ಬೆಂಗಳೂರು. ಮಾ.1: ಶೇ 40% ಸಂಬಳ ಹೆಚ್ಚಳ ಮಾಡಬೇಕೆಂದು ಇಂದಿನಿಂದ ಸರ್ಕಾರಿ ನೌಕರರ ಅನಿರ್ಧಿಷ್ಟತಾವಧಿ ಮುಷ್ಕರ ಪ್ರಾರಂಭವಾಗಿದ್ದು, ರಾಜ್ಯಾದ್ಯಂತ ಸರ್ಕಾರಿ ಕಛೇರಿಗಳು ಬಂದ್ ಆಗಿವೆ. ಸರ್ಕಾರಿ ನೌಕರರ ಬಂದ್ ಗೆ ಎಲ್ಲಾ ಇಲಾಖೆಗಳಿಂದಲೂ ಬೆಂಬಲ ವ್ಯಕ್ತವಾಗಿದ್ದು, ಸುಮಾರು 10 ಲಕ್ಷ ಮಂದಿ ಗೈರಾಗಲಿದ್ದಾರೆ ಎನ್ನಲಾಗಿದೆ.

ನಿನ್ನೆ ರಾತ್ರಿ ಸಿಎಂ ಬೊಮ್ಮಾಯಿ ಹಾಗೂ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಷಡಕ್ಷರಿ ಜೊತೆ ಸಭೆ ನಡೆಸಲಾಯಿತು.
೪೦ ಪರ್ಸೆಂಟ್ ಸಂಬಳ ಹೆಚ್ಚಿಸುವುದು ಸೇರಿದಂತೆ ನಾಳೆಯೇ ಮಧ್ಯಂತರ ವರದಿ ತರಿಸಿ ೭ನೇ ವೇತನ ಆಯೋಗ ಜಾರಿ ಮಾಡುವಂತೆ ಸಿಎಂಗೆ ಒತ್ತಡ ಹೇರಿದರು. ಈ ವೇಳೆ ಮಾತನಾಡಿದ ಸಿಎಂ, ಓಪಿಎಸ್ ಬಗ್ಗೆ ಸಧ್ಯಕ್ಕೆ ಮಾತನಾಡುವುದು ಬೇಡ. ೪೦ ಪರ್ಸೆಂಟ್ ಯಾವುದೇ ಕಾರಣಕ್ಕೂ ಆಗೋದಿಲ್ಲ. ಮಧ್ಯಂತರ ವರದಿ ಆದಷ್ಟು ಬೇಗ ತರಿಸಲು ನಾನು ಸಿದ್ದನಿದ್ದೇನೆ. ಆದ್ರೆ ೭ ರಿಂದ ೮ ಪರ್ಸೆಂಟ್ ಅಷ್ಟೇ ಹೆಚ್ಚಳ ಮಾಡಲು ನನ್ನಿಂದ ಸಾಧ್ಯ. ಹಣಕಾಸು ಇಲಾಖೆಯಿಂದಲೂ ವರದಿ ಪಡೆಯುತ್ತೇನೆ ಎಂದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ನೌಕರರ ಮನವೊಲಿಸಲು ಸಚಿವ ಗೋವಿಂದ್ ಕಾರಜೋಳ, ಆರ್.ಅಶೋಕ್ ರಿಂದ ಪ್ರಯತ್ನ ಮಾಡಿದರೂ ಸಭೆ ವಿಫಲವಾದ ಕಾರಣ ಇಂದು ಮುಷ್ಕರ ಪ್ರಾರಂಭವಾಗಿದೆ.

ಹಣಕಾಸು ಇಲಾಖೆ ಜೊತೆಗೆ ಸಿಎಂ ಮೀಟಿಂಗ್

7 ನೇ ವೇತನ ಆಯೋಗ ಜಾರಿ ಮಾಡುವಂತೆ ಬಿಗಿ ಪಟ್ಟು ಹಿನ್ನಲೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಹಣಕಾಸು ಇಲಾಖೆ ಅಧಿಕಾರಿಗಳ ಜೊತೆಗೆ ಸಭೆ ನಡೆಸಲಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಸರ್ಕಾರಿ ನೌಕರರು ಪ್ರತಿಭಟನೆ ನಡೆಸಿದರೆ, ಸರ್ಕಾರಕ್ಕೆ ಡ್ಯಾಮೇಜ್ ಆಗಲಿದೆ. ಹೀಗಾಗಿ ಸರ್ಕಾರಿ ನೌರರನ್ನು ಸಮಾಧಾನ ಮಾಡಲು ಸಾಕಷ್ಟು ಮಾತುಕತೆ ನಡೆಸಿದರೂ ಪ್ರಯೋಜನ ಬಾರದ ಕಾರಣ ಇಂದು ಹಣಕಾಸು ಇಲಾಖೆ ಅಧಿಕಾರಿಗಳ ಜೊತೆಗೆ ಸಿಎಂ ಸಭೆ ನಡೆಸಿ, ಅಧಿಕಾರಿಗಳ ಸಲಹೆ ಪಡೆದು ನಿರ್ಧಾರ ಪ್ರಕಟಿಸಲಿದ್ದಾರೆ.




