OKKALIGAS DISRESPECT BY BJP: ರಾಜ್ಯ ಒಕ್ಕಲಿಗರಿಗೆ ಬಿಜೆಪಿಯಿಂದ ಅಗೌರವ: ಸ್ವಾಮೀಜಿಯವರ ಮಹಾದ್ವಾರ ಮುಚ್ಚಿ ನಕಲಿ ಉರೀಗೌಡ ನಂಜೇಗೌಡರ ಮಹಾದ್ವಾರ ಹಾಕಿದ ಉದ್ದೇಶವೇನು: ಜೆಡಿಎಸ್ ಆಕ್ರೋಶ

ಬೆಂಗಳೂರು : ಮಂಡ್ಯದಲ್ಲಿ ಪ್ರಧಾನಿ ರೋಡ್ ಶೋ ಸಂದರ್ಭದಲ್ಲಿ ಹಾಕಲಾಗಿದ್ದ ಒಕ್ಕಲಿಗರ ಪರಮಪೂಜ್ಯ ಗುರು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಹೆಸರಿನ ಮಹಾದ್ವಾರವನ್ನು ಮುಚ್ಚಿ, ಅವರ ಜಾಗದಲ್ಲಿ ಕಾಲ್ಪನಿಕ ಪಾತ್ರಗಳಾದ ಉರೀಗೌಡ ಮತ್ತು ನಂಜೇಗೌಡರ ಹೆಸರನ್ನು ಹಾಕಿದ್ದ ಉದ್ದೇಶವೇನು? ಎಂದು ಜೆಡಿಎಸ್, ಬಿಜೆಪಿಯನ್ನು ಪ್ರಶ್ನಿಸಿದೆ.

ಟ್ವೀಟರ್ ನಲ್ಲಿ ಬಿಜೆಪಿ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಜೆಡಿಎಸ್, ಇಂತಹ ಚಿಲ್ಲರೆ, ದ್ವೇಷ ತುಂಬಿದ ನಡೆಯಿಂದ ಒಕ್ಕಲಿಗರ ಮನ ಗೆಲ್ಲಬಹುದು ಎಂಬ ಭ್ರಮೆಯಲ್ಲಿದ್ದರೆ ಅದು‌ ಶತಮೂರ್ಖತನ ಎಂದು ಟೀಕಿಸಿದೆ.
ಜೆಡಿಎಸ್ ಮಾಡಿರುವ ಟ್ವೀಟ್ನ ಸಂಪೂರ್ಣ ವಿವರ ಇಲ್ಲಿದೆ.
ಕಪೋಲ ಕಲ್ಪಿತ ಪಾತ್ರಗಳನ್ನು ಸೃಷ್ಟಿಸಿ,ಕೋಮು ದ್ವೇಷ ಹರಡಿ, ಜನರ ತಲೆಯಲ್ಲಿ ವಿಷ ಬೀಜ ಬಿತ್ತಿ ಹೆಮ್ಮರವಾಗಿ ಬೆಳೆಯಲು ತನು-ಮನ-ಧನವನ್ನೆಲ್ಲ ಅರ್ಪಿಸುವ ಪಕ್ಷ ಬಿಜೆಪಿ.ಟಿಪ್ಪು ಸುಲ್ತಾನನನ್ನು ಕೊಂದವರು ಎನ್ನಲಾಗುವ ಕಾಲ್ಪನಿಕ ಪಾತ್ರಗಳಾದ ಉರಿಗೌಡ, ನಂಜೇಗೌಡ ಎಂಬ ಹೆಸರುಗಳನ್ನು ಪ್ರಧಾನಿ ರೋಡ್ ಶೋ ನಡೆಸಿದ ಮಹಾದ್ವಾರಕ್ಕೆ ಇಟ್ಟಿದ್ದು ಏಕೆ?
ಮೇಲಾಗಿ ಮಹಾದ್ವಾರಕ್ಕೆ ಇದ್ದ ಒಕ್ಕಲಿಗರ ಪರಮಪೂಜ್ಯ ಗುರು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಹೆಸರನ್ನು ಮುಚ್ಚಿ, ಅವರ ಜಾಗದಲ್ಲಿ ಈ ಕಾಲ್ಪನಿಕ ಪಾತ್ರಗಳ ಹೆಸರನ್ನು ಹಾಕಿದ್ದ ಉದ್ದೇಶವೇನು? ಇಂತಹ ಚಿಲ್ಲರೆ, ದ್ವೇಷ ತುಂಬಿದ ನಡೆಯಿಂದ ಒಕ್ಕಲಿಗರ ಮನ ಗೆಲ್ಲಬಹುದು ಎಂಬ ಭ್ರಮೆಯಲ್ಲಿದ್ದರೆ ಅದು‌ ಶತಮೂರ್ಖತನ.

ಹೆಸರು ಬದಲಿಸಿದ ನಂತರ ಸಾರ್ವಜನಿಕರು, ಸ್ಥಳೀಯರು, ಹಾಗೂ ಪ್ರಗತಿಪರ ಸಂಘನೆಗಳಿಂದ ವಿರೋಧ ವ್ಯಕ್ತವಾಗಿದ್ದೆ ತಡ, ಜಿಲ್ಲಾಡಳಿತವು ಈ ಹೆಸರನ್ನು ತೆರವುಗೊಳಿಸಿದೆ. ಇಂತಹ ನಿರ್ಲಜ್ಜಗೇಡಿ ನಡೆಯು ಇಡೀ ರಾಜ್ಯ @BJP4Karnataka ಸರ್ಕಾರದ ನೀಚ ರಾಜಕಾರಣಕ್ಕೆ ಹಿಡಿದ ಕನ್ನಡಿ. ಸುಳ್ಳುಗಳಿಗೆ ಆಯಸ್ಸು ಬಹಳ ಕಮ್ಮಿ.
ಮಾಂಸ ತಿಂದು ದೇವಸ್ಥಾನಕ್ಕೆ ತೆರಳಿದ @CTRavi_BJP ಯವರೆ, ಉರಿಗೌಡ, ನಂಜೇಗೌಡನ ಹೆಸರಲ್ಲಿ ಶಾಶ್ವತ ದ್ವಾರ ನಿರ್ಮಿಸುತ್ತೀರಾ? ನಾಚಿಕೆಯಾಗಬೇಕು ನಿಮಗೆ. ಕೊಳಕು ಮಟ್ಟದ ರಾಜಕಾರಣವನ್ನೇ ಉಸಿರಾಗಿಸಿಕೊಂಡಿರುವ ನಿಮಗೆ ಪ್ರಧಾನಿಯವರ ಗುಲಾಮಗಿರಿ ಮಾಡುವ ಅನಿವಾರ್ಯತೆ ಇದೆ. ಒಕ್ಕಲಿಗರು ಸ್ವಾಭಿಮಾನಕ್ಕೆ ಹೆಸರಾದವರು.
ಇಡೀ ಒಕ್ಕಲಿಗ ಸಮುದಾಯವನ್ನ ಅಪಹಾಸ್ಯಕ್ಕೆ ಗುರಿ ಮಾಡುವ ಮೂಲಕ ಏನನ್ನು ಸಾಧಿಸಲು ರಾಜ್ಯ @BJP4Karnataka ಪಕ್ಷ ಹೊರಟಿದೆ ಎಂಬುದು ಸ್ಪಷ್ಟ. ಅವರ ಈ ಧ್ರುವೀಕರಣದ ರಾಜಕೀಯಕ್ಕೆ ಪ್ರಧಾನಿ @narendramodi ಯವರನ್ನು ಬಳಸಿದರೆ ಅದಕ್ಕೆ ಹೆಚ್ಚು ಪ್ರಚಾರ ಸಿಗುತ್ತದೆ ಎಂಬ ಕಲ್ಪನೆ ಅವರಿಗಿದೆ. ಅದರ ಭಾಗವಾಗಿಯೇ ಈ ಪ್ರಯೋಗ.
ಅಥವಾ ಈ ಕುತಂತ್ರಿ ರಾಜಕಾರಣ ನಡೆಸಲು ಪ್ರಧಾನಿ @narendramodi ಯವರೆ ರಾಜ್ಯ @BJP4Karnatakaಗೆ ನಿರ್ದೇಶನ ನೀಡಿದರೆ? ಆರ್ ಎಸ್ ಎಸ್ ಪ್ರಣೀತ ಸಿದ್ಧಾಂತದ ಆಧಾರದಲ್ಲಿ ದ್ವೇಷವನ್ನು ಹರಡಲು ಒಕ್ಕಲಿಗ ಸಮುದಾಯವನ್ನು ಕೊಲೆಗಡುಕರು ಎಂದು ಚಿತ್ರಿಸಿ ಅವಮಾನ ಮಾಡಲಾಗಿದೆ.

ತಾಳ್ಮೆ, ಸ್ವಾಭಿಮಾನ, ಸ್ವಂತಿಕೆ, ಸೇವೆ, ಸೌಹಾರ್ದತೆ ಮತ್ತು ಸಮನ್ವಯ ತತ್ವಗಳನ್ನು ಅಳವಡಿಸಿಕೊಂಡು ಬೆಳೆದಿದ್ದು ಈ ನಾಡಿನ ಒಕ್ಕಲಿಗ ಸಮುದಾಯದ ಹೆಗ್ಗಳಿಕೆ. ದ್ವೇಷ ಮತ್ತು ಹಸಿಸುಳ್ಳುಗಳನ್ನು ಅವರೆಂದು ಪೋಷಿಸಿ, ಬೆಳೆಸಿದವರಲ್ಲ. ಒಂದೀಡಿ ಸಮುದಾಯವನ್ನು ಇಷ್ಟು ನಿಕೃಷ್ಟವಾದ ರಾಜಕಾರಣಕ್ಕೆ ಇಳಿಸಿ, ಬಳಸಬಹುದು ಎಂಬ ಚಿಂತನೆಯೇ ಹೊಲಸು.
ಇಂತಹ ಚಿಲ್ಲರೆ ರಾಜಕಾರಣವು ಈ ಸಲದ ಚುನಾವಣೆಯಲ್ಲಿ ಯಾವ ಫಲವನ್ನೂ ನೀಡುವುದಿಲ್ಲ. ನಾಡಿನ ಒಕ್ಕಲಿಗ ಸಮುದಾಯ ಬಹಳ ಪ್ರಬುದ್ಧವಾಗಿ ಈ ಮಹಾ ಸುಳ್ಳಿನ ರಾಜಕಾರಣವನ್ನು ಎದುರಿಸಲಿದೆ. ಚುನಾವಣೆಯಲ್ಲಿ ರಾಜ್ಯ ಬಿಜೆಪಿಗೆ ಕಪಾಳಮೋಕ್ಷ ಕಟ್ಟಿಟ್ಟಬುತ್ತಿ. ಸತ್ಯ, ಸಹಬಾಳ್ವೆ ಮತ್ತು ವಿಶ್ವ ಮಾನವ ತತ್ವವಷ್ಟೇ ಗೆಲ್ಲಲಿದೆ.

More News

You cannot copy content of this page