Elephant Task Force: ರಾಮನಗರ, ಬನ್ನೇರು ಘಟ್ಟದಲ್ಲಿ ಆನೆ ಕಾರ್ಯಪಡೆ ರಚನೆ : ಈಶ್ವರ ಖಂಡ್ರೆ

ರಾಮನಗರ: ಆನೆ ಮತ್ತು ಮಾನವನ ಸಂಘರ್ಷವನ್ನು ನಿಯಂತ್ರಿಸಲು ನಾಡಿಗೆ ಬಂದ ಆನೆಗಳನ್ನು ತ್ವರಿಯವಾಗಿ ಕಾಡಿಗೆ ಮರಳಿ ಅಟ್ಟಲು ಬನ್ನೇರುಘಟ್ಟ ಮತ್ತು ರಾಮನಗರದಲ್ಜಿ ಎರಡು ಆನೆ ಕಾರ್ಯಪಡೆಗಳನ್ನು ರಚಿಸಲಾಗುವುದು ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ರಾಮನಗರದಲ್ಲಿ ಇಂದು ತಿಳಿಸಿದರು.

ರಾಮನಗರ ಜಿಲ್ಲೆಯಲ್ಲಿ ಆನೆ ದಾಳಿಯಿಂದ ಮೃತಪಟ್ಟ ವೀರಭದ್ರ ಮತ್ತು ಕಾಳಯ್ಯ ಅವರ ನಿವಾಸಕ್ಕೆ ಸಂಸತ್ ಸದಸ್ಯ ಡಿಕೆ ಸುರೇಶ್ ಮತ್ತು ವಿಧಾನ ಪರಿಷತ್ ಸದಸ್ಯ ಎಸ್ ರವಿ ಅವರೊಂದಿಗೆ ಭೇಟಿ ನೀಡಿ ಸಾಂತ್ವನ ಹೇಳಿ 15 ಲಕ್ಷ ರೂಪಾಯಿಗಳ ಚೆಕ್ ವಿತರಿಸಿದ ತರುವಾಯ ರಾಮನಗರ ಅರಣ್ಯ ಭವನದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಸಾಮಾನ್ಯವಾಗಿ ಆನೆಗಳು ಹಲಸಿನ ಹಣ್ಣು, ಕಬ್ಬು, ಕಾಫಿ ಬೀಜ ತಿನ್ನುವ ಸಲುವಾಗಿ ನಾಡಿಗೆ ಬರುತ್ತವೆ ಇದನ್ನು ತಡೆಯಲು ಸೌರ ತಂತಿ ಬೇಲಿ ಮತ್ತು ಹ್ಯಾಂಗಿಂಗ್ ಸೌರಬೇಲಿ ಸದ್ಯದ ಪರಿಹಾರವಾಗಿದ್ದು ಇದನ್ನು ಆನೆಗಳ ಹಾವಳಿ ಇರುವ ಪ್ರದೇಶದಲ್ಲಿ ಅಳವಡಿಸಲಾಗುವುದು ಎಂದರು.
ಕಾವೇರಿ ವನ್ಯಜೀವಿ ತಾಣದ ಬಳಿ 132 ಕಿಲೋಮೀಟರ್ ಬ್ಯಾರಿಕೇಡ್ ಹಾಕುವ ಕಾರ್ಯ ನಡೆಯುತ್ತಿದ್ದು, ಈ ಪೈಕಿ 89 ಕಿಲೋಮೀಟರ್ ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಕಾಮಗಾರಿಯನ್ನು ಶೀಘ್ರವೇ ಮುಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಹಾಸನ ಕೊಡಗು, ಮೈಸೂರು, ಚಾಮರಾಜನಗರ, ರಾಮನಗರ, ಬನ್ನೇರುಘಟ್ಟ ಪ್ರದೇಶಗಳಲ್ಲಿ ಆನೆಗಳ ಕಾಟವಿದ್ದು ಇಲ್ಲಿ ಜೀವಾಹಾನಿ ಆಗದ ರೀತಿಯಲ್ಲಿ ಕ್ರಮವಹಿಸಲು ಅರಣ್ಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ರಾಜ್ಯದ್ಯಂತ 641 ಕಿಲೋಮೀಟರ್ ಬ್ಯಾರಿಕೇಡ್ ಹಾಗೂ ಸೌರಬೇಲಿ ಹಾಕುವ ಯೋಜನೆಯಿದ್ದು ಈ ಪೈಕಿ 360 ಕಿಲೋ ಮೀಟರ್ ಕಾರ್ಯ ಪೂರ್ಣಗೊಂಡಿದೆ. ರಾಜ್ಯದಲ್ಲಿ 629 ಆನೆಗಳಿದ್ದರೂ ಸಾವಿನ ಪ್ರಮಾಣ ಇತರ ರಾಜ್ಯಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಇದೆ. ಆದಾಗ್ಯೂ ಮಾನವನ ಜೀವ ಅಮೂಲ್ಯವಾಗಿದ್ದು ಜೀವ ಹಾನಿ ತಪ್ಪಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ ಎಂದರು.
2019- 20 ರ ಸಾಲಿನಲ್ಲಿ ವನ್ಯಮೃಗಗಳ ದಾಳಿಯಿಂದ ರಾಜ್ಯದಲ್ಲಿ 50 ಸಾವು ಸಂಭವಿಸಿದೆ, ಈ ಪೈಕಿ 29 ಸಾವು ಆನೆಗಳಿಂದಲೇ ಆಗಿದೆ. 20-21ರ ಅವಧಿಯಲ್ಲಿ 41 ಸಾವುಗಳು ಸಂಭವಿಸಿದ್ದರೆ, 2021- 22 ರ ಅವಧಿಯಲ್ಲಿ 29 ಮತ್ತು 2022-23ರ ಅವಧಿಯಲ್ಲಿ 51 ಸಾವು ಸಂಭವಿಸಿದೆ, ಈ ಪೈಕಿ 29 ಆನೆ ದಾಳಿಯಿಂದ ಆಗಿದೆ ಎಂದು ವಿವರ ನೀಡಿದರು.
ಪ್ರಸ್ತುತ ಹಾಸನ ಚಿಕ್ಕಮಗಳೂರು ಕೊಡಗು ಮೈಸೂರು ಮತ್ತು ಚಾಮರಾಜನಗರದಲ್ಲಿ ಆನೆ ಕಾರ್ಯಪಡೆ ಕಾರ್ಯಾಚರಣೆ ಮಾಡುತ್ತಿದ್ದು ರಾಮನಗರ ಮತ್ತು ಬನ್ನೇರುಘಟ್ಟದಲ್ಲಿ ಪ್ರತ್ಯೇಕ ಟಾಸ್ಕ್ ಫೋರ್ಸ್ ರಚಿಸಲಾಗುವುದು ಎಂದರು. ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಪ್ರತಿ ಕಿ.ಮೀ ಗೆ ಒಂದುವರೆ ಕೋಟಿ ರೂಪಾಯಿ ವೆಚ್ಚವಾಗಲಿದೆ, ಆದರೆ ಹ್ಯಾಂಗಿಂಗ್ ಸೌರ ಬೇಲಿ ಮತ್ತು ಸೋಲಾರ್ ಬೇಲಿಗೆ ತಲಾ 6 ಲಕ್ಷ ರೂಪಾಯಿ ವೆಚ್ಚ ಆಗಲಿದೆ ಎಂದು ಮಾಹಿತಿ ನೀಡಿದರು.

ಸೌರ ಬೇಲಿಗಳ ಬದಲು ದಪ್ಪ ಕಲ್ಲಿನ ತಡಗೋಡೆಗಳನ್ನು ನಿರ್ಮಿಸಿದರೆ ಆನೆಗಳ ಹಾವಳಿ ತಪ್ಪಿಸಬಹುದು ಎಂಬ ಸಂಸದ ಸುರೇಶ್ ಅವರ ಸಲಹೆಗೆ ಪ್ರತಿಕ್ರಿಸಿದ ಸಚಿವರು ರೈಲ್ವೆ ಬ್ಯಾರಿಕೇಡ್ ಮತ್ತು ಕಲ್ಲಿನ ತಡೆಗೋಡೆಗಳ ತುಲನಾತ್ಮಕ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಬೆಳೆ ಹಾನಿಗೆ ಸಮಾನವಾದ ಪರಿಹಾರ ದೊರಕಬೇಕು ಕೆಲವು ಪ್ರಾಣಿಗಳು ದಾಳಿಯಿಂದ ಆಗುವ ಬೆಳೆ ಹಾನಿಗೆ ಪರಿಹಾರ ಲಭಿಸುತ್ತಿಲ್ಲ, ಅದೇ ರೀತಿ ಕೆಲವು ಬೆಳೆಗಳ ಹಾನಿಗೂ ಪರಿಹಾರ ಸಿಗುತ್ತಿಲ್ಲ ಇದರಿಂದ ರೈತರಿಗೆ ತೊಂದರೆಯಾಗಿದ್ದು ಎಲ್ಲ ಬೆಳೆಗಳು ಮತ್ತು ಎಲ್ಲಾ ಕಾಡುಪ್ರಾಣಿಗಳ ಹಾನಿಗೆ ಪರಿಹಾರ ನೀಡುವ ಸಂಬಂಧ ಪರಿಶೀಲನೆ ನಡೆಸಲಾಗುವುದು ಎಂದರು.
ಚಿರತೆಗಳ ಹಾವಳಿಯು ರಾಜ್ಯದ ಅನೇಕ ಕಡೆ ಅದರಲ್ಲೂ ರಾಮನಗರದಲ್ಲಿ ಹೆಚ್ಚಾಗಿದ್ದು ಚಿರತೆಗಳನ್ನು ಹಿಡಿದು ಕಾಡಿಗೆ ಕಳುಹಿಸಲು ಕ್ರಮ ವಹಿಸುವಂತೆ ಸೂಚಿಸಿದರು. ಮಾನವನ ರಕ್ತದ ರುಚಿ ಕಂಡ ಚಿರತೆ ಮತ್ತು ಹುಲಿಗಳು ಪದೇ ಪದೇ ದಾಳಿ ಮಾಡುತ್ತವೆ, ಈ ಹಿನ್ನೆಲೆಯಲ್ಲಿ ಅವುಗಳನ್ನು ಪುನರ್ವಸತಿ ಕೇಂದ್ರಗಳಲ್ಲಿ ಪೋಷಿಸುವ ಅಗತ್ಯವಿದ್ದು, ಈ ಕಾರ್ಯವನ್ನು ಇಲಾಖೆ ನಿರ್ವಹಿಸುತ್ತಿದೆ ಎಂದರು. ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಹಾಜರಿದ್ದರು.

More News

You cannot copy content of this page