ಕಾಂಗ್ರೆಸ್ ಅಭೂತಪೂರ್ವ ಯಶಸ್ಸುಗಳಿಸಿದ ಬೆನ್ನಲ್ಲೇ
ಮುಖ್ಯಮಂತ್ರಿ ವಿಚಾರ ಕಗ್ಗಂಟಾಗಿ ಉಳಿದಿದೆ. ನಾವೇ ಸಿಎಂ ಆಗ್ಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪಟ್ಟು ಹಿಡಿದಿದ್ದು, ಇಂದು ಇಡೀ ದಿನ ದೆಹಲಿ ನಾಯಕರು ಚರ್ಚೆ ನಡೆಸಿದ ಬಳಿಕ ಸಿಎಂ ಯಾರೆಂದು ಪ್ರಕಟ ಮಾಡುವ ಸಾಧ್ಯತೆ ಇದೆ.

ನಿನ್ನೆ ಖಾಸಗಿ ಹೋಟಲ್ ನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಎರಡು ರೀತಿಯಲ್ಲಿ ಎಐಸಿಸಿ ವೀಕ್ಷಕರು ಅಭಿಪ್ರಾಯ ಸಂಗ್ರಹಿಸಿದ್ದಾರೆ. ಒಂದು ಶಾಸಕರು ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ಬರೆದು ಬಾಕ್ಸ್ನಲ್ಲಿ ಹಾಕಬಹುದು. ಇಲ್ಲವೇ ನೇರವಾಗಿ ವೀಕ್ಷಕರ ಮುಂದೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಮಾಡಿಕೊಡಲಾಗಿತ್ತು. ಈ ವೇಳೆ ಇಬ್ಬರ ಮೇಲೂ ಅಭಿಮಾನ ಇರುವ ಕಾರಣ ಮುಂದಿನ ಮುಖ್ಯಮಂತ್ರಿ ಯಾರೆಂದು ವರಿಷ್ಟರೇ ನಿರ್ಧರಿಸಲಿ ಎಂದು ಒಮ್ಮತದ ನಿರ್ಧಾರ ವ್ಯಕ್ತಪಡಿಸಿರುವ ಹಿನ್ನಲೆ ಮುಖ್ಯಮಂತ್ರಿ ಚಂಡು ದೆಹಲಿಗೆ ತಲುಪಿದೆ.

ಶಾಸಕಾಂಗ ಪಕ್ಷದ ಸಭೆ ಬಳಿಕ, ಅಜ್ಞಾತ ಸ್ಥಳಕ್ಕೆ ತೆರಳಿದ್ದ ಡಿಕೆ ಶಿವಕುಮಾರ್ ಮುಂಜಾನೆ 4:25ಕ್ಕೆ ಸದಾಶಿವನಗರದ ನಿವಾಸಕ್ಕೆ ಆಗಮಿಸಿದರು. ಈ ವೇಳೆ ಮಾತನಾಡಿದ ಅವರು, ಸಭೆಯಲ್ಲಿ ಒಂದು ಸಾಲಿನ ನಿರ್ಣಯವನ್ನು ಪಾಸ್ ಮಾಡಿದ್ದೇವೆ. ಚುನಾವಣಾ ಸಮಯದಲ್ಲಿ ವೋಟ್ ಹಾಕಿದವರಿಗೆ, ಸಹಾಯ ಮಾಡಿದವರಿಗೆ ಕೃತಜ್ಞತೆ ಸಲ್ಲಿಸಿದ್ದೇವೆ. ವರಿಷ್ಠರಿಗೆ ಎಲ್ಲವನ್ನು ಕಳುಹಿಸಿದ್ದೇವೆ. ಅವರು ಎಲ್ಲ ನಿರ್ಣಯ ಮಾಡುತ್ತಾರೆ ಎಂದು ತಿಳಿಸಿದರು.
ಇನ್ನು ಸಿಎಂ ಆಯ್ಕೆ ಹಿನ್ನಲೆ ಇಂದು ದೆಹಲಿಯಲ್ಲಿ ಸರಣಿ ಸಭೆ ನಡೆಯಲಿದೆ. ವೀಕ್ಷಕರ ಜೊತೆಗೆ ಖರ್ಗೆ ಸಭೆ ನಡೆಸಲಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಜೊತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಚರ್ಚೆ ಬಳಿಕ ಅಂತಿಮ ತಿರ್ಮಾನ ತೆಗೆದುಕೊಳ್ಳಲಿದ್ದಾರೆ. ಬಹುತೇಕ ಇಂದು ಇಡೀ ದಿನ ಸಿಎಂ ಆಯ್ಕೆ ಕಸರತ್ತು ನಡೆಯಲಿದೆ.




