ಬೆಂಗಳೂರು :ಫೆ.14: ಕರ್ನಾಟಕದಲ್ಲಿ ರೈತ ಚಳವಳಿ ಎಂದರೆ ಥಟ್ ಅಂತ ನೆನಪಿಗೆ ಬರುವುದು ಮೈಸೂರು ಭಾಗದ ರೈತ ನೇತಾರ ನಂಜುಂಡಸ್ವಾಮಿ. ಹಸಿರು ಶಾಲು ಹಾಕಿಕೊಂಡು ಬೀದಿಗಿಳಿದರೆ ಸಾವಿರಾರು ಸಂಖ್ಯೆಯಲ್ಲಿ ರೈತರು ಅವರ ಜೊತೆಗೆ ಹೆಜ್ಜೆ ಹಾಕ್ತಿದ್ದರು. ಅಂತಹ ಶ್ರೇಷ್ಠ ನಾಯಕ, ಸಮಾಜವಾದಿ ಚಿಂತಕ ಎಂ.ಡಿ.ನಂಜುಂಡಸ್ವಾಮಿ ಅವರ ಜೀವನಾಧಾರಿತ ಸಿನಿಮಾ ನಿರ್ಮಾಣಕ್ಕೆ ಕರ್ನಾಟಕದ ಚಿತ್ರೋದ್ಯಮದಲ್ಲಿ ಚರ್ಚೆಗಳು ನಡೆಯುತ್ತಿವೆ.
ಈಗಾಗಲೇ ನಂಜುಂಡಸ್ವಾಮಿ ಕುರಿತು ಮಾಡುವ ಸಿನಿಮಾದ ಚಿತ್ರಕಥೆ ಎಲ್ಲವೂ ಸಿದ್ದಗೊಂಡಿದ್ದು, ಈ ಸಿನಿಮಾ ಅನ್ನು ನಂಜುಂಡಸ್ವಾಮಿ ಅವರ ಪುತ್ರ ಪಚ್ಚೆ ನಂಜುಂಡಸ್ವಾಮಿ ನಿರ್ಮಾಣ ಮಾಡಲಿದ್ದಾರೆ. ನಟ ರಾಕ್ಷಸ ಡಾಲಿ ಧನಂಜಯ ಪ್ರೊ. ಎಂ.ಡಿ.ಎನ್ ಪಾತ್ರ ಮಾಡಲಿದ್ದಾರೆ. ಇದು ಬಹುತೇಕ ಫಿಕ್ಸ್ ಆಗಿದೆ ಎನ್ನಲಾಗಿದೆ.
ನಂಜುಂಡಸ್ವಾಮಿ ಜೀವನಾಧಾರಿತ ಸಿನಿಮಾದಲ್ಲಿ ಈ ಹಿಂದೆ ಕಿಚ್ಚ ಸುದೀಪ್, ಸಂಚಾರಿ ವಿಜಯ್ ಹಾಗೂ ಧನಂಜಯ ನಟಿಲಿದ್ದಾರೆ ಎಂಬ ಸುದ್ದಿ ಇತ್ತು. ಆದರೆ, ಕೊನೆಗೆ ಡಾಲಿ ಧನಂಜಯ ಈ ಸಿನಿಮಾ ಮಾಡಲು ಆಸಕ್ತಿ ತೋರಿಸಿದ್ದಾರೆ. ಜೊತೆಗೆ ತಾವೇ ಸಿನಿಮಾ ನಿರ್ಮಾಣ ಮಾಡಲು ಮನಸ್ಸು ಮಾಡಿದ್ದಾರಂತೆ.
ಭಾರತ ಎಂದರೆ ರೈತ. ರೈತರು ಸಾಲಗಾರರಲ್ಲ ಸರಕಾರವೇ ಬಾಕಿದಾರ. ರೈತರಿಗೆ ಸಾಲಬೇಡ: ಬೆಳೆಗಳಿಗೆ ನ್ಯಾಯವಾದ ಬೆಲೆ ಬೇಕು. ನಗರದ ಆಡಂಬರದ ಜೀವನ ನಿಲ್ಲಬೇಕು: ಹಳ್ಳಿಗಳ ಅಭಿವೃದ್ಧಿ ಬೇಕು. ಗ್ರಾಮ ಕೈಗಾರಿಕೆ ಬೇಕು. ದೊಡ್ಡ ನೀರಾವರಿ ಸಾಕು. ಸಣ್ಣ ನೀರಾವರಿ ಬೇಕು. ಹೀಗೆ ನೂರಾರು ರೈತಪರವಾದ ಘೋಷಣೆಗಳೊಂದಿಗೆ ರೈತರಲ್ಲಿ ಚೈತನ್ಯ ತುಂಬಿ, ಆತ್ಮವಿಶ್ವಾಸ ಮೂಡಿಸಿ, ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳುವುದನ್ನು ಕಲಿಸಿದ ಪ್ರೊ.ಎಂ.ಡಿ ನಂಜುಂಡಸ್ವಾಮಿ ಅವರ ಕುರಿತು ಸಿನಿಮಾ ಈ ನಾಡಿಗೆ ಅಗತ್ಯವಿದೆ ಎಂದು ವಿಶ್ಲೇಷಿಸಲಾಗಿದೆ.

1965 ರಲ್ಲಿ ಹಸಿರು ಕ್ರಾಂತಿಯನ್ನು ಪರಿಚಯಿಸಿದಾಗ ಈ ದೇಶದಲ್ಲಿ ವ್ಯವಸಾಯ ನಡೆಯುತ್ತಿದ್ದ ಭೂಮಿ ಶೇ. 10 ಭಾಗಕ್ಕೆ ಕೂಡ ನೀರಾವರಿ ವ್ಯವಸ್ಥೆ ಇರಲಿಲ್ಲ. ಮಳೆ ನೀರಿನಿಂದ ಬೆಳೆತೆಗೆದ ಶೇ.90 ರಷ್ಟು ರೈತರೇ ಆಹಾರ ಸ್ವಾವಲಂಬನೆ ಸಾಧಿಸಲು ನೆರವಾದವರು. ಅದು ಇವತ್ತಿಗೂ ಸತ್ಯ. ಆದರೆ ನದಿ ಪ್ರದೇಶಗಳ ಅಂಕಿ ಅಂಶಗಳನ್ನು ಬಳಸಿ ಇವನ್ನು ಹಸಿರು ಕ್ರಾಂತಿ ಪ್ರದೇಶಗಳೆಂದು ಪ್ರಚಾರ ಮಾಡಲಾಗುತ್ತಿದೆ. ಸಾಂಪ್ರದಾಯಿಕ ಕೃಷಿ ಪದ್ಧತಿ ಮತ್ತು ದೇಸಿ ಬೀಜಗಳ ಬಳಕೆ ಮಾಡುತ್ತಾ ಪರ್ಯಾಯ ಹುಡುಕಬೇಕೆ ಹೊರತು ಏಕರೂಪಿ ಸಂಸ್ಕೃತಿಯನ್ನು ಪುನಾರವರ್ತಿಸುವ ಹಾಗೂ ರಾಸಾಯನಿಕ ತೀವ್ರವಾಗಿರುವ ತಂತ್ರಜ್ಞಾನವನ್ನಲ್ಲ ಎಂದು ಚಳವಳಿ ಕಟ್ಟಿದ ನಾಡಿನ ಮೇಧಾವಿ ಹೋರಾಟಗಾರ ನಂಜುಂಡಸ್ವಾಮಿ.

ನಟ ಡಾಲಿ ಧನಂಜಯ್ ಟಿವಿಯೊಂದರ ಸಂದರ್ಶನದಲ್ಲಿ ಎಂ.ಡಿ.ಎನ್ ಅವರ ಕತೆಗಳನ್ನು ಕೇಳುತ್ತಿದ್ದ ಹಾಗೆಯೇ ನಾನು ಬಹಳಷ್ಟು ಚಕಿತನಾದೆ. ಅಂತಹ ಒಬ್ಬ ಧೀಮಂತ ನಾಯಕ, ಕ್ರಾಂತಿಕಾರಿ, ಪ್ರೊಫೆಸರ್ ರಾಜ್ಯದ ರೈತರನ್ನೆಲ್ಲಾ ಒಂದು ಮಾಡಿದರೆ ಸರ್ಕಾಗಳೇ ಹೆದರುತ್ತಿದ್ದವು. ಅವರ ಮಾತಿನ ಶೈಲಿ, ಅವರ ನಡತೆ ಎಲ್ಲವೂ ಭಿನ್ನವಾಗಿದ್ದವು. ಅಂತಹ ವ್ಯಕ್ತಿಯ ಬಯೋಪಿಕ್ ನಲ್ಲಿ ನಟಿಸುವುದು ನನಗೆ ಸಿಕ್ಕುವ ಅವಕಾಶಗಳಲ್ಲಿ ಬಹಳ ಅಪರೂಪದ್ದು ಎಂದಿದ್ದರು .

ನಂಜುಂಡಸ್ವಾಮಿ ಅವರ ಜೀವನಾಧಾರಿತ ಸಿನಿಮಾದಲ್ಲಿ ಅವರ ಪತ್ನಿಯ ಪಾತ್ರವನ್ನು ಸ್ಯಾಂಡಲ್ ವುಡ್ ಕ್ವೀನ್ ರಮ್ಯ ನಟಿಸಲಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಕೂಡ ಪಚ್ಚೆ ನಂಜುಂಡಸ್ವಾಮಿ ಜೊತೆ ಧನಂಜಯ ಜೊತೆ ಚರ್ಚೆ ನಡೆಸಿದ್ದಾರಂತೆ. ಈ ಸಿನಿಮಾ ಅನ್ನು ಕನ್ನಡದ ಖ್ಯಾತ ನಿರ್ದೇಶಕ ಮಂಸೋರೆ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿದೆ.




