಿದೆ ಎಂದು ಶಾಸಕರ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.
ಷಡ್ಯಂತ್ರ ಆರೋಪ:

ಎರಡು ವರ್ಷಗಳ ಹಿಂದೆ ತನಗೆ ಮತ್ತು ಸುನೀತಾ ಅವರ ಜೊತೆ ವಿಚ್ಛೇದನವಾಗಿದೆ. ನನ್ನ ವಿರುದ್ಧ ಶಾಸಕ ಎನ್.ಮಹೇಶ್ ಷಡ್ಯಂತ್ರ ಮಾಡಿ ತುಳಿಯುವ ಪ್ರಯತ್ನ ಮಾಡಿದ್ದಾರೆ. ಪ್ರವಾಸಿ ಮಂದಿರದಲ್ಲಿ ಆಕೆ ಜೊತೆ ಎರಡು ತಾಸು ಏಕೆ ಮಾತನಾಡಬೇಕಿತ್ತು? ಅವರ ಕುಮ್ಮಕ್ಕಿನಿಂದಲೇ ಈ ಘಟನೆ ನಡೆದಿದೆ ಎಂದು ಪುಟ್ಟಸ್ವಾಮಿ ಆರೋಪ ಮಾಡಿದ್ದಾರೆ.




