ಬೆಂಗಳೂರು: ರಾಜ್ಯದಲ್ಲಿ ಆಗಿರುವ ಮಳೆಹಾನಿ ಹಾಗೂ ಅದಕ್ಕೆ ಕೈಗೊಳ್ಳಬೇಕಾದ ಕ್ರಮದ ಕುರಿತು ಅಧಿಕಾರಿಗಳ ಜತೆ ಚರ್ಚಿಸಿದ್ದೇನೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಬೆಂಗಳೂರಿನ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಜನವರಿ ಈಚೆಗೆ ಮಾರ್ಚ್, ಮೇ ನಲ್ಲಿ ಕೆಲ ಜಿಲ್ಲೆಯಲ್ಲಿ ಮಳೆ ಆಗಿದೆ. 67 ಮಂದಿ ಪ್ರಾಣಹಾನಿ ಆಗಿದೆ. 60 ಮಂದಿ ಕುಟುಂಬಕ್ಕೆ ಪರಿಹಾರ ನೀಡಲಾಗಿದೆ. ಉಳಿದವರಿಗೆ ಪರಿಹಾರ ನೀಡುತ್ತೇವೆ. 487 ಜಾನುವಾರು ಪ್ರಕೃತ ವಿಕೋಪಕ್ಕೆ ಬಲಿಯಾಗಿವೆ. ಪರಿಹಾರ ನೀಡುವ ಕಾರ್ಯ ಆಗಲಿದೆ. 1400 ಮನೆಗಳಿಗೆ ಮಳೆಯಿಂದ ಭಾಗಶಃ ಹಾನಿ ಆಗಿದೆ. ಬೆಳೆ 20160 ಹೆಕ್ಟೇರ್ ಪ್ರದೇಶದಲ್ಲಿ ಹಾನಿ ಆಗಿದೆ. ಪ್ರಾಣ ಹಾನಿಗೆ ಜಿಲ್ಲಾಧಿಕಾರಿ ಗೆ ಸೂಚಿಸಿದ್ದು ಎರಡು ದಿನದಲ್ಲಿ ಮಾಡಲು ಹೇಳಿದ್ದೇವೆ. ಬೆಳೆಹಾನಿಗೆ ರೈತರ ಖಾತೆಗೆ ನೇರವಾಗಿ ಹಣ ಜಮಾವಣೆ ಆಗಲಿದೆ. ಪರಿಹಾರ ಪೋರ್ಟಲ್ ಆರಂಭಿಸಲು ಸೂಚಿಸಿದ್ದೇವೆ. ಅಧಿಕಾರಿಗಳಿಗೂ ಮಾಹಿತಿ ನೀಡುವಂತೆ ಸೂಚಿಸಿದ್ದೇವೆ. ಕ್ಯಾಬಿನೆಟ್ ನಲ್ಲಿ ಚರ್ಚಿಸಿ ಪರಿಹಾರದ ಮೊತ್ತ ನಿಗದಿ ಆಗಲಿದೆ ಎಂದು ತಿಳಿಸಿದರು.

538 ಕೋಟಿ ರೂ. ಜಿಲ್ಲಾಧಿಕಾರಿ ಖಾತೆಯಲ್ಲಿ ಲಭ್ಯವಿದೆ. ಕೊರತೆ ಇರುವಲ್ಲಿ ಒಂದೆರಡು ದಿನದಲ್ಲಿ ತಲುಪಿಸುತ್ತೇವೆ. ಇದು ತಕ್ಷಣದ ಕೆಲಸ. ಉಳಿದಂತೆ ಕಳೆದ ಎರಡು ವರ್ಷದಲ್ಲಿ ಅತಿಯಾದ ಮಳೆಯಿಂದ ದೊಡ್ಡ ಹಾನಿ ಆಗಿತ್ತು. ಈ ಸಾರಿ ಮುನ್ನೆಚ್ಚರಿಕೆ ಕೈಗೊಳ್ಳಲಿದ್ದೇವೆ. ಬೆಂಗಳೂರು, ಕೊಡಗು, ಮಂಗಳೀರು, ಬೆಳಗಾವಿ, ರಾಯಚೂರು ಜಿಲ್ಲೆಯಲ್ಲಿ ರಕ್ಷಣಾ ತಂಡ ನಿಯೋಜಿತವಾಗಲಿದೆ. ಹವಾಮಾನ ಮುನ್ಸೂಚನೆ ನಮಗೆ ತಿಳಿದರೂ ನಾವು ಜನರಿಗೆ ತಲುಪಿಸಲು ಆಗುತ್ತಿಲ್ಲ. ತಲುಪಿಸಿದರೂ ಜನ ಗಮನಿಸುವುದಿಲ್ಲ. ತಂತ್ರಜ್ಞಾನ ಇದ್ದರೂ ಸದ್ಬಳಕೆ ಮಾಡಿಕೊಳ್ಳಲು ಆಗುತ್ತಿಲ್ಲ. ಮುಂದೆ ಆಗಬಹುದಾದ ಅನಾಹುತ ತಪ್ಪಿಸಲು ಸೂಚಿಸಿದ್ದೇನೆ ಎಂಬ ಮಾಹಿತಿ ನೀಡಿದರು.
ಎಲ್ಲಾ ಅಧಿಕಾರಿಗಳು ಚುನಾವಣಾ ಕಾರ್ಯದಲ್ಲಿ ನಿರತರಾಗಿದ್ದರು. ಇನ್ನು ಮುಂದೆ ತಕ್ಷಣ ಕ್ರಮ ಕೈಗೊಳ್ಳಲು ಸಿದ್ಧರಾಗಿ ಎಂದಿದ್ದೇವೆ. ರಾಜ್ಯದಲ್ಲಿ ವಾಡಿಕೆ ಪ್ರಕಾರ ಆಗಲಿದೆ ಎಂದಿದ್ದಾರೆ. ಕಲಬುರುಗಿ, ಯಾದಗಿರಿ ಹಾಗೂ ಬೀದರ್ ನಲ್ಲಿ ಜೂನ್ ನಲ್ಲಿ ಕಡಿಮೆ ಮಳೆ ಆಗಬಹುದು. ಉಳಿದಂತೆ ವಾಡಿಕೆಯಂತೆ ಆಗಲಿದೆ ಹಾಗೂ ಆಗಲಿ ಎಂಬುದು ಆಶಯ. ವಿಜ್ಞಾನಿಗಳು ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದರು.

ಇಂದು ಎನ್ಡಿಆರ್ಎಫ್, ಪೊಲೀಸ್ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿದ್ದೇನೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿದ್ದೇನೆ. ಪ್ರಾಮಾಣಿಕವಾಗಿ ಸುಧಾರಣೆಗೆ ಕ್ರಮ ಕೈಗೊಳ್ಳುತ್ತೇವೆ. ಇಲಾಖೆಯಲ್ಲಿ ಒಂದಿಷ್ಟು ತಾಂತ್ರಿಕ ಸಮಸ್ಯೆ ಇದೆ. ಇದನ್ನೆಲ್ಲಾ ಬಗೆಹರಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಪಹಣಿ ವಿಚಾರದಲ್ಲಿ ರೈತರಿಗೆ ಅನ್ಯಾಯ ಆಗಬಾರದು. ನಿಧಾನವಾಗಿ ಸಮಸ್ಯೆ ಬಗೆಹರಿಸಿಕೊಂಡು ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ತಕ್ಷಣಕ್ಕೆ ಕೈಗೊಳ್ಳಬಹುದಾದ ಕ್ರಮ ಹಾಗೂ ಮಳೆ ಯಾವ ರೀತಿ ಆಗಬಹುದು ಎಂಬುದನ್ನು ಚರ್ಚಿಸಿದ್ದೇನೆ. ಹಿಂದಿನ ಸರ್ಕಾರದ ಮನೆ ಹಾನಿ ಪರಿಹಾರ ವಿಚಾರ ಚರ್ಚಿಸಿಲ್ಲ. ಮುಂದೆ ಗಮನಿಸುತ್ತೇನೆ. ಮನೆಗೆ 5 ಲಕ್ಷ ಹೋಗಿಲ್ಲ. 1 ಲಕ್ಷ ಹೋಗಿದೆ ಎಂಬ ಮಾಹಿತಿ ಇದೆ. ಇದನ್ನು 15 ದಿನದಲ್ಲಿ ಚರ್ಚಿಸಿ ಮಾಹಿತಿ ನೀಡುತ್ತೇನೆ ಎಂದರು.




