DK Shivakumar Crying: ಜೈಲಿನಲ್ಲಿದ್ದ ದಿನ ನೆನೆದು ಗಳಗಳನೇ ಕಣ್ಣೀರಿಟ್ಟ ಡಿಕೆ ಶಿವಕುಮಾರ್

ಸೋನಿಯಾಗಾಂಧಿ ಅವರು ನನ್ನನ್ನು ಜೈಲಿಗೆ ಬಂದು ಭೇಟಿಯಾಗಿದ್ದರು. ಇಂದು ಆ ನೋವಿಗೆ ಸಮಾಧಾನ ಸಿಕ್ಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬೆಂಗಳೂರಿನ ನಿವಾಸದಲ್ಲಿ ಗಳಗಳನೆ ಅತ್ತರು

ಅಖಂಡ ಕರ್ನಾಟಕದ ಮಹಾ ಜನತೆಯ ಪಾದಗಳಿಗೆ ಸಾಷ್ಟಾಂಗ ನಮನಗಳು. ನಮ್ಮ ಮೇಲೆ ವಿಶ್ವಾಸವಿಟ್ಟು ನಿಚ್ಛಳ ಬಹುಮತ ನೀಡಿದ್ದಾರೆ.

ನನ್ನ ಪಕ್ಷದ ಕಾರ್ಯಕರ್ತರು, ನಾಯಕರ ಒಗ್ಗಟ್ಟಿನ ಪರಿಶ್ರಮದಿಂದ ಈ ಗೆಲುವು ಸಾಧ್ಯವಾಗಿದೆ. ನಾನು ಪಕ್ಷದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಹೇಳಿದ್ದೆ, ಜತೆಗೂಡುವುದು ಆರಂಭ, ಜತೆಗೂಡಿ ಯೋಚಿಸುವುದು ಪ್ರಗತಿ, ಜತೆಯೂಡಿ ಕೆಲಸ ಮಾಡುವುದು ಯಶಸ್ಸು ಎಂದು. ಅದೇ ರೀತಿ ನಮ್ಮ ನಾಯಕರು ಹಾಗೂ ಕಾರ್ಯಕರ್ತರ ಒಗ್ಗಟ್ಟಿನ ಪರಿಶ್ರಮದಿಂದ ಪಕ್ಷಕ್ಕೆ ಈ ಯಶಸ್ಸು ಸಿಕ್ಕಿದೆ.

ನಾನು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೊಟ್ಟ ಮಾತಿನಂತೆ ನಾನು ಪಕ್ಷವನ್ನು ಗೆಲುವಿನ ದಡ ಸೇರಿಸಿದ್ದೇನೆ. ನನ್ನ ಮೇಲೆ ಬಿಜೆಪಿ ಷಡ್ಯಂತ್ರ ರೂಪಿಸಿ ಬಿಜೆಪಿ ಸೇರಬೇಕು ಅಥವಾ ಜೈಲಿಗೆ ಹೋಗಬೇಕು ಎಂಬ ಆಯ್ಕೆ ಇಟ್ಟಾಗ ನಾನು ಜೈಲಿಗೆ ಹೋಗುವುದನ್ನು ಆರಿಸಿಕೊಂಡೆ. ಆಗ ಸೋನಿಯಾ ಗಾಂಧಿ ಅವರು ತಿಹಾರ್ ಜೈಲಿಗೆ ಬಂದು ನನ್ನನ್ನು ಭೇಟಿ ಮಾಡಿದ್ದರು. ಅವರು ನನ್ನ ಮೇಲೆ ಅಷ್ಟು ನಂಬಿಕೆ ಇಟ್ಟಿದ್ದರು.

ಇದು ಒಬ್ಬನಿಂದ ಬಂದಿರುವ ಯಶಸ್ಸಲ್ಲ. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಸೇರಿದಂತೆ ಕಾಂಗ್ರೆಸ್ ಶಾಸಕರುಗಳು, ಎಐಸಿಸಿ ಪದಾಧಿಕಾರಿಗಳು, ಉಸ್ತುವಾರಿಗಳು, ರಾಜ್ಯದ ನಾಯಕರುಗಳು, ಪಕ್ಷದ ಪದಾಧಿಕಾರಿಗಳು, ಬೂತ್ ಮಟ್ಟದಲ್ಲಿ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಿರುವ ಎಲ್ಲಾ ಕಾರ್ಯಕರ್ತರಿಗೆ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ನಾನು ಈಗ ಹೆಚ್ಚಾಗಿ ಏನು ಮಾತನಾಡುವುದಿಲ್ಲ. ಕಾರ್ಯಕರ್ತರು ಉತ್ಸಾಹದಿಂದ ಗಲಾಟೆ ಮಾಡುತ್ತಿದ್ದಾರೆ ಎಂದು ನನ್ನ ಚುನಾವಣಾ ಪ್ರಮಾಣಪತ್ರ ಪಡೆಯಲು ನಾನೇ ಹೋಗಬೇಕು ಎಂದು ರಾಮನಗರ ಜಿಲ್ಲಾಧಿಕಾರಿಗಳು ಹೇಳುತ್ತಿದ್ದಾರೆ. ಹೀಗಾಗಿ ನಾನು ಅಲ್ಲಿಗೆ ಹೋಗುತ್ತಿದ್ದು, ಅಲ್ಲಿಂದ ಬಂದ ನಂತರ ನನ್ನ ದೇವಾಲಯ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಮಾತನಾಡುತ್ತೇನೆ.

More News