ಹಾವೇರಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆಯ ಪುರಸಭೆ ಅಧಿಕಾರಿಗಳ ಲಂಚದ ದಾಹಕ್ಕೆ ರೊಚ್ಚಿಗೆದ್ದ ಅನ್ನದಾತ, ತನ್ನ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.
ಲಂಚ ಕೇಳಿದ ಅಧಿಕಾರಿಗಳ ಬಳಿ ರೈತ ತನ್ನ ಅಸಹಾಯಕತೆ ತೋಡಿಕೊಂಡಿದ್ದು, ಸಾರ್ ನನ್ನ ಬಳಿ ನೀವೂ ಕೇಳಿದಷ್ಟು ಕೋಡೊಕೆ ಹಣ ಇಲ್ಲಾ, ಅದರ ಬದಲಾಗಿ ನನ್ನ ಒಂದು ಎತ್ತು ತೆಗೆದುಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ. ಅದರಂತೆಯೇ ತಮ್ಮ ಎತ್ತು ಹಾಗೂ ಬಾರಕೋಲು ಸಮೇತ ಪುರಸಭೆಗೆ ಬಂದ ಅನ್ನದಾತ, ಅದನ್ನು ನೀಡಲು ಮುಂದಾಗಿದ್ದಾನೆ.
ಮನೆ ಖಾತೆ ಬದಲಾಯಿಸಲು 25,000 ಸಾವಿರ ರೂಪಾಯಿ ಹಣ ಕೊಡುವಂತೆ ಪುರಸಭೆ ಅಧಿಕಾರಿ ಕೇಳಿದ್ದರು. ಹಾವೇರಿ ಜಿಲ್ಲೆಯ ಸವಣೂರಿನ ಪುರಸಭೆಯ ಅಧಿಕಾರಿ ಯಲ್ಲಪ್ಪ ರಾಣೋಜಿ ಎಂಬ ರೈತನಿಗೆ ಲಂಚ ಕೇಳಿದ್ದರು. ಈ ಹಿಂದೆ ಲಂಚ ಸ್ವೀಕರಿಸಿಕೊಂಡಿದ್ದ ಅಧಿಕಾರಿ ವರ್ಗಾವಣೆಗೊಂಡಿದ್ದರು ಆದರೆ ಕೆಲಸ ಮಾತ್ರ ಆಗಿರಲಿಲ್ಲ.

ಆದ್ದರಿಂದ ಹೊಸದಾಗಿ ಬಂದಿದ್ದ ಅಧಿಕಾರಿಯೂ ಕೂಡ ಮತ್ತೆ 25000 ಸಾವಿರ ರೂಪಾಯಿ ಹಣ ಕೊಡಿ ಎಂದು ಡಿಮ್ಯಾಂಡ್ ಮಾಡಿದ್ದರು. ದುಡ್ಡು ಕೊಡುವತನಕ ಎತ್ತು ಇಟ್ಕೊಳಿ ಎಂದು ಪುರಸಭೆ ಮುಂದೆ ರೈತ ಬಂದಿದ್ದರು. ರೈತ ಯಲ್ಲಪ್ಪನ ನಡೆಗೆ ದಂಗಾದ ಅಧಿಕಾರಿಗಳು, ರೈತರ ಮನವೊಲಿಸಿ ವಾಪಾಸ್ಸು ಕಳುಹಿಸಿದ್ದಾರೆ.

ಆದರೆ, ಮನೆ ಖಾತೆಯನ್ನು ಶೀಘ್ರದಲ್ಲೇ ಮಾಡಿ ಕೊಡುವ ಭರವಸೆ ನೀಡಿ ರೈತನನ್ನು ವಾಪಾಸ್ಸು ಕಳುಹಿಸಿದ್ದಾರೆ.ಲಂಚ ಕೇಳಿದ ಅಧಿಕಾರಿಗೆ ಸರಿಯಾಗಿ ಬುದ್ಧಿ ಕಲಿಸಿದ್ದಾರೆಂದು ಯಲ್ಲಪ್ಪನ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.




