ಬೆಂಗಳೂರು: ಕಾಂಗ್ರೆಸ್ಸಿನ ರಾಷ್ಟ್ರೀಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರು ನರಗುಂದದಲ್ಲಿ ಮೋದಿಯವರನ್ನು ವಿಷದ ಹಾವೆಂದು ಕರೆಯುವ ಮೂಲಕ ತೀರಾ ತುಚ್ಛವಾಗಿ ಮಾತನಾಡಿದ್ದಾರೆ. ದೇಶಕ್ಕಾಗಿ ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿರುವ ನಾಯಕನನ್ನು ಈ ರೀತಿ ಕರೆದಿರುವ ಕಾಂಗ್ರೆಸ್ ಕೂಡಲೇ ಜನರ ಕ್ಷಮೆ ಕೇಳಬೇಕು ಎಂದು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಆಗ್ರಹಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಇಡೀ ಜಗತ್ತೇ ತನ್ನತ್ತ ತಿರುಗಿ ನೋಡುವ ವಿಶ್ವ ನಾಯಕರು. ರಾಜಕೀಯೇತರವಾಗಿ ಮೋದಿಯವರು 140 ಕೋಟಿ ಭಾರತೀಯರ ಪ್ರಧಾನ ಸೇವಕರು. ಇಂತಹ ಜನ ಮೆಚ್ಚಿದ ಪ್ರಧಾನಮಂತ್ರಿಯವರನ್ನು ಚುನಾವಣೆಯಲ್ಲಿ ಎದುರಿಸಲಾಗದ ಕಾಂಗ್ರೆಸ್ಸಿಗರು ಹತಾಶೆಯಿಂದ ತುಚ್ಚ ಭಾμÉಗಳಲ್ಲಿ ಅವಮಾನ ಮಾಡುತ್ತಾ ಬಂದಿದ್ದಾರೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸೋನಿಯಾ ಗಾಂಧಿಯವರು ಮೋದಿಯವರನ್ನು ಸಾವಿನ ವ್ಯಾಪಾರಿ ಎಂದಿದ್ದರು. ಅಲ್ಲದೆ ಮೋದಿಯವರನ್ನು ಚಾಯ್ ವಾಲ ಎಂದಿದ್ದರು. ರಣದೀಪ್ ಸಿಂಗ್ ಸುರ್ಜೇವಾಲ ಮೋದಿಯವರ ಸಮಾದಿಯ ಬಗ್ಗೆ ಮಾತನಾಡಿದ್ದರು. ಮೋದಿಯವರ ಜಾತಿಗೆ ರಾಹುಲ್ ಗಾಂಧಿ ಅವಮಾನ ಮಾಡಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಸೋಲಿನ ಮತ್ತು ನೆಲಕಚ್ಚುವ ಭೀತಿ ಹೆಚ್ಚಾಗಿದೆ. ಅದೇ ಕಾರಣಕ್ಕೆ ಈ ರೀತಿ ಮಾತನಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ಸಿಗರ ಹೇಳಿಕೆಗಳನ್ನು ಗಮನಿಸಿದರೆ ಅದು ವಿನಾಶಕಾಲೇ ವಿಪರೀತ ಬುದ್ಧಿ ಎಂಬಂತಿದೆ ಎಂದಿದ್ದಾರೆ. ಕಾಂಗ್ರೆಸ್ ಪಕ್ಷವು ಪಂಚರಾಜ್ಯಗಳ ಚುನಾವಣೆ, ಈಶಾನ್ಯ ರಾಜ್ಯಗಳ ಚುನಾವಣೆಯಲ್ಲಿ ನೆಲ ಕಚ್ಚಿದೆ. ಲೋಕಸಭೆಯಲ್ಲಿ ಅಧಿಕೃತವಾಗಿ ವಿರೋಧ ಪಕ್ಷದ ಸ್ಥಾನವನ್ನೂ ಕಳೆದುಕೊಂಡಿದೆ. ಜನತೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ಸಿಗರಿಗೆ ಜನಮತದ ಮೂಲಕ ಪಾಠ ಕಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.




