ಹುಬ್ಬಳ್ಳಿ: “ನನ್ನ ಹತ್ತಿರ ದುಡ್ಡಿಲ್ಲವಾ? ನಾನು ಯಾವತ್ತೂ ದುಡ್ಡಿಗಾಗಿ ಕೆಲಸ ಮಾಡಿದವನು ಅಲ್ಲ.” ಹೀಗೆಂದು ನಟ ಶಿವರಾಜ್ ಕುಮಾರ್ ಪ್ರಶಾಂತ್ ಸಂಬರಗಿ ಟೀಕೆಗೆ ಉತ್ತರ ನೀಡಿದ್ದಾರೆ.
“ದುಡ್ಡಿಗಾಗಿ ಕಾಂಗ್ರೆಸ್ ಪಕ್ಷದ ಪ್ರಚಾರಕ್ಕೆ ಹೋಗಿದ್ದಾರೆ ಎನ್ನುವ ಅರ್ಥದಲ್ಲಿ ಬಿಗ್ ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಶಿವಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
‘ಇಂತಹ ಮಾತುಗಳನ್ನು ಸಹಿಸಿಕೊಳ್ಳಲು ಆಗುವುದಿಲ್ಲ. ಕೂಡಲೇ ಆ ಮಾತುಗಳನ್ನು ಅವರು ವಾಪಸ್ಸು ಪಡೆಯಬೇಕು. ನನ್ನ ಹತ್ತಿರ ದುಡ್ಡಿಲ್ಲವಾ? ನಾನು ಯಾವತ್ತೂ ದುಡ್ಡಿಗಾಗಿ ಕೆಲಸ ಮಾಡಿದವನು ಅಲ್ಲ. ಇಂತಹ ಮಾತುಗಳು ಅವರಿಗೆ ಶೋಭೆ ತರುವುದಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಶಿವರಾಜ್ ಕುಮಾರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಿರುವ ಹಿನ್ನೆಲೆ ಮೊನ್ನೆಯಷ್ಟೇ ಸಂಸದ ಪ್ರತಾಪ್ ಸಿಂಹ ಟೀಕಿಸಿದ್ದರು. ನಂತರ ‘ನಾನು ಡಾ.ರಾಜ್ ಕುಟುಂಬ ಅಭಿಮಾನಿ’ ಎಂದು ಹೇಳುವ ಮೂಲಕ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾದರು.
ಇದೀಗ ಬಿಜೆಪಿ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಪ್ರಶಾಂತ್ ಸಂಬರಗಿ ಕೂಡ ಆಕ್ಷೇಪಾರ್ಹ ಕಾಮೆಂಟ್ ಮಾಡಿದ್ದಾರೆ.
ಫೇಸ್ ಬುಕ್ ನಲ್ಲಿ ಶಿವರಾಜ್ ಕುಮಾರ್ ಬಗ್ಗೆ ವಿವಾದಾತ್ಮಕ ಕಾಮೆಂಟ್ ಮಾಡಿರುವ ಪ್ರಶಾಂತ್ ಸಂಬರ್ಗಿ, ‘ಶಿವಣ್ಣ ಯಾವತ್ತೂ ಸ್ಕ್ರಿಪ್ಟ್ ಕೇಳೋದೇ ಇಲ್ಲ. ಆದರೆ, ಪೇಮೆಂಟ್ ತುಂಬಾನೇ ಮುಖ್ಯ. ಒಪ್ಪಿಕೊಂಡಿದ್ದ ಸಿನಿಮಾ ಮಾಡ್ತಾರೆ. ತುಂಬಾ ಎಮೋಷನಲ್ ಜೀವಿ ನಮ್ಮ ಶಿವಣ್ಣ. ಸಿನಿಮಾ ಫ್ಲಾಪ್ ಆದರೂ, ಅವರು ಕೇರ್ ಮಾಡಲ್ಲ. ಮತ್ತೆ ಪೇಮೆಂಟ್ ತಗೊಂಡು ಇನ್ನೊಂದು ಫಿಲ್ಮ್ ಗೆ ಸೈನ್ ಮಾಡ್ಬಿಡ್ತಾರೆ. ಅದೇ ಫಾರ್ಮುಲಾ ರಾಜಕೀಯದಲ್ಲೂ ಅನುಸರಿಸಿದ್ದಾರೆ. ಕ್ಯಾಂಡಿಡೇಟ್ ಗೆದ್ರೆ ಏನು ಸೋತ್ರೆ ಏನು ಎಲ್ಲಾ ಒಂದೇ. ಏನೋ ಹೇಳ್ತಾರಲ್ಲ ಗೆದ್ದರೆ ಬೆಟ್ಟ. ಇಲ್ಲ ಅಂದ್ರೆ.. ಬಂತಾ ಪ್ಯಾಕೆಟ್.. ಸರಿ ಆಲ್ ರೈಟ್ ಮುಂದೆ ಹೋಗೋಣ’ ಎಂದು ಬರೆದುಕೊಂಡಿದ್ದಾರೆ.
ಪ್ರಶಾಂತ್ ಸಂಬರ್ಗಿಯ ಪೋಸ್ಟ್ ಗೆ ಅನೇಕರು ಕಾಮೆಂಟ್ ಮಾಡಿದ್ದಾರೆ. ಶಿವರಾಜ್ ಕುಮಾರ್ ಬಗ್ಗೆ ಅವಹೇಳನಕಾರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಅನೇಕರು ಪ್ರಶಾಂತ್ ಸಂಬರ್ಗಿ ವಿರುದ್ಧವೇ ಗರಂ ಆಗಿದ್ದಾರೆ.
ತಮ್ಮ ವಿರುದ್ಧ ಕಾಮೆಂಟ್ ಮಾಡಿದವರನ್ನು ಡಿಲಿಟ್ ಮಾಡಿ, ಡಸ್ಟ್ ಬಿನ್ ಗೆ ಹಾಕಲಾಗುವುದು ಎಂದು ಮತ್ತೊಮ್ಮೆ ಕಾಮೆಂಟ್ ಬೇರೆ ಮಾಡಿದ್ದಾರೆ ಪ್ರಶಾಂತ್.
ಸದಾ ಒಂದಿಲ್ಲೊಂದು ವಿವಾದ ಸೃಷ್ಟಿಸಿಕೊಳ್ಳುವ ಸಂಬರಗಿ, ಇದೀಗ ಡಾ.ರಾಜ್ ಕುಟುಂಬದ ಜೇನುಗೂಡಿಗೆ ಗುರಿಯಿಟ್ಟಿರುವುದು ಹಲವರಲ್ಲಿ ಬೇಸರಕ್ಕೆ ಕಾರಣವಾಗಿದೆ.




