H.Vishwanath : ಅಂಬೇಡ್ಕರ್ ಗೆ ಅಪಮಾನ ಮಾಡಿದ ಜೈನ್ ವಿವಿ ವಿರುದ್ಧ ಕ್ರಮಕೈಗೊಂಡಿಲ್ಲ : H.ವಿಶ್ವನಾಥ್

 ಮೈಸೂರು: ಫೆ.13: ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಕಿರುನಾಟಕ ಪ್ರದರ್ಶನ ಮಾಡಲಾಗಿದೆ. ಅದರಲ್ಲಿ ಜಾತಿಯತೆ, ಅಸ್ಪೃಶ್ಯತೆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ವ್ಯವಸ್ಥೆ ಬಗ್ಗೆ ಏನೋ ಹೇಳಲು ಹೋಗಿ ತಿರುಚಿದ್ದಾರೆ. ದಲಿತ ಹುಡುಗ ಮೇಲ್ವರ್ಗದ ಹುಡುಗಿಯನ್ನು ಮುಟ್ಟುವಾಗ ಟಚ್ ಮಿ ನಾಟ್ ಅಂತ ಹಾಡು ಹಾಕಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಬಿಯರ್ ಅಂಬೇಡ್ಕರ್ ಅಂತ ಸಂಭೋದಿಸಲಾಗಿದೆ. ಇದನ್ನ ನೋಡಿ ಪ್ರೇಕ್ಷಕರ ಸಾಲಿನಲ್ಲಿದ್ದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಕೇಕೆ ಹಾಕಿ ನಕ್ಕಿದ್ದಾರೆ. ಇದು ನ್ಯಾಷನಲ್ ಶೇಮ್ ಎಂದು ವಿಧಾನ ಪರಿಷತ್ತು ಸದಸ್ಯ ಹೆಚ್.ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಖಾಸಗಿ ವಿಶ್ವವಿದ್ಯಾಲಯಗಳಿಗೆ ಲಂಗು ಲಗಾಮು ಇಲ್ಲದಂತಾಗಿದೆ. ಸಿ.ಟಿ.ರವಿ ಉನ್ನತ ಶಿಕ್ಷಣ ಸಚಿವನಾಗಿದ್ದಾಗ ಈ ಸಂಸ್ಕೃತಿ ಶುರುವಾಯ್ತು. ಕೋಟ್ಯಂತರ ರೂಪಾಯಿ ತೆಗೆದುಕೊಂಡು ವಿಶ್ವವಿದ್ಯಾಲಯಗಳಿಗೆ ಅನುಮೋದನೆ ಕೊಟ್ಟರು. 

ಸಾಮಾಜಿಕ ಜಾಲತಾಣಗಳಲ್ಲಿ ನಾಟಕಕ್ಕೆ ವಿರೋಧ ವ್ಯಕ್ತವಾಗಿದೆ. ಸರ್ಕಾರ ಜೈನ್ ವಿಶ್ವವಿದ್ಯಾಲಯದ ಮಾನ್ಯತೆ ರದ್ದುಪಡಿಸಬೇಕಿತ್ತು. ಆದ್ರೆ ಯಾರದ್ದೋ ಒತ್ತಡಕ್ಕೆ ಮಣಿದು ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಂಡಿದೆ ಎಂದು ಬೇಸರವ್ಯಕ್ತಪಡಿಸಿದ್ದಾರೆ.

ಅಸಾಂವಿಧಾನಿಕ ಒತ್ತಡಗಳು ಸರ್ಕಾರದ ನಿಯಂತ್ರಣ

ಈ ಘಟನೆ ವಿರುದ್ಧ ಉನ್ನತ ಶಿಕ್ಷಣ ಸಚಿವರು, ಸಮಾಜ ಕಲ್ಯಾಣ ಸಚಿವರು, ರಾಜ್ಯಪಾಲರು ಧ್ವನಿ ಎತ್ತಿಲ್ಲ.  ಅಸಾಂವಿಧಾನಿಕ ಒತ್ತಡಗಳು ರಾಜ್ಯ ಸರ್ಕಾರವನ್ನು ನಿಯಂತ್ರಣ ಮಾಡುತ್ತಿವೆ. ರಾಷ್ಟ್ರಭಕ್ತನಂತೆ ಉದ್ದುದ್ದ ಬರೆಯುವ ಚಕ್ರವರ್ತಿ ಸೂಲಿಬೆಲೆ, ಪಠ್ಯಪುಸ್ತಕ ಕುಲಗೆಡಿಸಿದ ಚಕ್ರತೀರ್ಥ, ಶತಾವದಾನಿ ಗಣೇಶ್, ಪ್ರಮೋದ್ ಮುತಾಲಿಕ್ ಮುಂತಾದವರು ಸರ್ಕಾರವನ್ನು ನಿಯಂತ್ರಿಸುತ್ತಿದ್ದಾರೆ ಎಂದರು.

ಜೈನ್ ವಿವಿ  ಆಡಳಿತ ಮಂಡಳಿ ಪಕ್ಷ ಕ್ಷಮೆ ಕೇಳಿಲ್ಲ

ಸಂವಿಧಾನವನ್ನು ಗೇಲಿ ಮಾಡಿದರೂ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ.  ಘಟನೆ ಬಗ್ಗೆ ಜೈನ್ ವಿಶ್ವ ವಿದ್ಯಾಲಯ ಆಡಳಿತ ಮಂಡಳಿ ಕನಿಷ್ಠ ಪಕ್ಷ ಕ್ಷಮೆ ಕೇಳಿಲ್ಲ. ಸಂಸದರು, ಶಾಸಕರು ಸೊಲ್ಲೆತ್ತಿಲ್ಲ.‌ ವಿರೋಧ ಪಕ್ಷಗಳೂ ಕೂಡ ಈ ಘಟನೆಯನ್ನು ಖಂಡಿಸಿಲ್ಲ ಎಂದು ಎಂಎಲ್‌ಸಿ ಅಡಗೂರು ಹೆಚ್.ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು.

ಅಮಿತ್ ಶಾ ವಿರುದ್ಧ ವಿಶ್ವನಾಥ್ ವಾಗ್ದಾಳಿ

ಕರ್ನಾಟಕ್ಕೆ ಆಗಮಿಸಿ ಕೇಂದ್ರ ಗೃಹ ಮಂತ್ರಿಗಳು ‘ಭಾರತ ಮಾತಾ’  ದೇವಾಲಯ ಉದ್ಘಾಟಿಸಿದ್ದಾರೆ.  ಭಾರತ ಮಾತೆ ಭಾರತೀಯರ ಹೃದಯ ಮಂದಿರಗಳಲ್ಲಿ ರಾರಾಜಿಸುತ್ತಿದ್ದಾಳೆ.  ಭಾರತ ಮಾತೆ ಪೂಜಿಸುವುದನ್ನು ನಿಮ್ಮಿಂದ ಕಲಿಯಬೇಕಿಲ್ಲ.  ನಿಮ್ಮನ್ನು ನೋಡಿ ದೇವರುಗಳೇ ಹೆದರಿಕೊಂಡು ಓಡಿಹೋಗುತ್ತಾರೆ.

ಎಲ್ಲ ಕಡೆ ಭಾರತ ಮಾತೆ ದೇವಾಲಯ ಕಟ್ಟುತ್ತಾರಂತೆ.  ಸಂವಿಧಾನಕ್ಕೆ ಅಪಮಾನ ಮಾಡಿ ಭಾರತ ಮಾತೆ ಪೂಜೆ ಮಾಡುವುದನ್ನು ಹೇಳಿಕೊಡುತ್ತೀರ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ವಿರುದ್ಧ ಬಿಜೆಪಿ ಎಂಎಲ್‌ಸಿ ಅಡಗೂರು ಹೆಚ್.ವಿಶ್ವನಾಥ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

More News