ಭುವನೇಶ್ವರ್ : ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣ ಬಳಿ ಏಕಾಏಕಿ ಮೂರು ರೈಲುಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಇದುವರೆಗೂ 238 ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. 900 ಕ್ಕೂ ಹೆಚ್ಚು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನಾ ಸ್ಥಳದಲ್ಲಿ ಪರಿಹಾರ ಕಾರ್ಯ ಬಿರುಸಿನಿಂದ ಸಾಗಿದ್ದು, ಕರ್ನಾಟಕ ರಾಜ್ಯದಿಂದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹಾಗೂ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಲಾಗಿದ್ದು, ಕನ್ನಡಿಗರ ಪರಿಹಾರ ಕಾರ್ಯದಲ್ಲಿ ಅವರು ಶ್ರಮಿಸಲಿದ್ದಾರೆ.

ಒಂದೇ ಸ್ಥಳದಲ್ಲಿ ಮೂರು ರೈಲುಗಳ ಅಫಘಾತ ಹೇಗೆ ನಡೆಯಿತು. ಇದು ಅನೇಕರನ್ನು ಕಾಡುತ್ತಿರುವ ಪ್ರಶ್ನೆ. ಪ್ರಾಥಮಿಕ ವರದಿಯ ಪ್ರಕಾರ ಈ ರೀತಿ ಅಪಘಾತ ನಡೆದು ನೂರಾರು ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ.
ಬೆಂಗಳೂರಿನ ಬೈಯಪ್ಪನಹಳ್ಳಿ ರೈಲು ನಿಲ್ದಾಣದಿಂದ ಪಶ್ಚಿಮಬಂಗಾಳದ ಹೌರಾಕ್ಕೆ ಗುರುವಾರ ಬೆಳಗ್ಗೆ 10.35ಕಿಕೆ ಹೌರಾ – ಬೆಂಗಳೂರು ಎಕ್ಸ್ ಪ್ರೆಸ್ ರೈಲುಹೊರಟಿತ್ತು. ಶುಕ್ರವಾರ ಸಂಜೆ ಸುಮಾಪ್ 7.10ಕ್ಕೆ ಒಡಿಶಾನ ಬಹನಾಗ ರೈಲು ನಿಲ್ದಾಣದ ಬಳಿ ರೈಲು ಹಳಿ ತಪ್ಪಿದ್ದರಿಂದ ಕೆಲವು ಬೋಗಿಗಳು ಪಕ್ಕದ ಟ್ರಾಕ್ಸ್ ಗೆ ಬಿದ್ದಿವೆ.

ಈ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಕೋಲ್ಕತ್ತ ಬಳಿಯ ಶಾಲಿಮಾರ್ ರೈಲು ನಿಲ್ದಾಣದಿಂದ ಶುಕ್ರವಾರ ಮಧ್ಯಾಹ್ನ 3.15ಕ್ಕೆ ಚೆನ್ನೈಗೆ ಶಾಲಿಮಾರ್ ಕೋರಮಂಡಲ್ ಎಕ್ಸ್ ಪ್ರೆಸ್ ರೈಲು ಗಾಡಿಯು ಹೊರಟಿತ್ತು. ಶರವೇಗದಲ್ಲಿ ಬಂದ ರೈಲು ಹಳಿ ತಪ್ಪಿದ್ದ ಹೌರಾ ಬೆಂಗಳೂರು ಎಕ್ಸ್ ಪ್ರೆಸ್ ರೈಲು ಗಾಡಿನ ಬೋಗಿಗಳಿಗೆ ಡಿಕ್ಕಿ ಹೊಡೆದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.
ಕೋರಮಂಡಲ್ ರೈಲಿನ ಡಿಕ್ಕಿಯ ರಭಸ್ಕೆ ಪಕ್ಕದ ಟ್ರಾಕ್ ನಲ್ಲಿ ನಿಂತಿದ್ದ ಸರಕು ಸಾಗಣೆ ರೈಲಿಗೆ ಭೋಗಿಗಳು ಅಪ್ಪಳಿಸಿದ್ದರಿಂದ ಮೂರು ರೈಲು ಗಾಡಿಗಳ ಅಪಘಾತ ಸಂಭವಿಸಿದೆ. ಕೇವಲ ಹತ್ತು ನಿಮಿಷದಲ್ಲಿ ನಡೆದ ಈ ದುರಂತದಿಂದ ನೂರಾರು ಅಮಾಯಕ ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ.
#ODISSATRAINACCIDENT #HOWRABANGALOREEXPRESS #TRAINACCIDENT #SHALIMARKORAMANDALEXPRESSRAIL




