ಚಾಮರಾಜನಗರ: ಮೈಸೂರಿಗೆ ಬಂದಿಳಿದಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವನ್ಯಜೀವಿ ಸಫಾರಿ ನಡೆಸಲಿದ್ದಾರೆ.
ಇಂದು ಬೆಳಗ್ಗೆ 7.30 ರ ಸುಮಾರಿಗೆ ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿ ಸಮೀಪ ನಿರ್ಮಿಸಿರುವ ಹೆಲಿಪ್ಯಾಡ್ ನಲ್ಲಿ ಬಂದಿಳಿಯಲಿರುವ ಪಿಎಂ ಬಳಿಕ ಎಸ್ ಪಿಜಿ ಭದ್ರತೆಯೊಂದಿಗೆ ಸಫಾರಿ ವಾಹನವೇರಿ ಕಾಡಲ್ಲಿ ಸುತ್ತಾಡಲಿದ್ದಾರೆ.

ಅಂಚೆ ಚೀಟಿ ಬಿಡುಗಡೆ, ಬಂಡೀಪುರದಲ್ಲಿ ಹಳೇ ಸಫಾರಿ ಕೇಂದ್ರದ ಬಳಿ ಇರುವ ಹುತಾತ್ಮ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸುವರು ಎಂದು ತಿಳಿದುಬಂದಿದ್ದು ಸರಿಸುಮಾರು 15 ಕಿಮೀ ಸಫಾರಿ ನಡೆಸಲಿದ್ದಾರೆ.
ಬೋಳಗುಡ್ಡ ಎಂಬ ಎತ್ತರದ ಪ್ರದೇಶಕ್ಕೆ ಏರಿ ಇಡೀ ಅರಣ್ಯ ಪ್ರದೇಶವನ್ನು ಕಣ್ತುಂಬಿಕೊಳ್ಳಲ್ಲಿರುವ ಮೋದಿ ಕಳ್ಳಬೇಟೆ ತಡೆ ಶಿಬಿರಕ್ಕೆ ಭೇಟಿ ಕೊಡುವ ಸಾಧ್ಯತೆ ಇದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ
ಎಲ್ಲಾ ರೀತಿಯ ವಾಹನಗಳ ಸಂಚಾರವೂ ಬಂದ್ ಆಗಿದ್ದು ತಮಿಳುನಾಡು ಮತ್ತು ಕರ್ನಾಟಕ ಪೊಲೀಸರು ಭಾರೀ ಭದ್ರತೆ ಕೈಗೊಂಡಿದ್ದಾರೆ. ಮೈಸೂರಿನಲ್ಲಿ ಹುಲಿ ಗಣತಿ ಅಂಕಿ-ಅಂಶ ಬಿಡುಗಡೆ ಮಾಡಲಿರುವ ಮೋದಿ ಈ ಬಾರಿ ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕವೇ ನಂ1 ಹಾಗೂ ಹುಲಿ ಸಂರಕ್ಷಿತ ಪ್ರದೇಶಗಳ ಟಾಪ್ ರ್ಯಾಂಕಿನಲ್ಲಿ ಬಂಡೀಪುರ ನಂ 1 ಬರುವ ನಿರೀಕ್ಷೆ ಇದೆ.
ಮೋದಿ ಸಫಾರಿ ವೇಳೆ ಕೇಂದ್ರ ಅರಣ್ಗ ಸಚಿವ ಭೂಪೇಂದ್ರ ಯಾದವ್, ಅರಣ್ಯಾಧಿಕಾರಿಗಳು ಭಾಗಿಯಾಗಲಿದ್ದಾರೆ.