Industrialists Protest: ಕೈಗಾರಿಕೋದ್ಯಮಿಗಳ ಪ್ರತಿಭಟನೆ, ವಿದ್ಯುತ್ ನೀತಿ ಹಳಿ ತಪ್ಪಿರುವುದಕ್ಕೆ ಸಾಕ್ಷಿ : ಬಸವರಾಜ ಬೊಮ್ಮಾಯಿ

ಬೆಂಗಳೂರು: ರಾಜ್ಯ ಸರ್ಕಾರದ ವಿದ್ಯುತ್ ನೀತಿ ಖಂಡಿಸಿ ಮೊದಲ ಬಾರಿಗೆ ಕೈಗಾರಿಕೋದ್ಯಮಿಗಳು ಮುಷ್ಕರ ನಡೆಸಿರುವುದು ರಾಜ್ಯದ ವಿದ್ಯುಶ್ಚಕ್ತಿ ಹಳಿ ತಪ್ಪಿರುವುದಕ್ಕೆ ಇದೇ ಸಾಕ್ಷಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಕರ್ನಾಟಕ ಕೈಗಾರಿಕೆಯಲ್ಲಿ ಅತ್ಯಂತ ಮುಂದುವರೆದ ರಾಜ್ಯವಾಗಿದೆ. ಇಲ್ಲಿ ಸಣ್ಣ ಉದ್ಯಮಗಳಿಂದ ಹಿಡಿದು ‌ಬೃಹತ್ ಕೈಗಾರಿಕೆಗಳು ಕಾರ್ಯ ನಿರ್ವಹಿಸುತ್ತಿವೆ. ರಾಜ್ಯ ಕಾಂಗ್ರೆಸ್ ಸರ್ಕಾರದ ವಿದ್ಯುತ್ ನೀತಿ ಗ್ರಾಹಕರು ಹಾಗೂ ಕೈಗಾರಿಕೋದ್ಯಮಿಗಳಿಗೆ ಮಾರಕವಾಗಿರುವುದು ದುರ್ದೈವ ಮತ್ತು ಖಂಡನೀಯ
ಮುಂದಿನ ದಿನಗಳಲ್ಲಿ ಸಾಮಾನ್ಯ ಜನರಿಂದ ಹಿಡಿದು ಕೈಗಾರಿಕೆಗಳಿಗೂ ವಿದ್ಯುತ್ ‌ಕ್ಷಾಮ ತಲೆದೋರುವ ಸಾಧ್ಯತೆ ಇದೆ. ಸರ್ಕಾರ ಕೂಡಲೆ ಎಚ್ಚೆತ್ತುಕೊಂಡು ಬೇಕಾಗಿರುವ ಹಣಕಾಸನ್ನು ಬಿಡುಗಡೆ ಮಾಡಬೇಕು ಹಾಗೂ ವಿದ್ಯುತ್ ಬಳಕೆದಾರರ ಮೇಲಿನ ಹೊರೆ ಕಡಿಮೆ ಮಾಡಬೇಕು.
ಪೂರ್ವ ತಯಾರಿ‌ ಇಲ್ಲದೆ ಗ್ಯಾರೆಂಟಿ ಜಾರಿ ಮಾಡಿದರೆ ಅದರ ಎಲ್ಲ ಭಾರವೂ ಜನ ಸಾಮಾನ್ಯರ ಮೇಲೆ ಬೀಳುತ್ತದೆ. ಇದನ್ನು ತಪ್ಪಿಸಬೇಕು. ಈಗಿರುವ ಲೋಪವನ್ನು ಸರಿಪಡಿಸಲಿ ಎಂದು ಎಚ್ಚರಿಸಿದ್ದಾರೆ‌.

More News