COMPLAINT AGAINST PUTTANNA: ರಾಜಾಜಿನಗರ ಕಾಂಗ್ರೆಸ್‌ ಅಭ್ಯರ್ಥಿ ಪುಟ್ಟಣ್ಣ ವಿರುದ್ಧ ಚುನಾವಣಾ ಆಯೋಗಕ್ಕೆ ಎಎಪಿ ದೂರು, ಇಡಿ ತನಿಖೆಗೆ ಆಗ್ರಹ

ಬೆಂಗಳೂರಿನ ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಅಕ್ರಮ ಹಣ ವರ್ಗಾವಣೆ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಆರೋಪಿಸಿ ಆಮ್‌ ಆದ್ಮಿ ಪಾರ್ಟಿಯ ಬೆಂಗಳೂರು ನಗರಾಧ್ಯಕ್ಷ ಡಾ. ಸತೀಶ್‌ ನೇತೃತ್ವದ ನಿಯೋಗವು ಬುಧವಾರ ಚುನಾವಣಾ ಆಯೋಗಕ್ಕೆ ದೂರು ನೀಡಿತು.

ಮಾಧ್ಯಮಗಳ ಜೊತೆ ಮಾತನಾಡಿದ ಡಾ. ಸತೀಶ್‌, “ರಾಜಾಜಿನಗರದಲ್ಲಿ ಚುನಾವಣಾ ಅಕ್ರಮ ಅವ್ಯಾಹತವಾಗಿ ನಡೆಯುತ್ತಿದೆ. ಮತದಾನದ ದಿನ ಸಮೀಪಿಸುತ್ತಿದ್ದಂತೆ, ಭಾರೀ ಪ್ರಮಾಣದ ಅಕ್ರಮ ಹಣವು ವರ್ಗಾವಣೆಯಾಗುತ್ತಿದೆ. ಚುನಾವಣಾ ನೀತಿ ಸಂಹಿತೆ ಕಾಯಿದೆ 1961, ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ, ಜನಪ್ರತಿನಿಧಿಗಳ ಕಾಯಿದೆ 1951 ಮುಂತಾದ ಅನೇಕ ಕಾನೂನು ಉಲ್ಲಂಘನೆಯಾಗುತ್ತಿದೆ. ಜಾರಿ ನಿರ್ದೇಶನಾಲಯವು ಶೀಘ್ರವೇ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು” ಎಂದು ಆಗ್ರಹಿಸಿದರು.

“ರಾಜಾಜಿನಗರದ ಕಾಂಗ್ರೆಸ್‌ ಅಭ್ಯರ್ಥಿ ಪುಟ್ಟಣ್ಣ, ಮಾಜಿ ಉಪಮೇಯರ್‌ ರಂಗಣ್ಣ ರಘುವೀರ್‌, ಪದ್ಮರಾಜ್‌, ವಿಜಯಕುಮಾರ್‌, ಕೃಷ್ಣಮೂರ್ತಿ, ಯಶಸ್‌, ರವಿ, ಗಿಳಿ ವೆಂಕಟೇಶ್‌, ಮುನಿರಾಜ್‌, ಪಳನಿಕಾಂತ್‌, ರಾಜಣ್ಣ ವಿರುದ್ಧ ದೂರು ನೀಡಲಾಗಿದೆ. ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ, ಜಂಟಿ ಮುಖ್ಯ ಚುನಾವಣಾಧಿಕಾರಿ ಮತ್ತು ರಾಜಾಜಿನಗರದ ಆರ್‌ಒಗೆ ದೂರು ಸಲ್ಲಿಸಲಾಗಿದೆ. ಇದೊಂದು ಗಂಭೀರ ಪ್ರಕರಣವಾಗಿದ್ದು, ಚುನಾವಣಾ ಪ್ರಕ್ರಿಯೆಯಿಂದ ಕಾಂಗ್ರೆಸ್‌ ಅಭ್ಯರ್ಥಿ ಪುಟ್ಟಣ್ಣರವರನ್ನು ಅನರ್ಹ ಮಾಡಬೇಕೆಂದು ಆಗ್ರಹಿಸಿದ್ದೇವೆ” ಎಂದು ಡಾ. ಸತೀಶ್‌ ತಿಳಿಸಿದರು.

More News