ಚಾಮರಾಜನಗರ: ಕರ್ನಾಟಕದ ಪ್ರಮುಖ ದೇಗುಲಗಳಲ್ಲಿ ಒಂದಾದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಇಂದಿನಿಂದ ಬೆಳ್ಳಿ ರಥ ಸೇವೆ ಆರಂಭಗೊಂಡಿದೆ. ಕೆಲವು ತಿಂಗಳುಗಳ ಹಿಂದೆಯಷ್ಟೇ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಸಾಂಕೇತಿಕವಾಗಿ ರಥ ಉದ್ಘಾಟನೆ ಮಾಡಿದ್ದರು.

ಈಗ ರಥ ನಿರ್ಮಾಣ ಕಾಮಗಾರಿ ಸಂಪೂರ್ಣ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಇಂದಿನಿಂದ ಬೆಳ್ಳಿ ರಥ ಸೇವೆ ಆರಂಭಗೊಂಡಿದೆ. ಭಕ್ತರು ಪ್ರತಿದಿನಿ ಬೆಳಗ್ಗೆ 2001 ರೂ. ಶುಲ್ಕ ಕೊಟ್ಟು ಬೆಳ್ಳಿ ರಥ ಸೇವೆ ಮಾಡಿಸಬಹುದಾಗಿದೆ. ಈಗಾಗಲೇ, ದೇವಾಲಯದಲ್ಲಿ ಸಂಜೆ ಹೊತ್ತು ಚಿನ್ನದ ರಥ ಸೇವೆ ನಡೆಯಲಿದೆ. ಬೆಳ್ಳಿ ರಥ ಲೋಕಾರ್ಪಣೆ ವೇಳೆ, ಸಾಲೂರು ಮಠದ ಸ್ವಾಮೀಜಿ, ಪ್ರಾಧಿಕಾರದ ಕಾರ್ಯದರ್ಶಿ ಕಾತ್ಯಾಯಿನಿದೇವಿ ಹಾಗೂ ಸೆಸ್ಕ್ ಎಂಡಿ ಜಯವಿಭವಸ್ವಾಮಿ ಇದ್ದರು.

ರಾಜ್ಯದಲ್ಲೇ ಅತಿಹೆಚ್ಚು ಆದಾಯ ಪಡೆಯುವ ಎರಡನೇ ದೇವಾಲಯ ಇದಾಗಿದ್ದು ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಾಣುತ್ತಿದೆ.




