ಹಾವೇರಿ: ಬಿಜೆಪಿಯಲ್ಲಿ ಒಳಬೇಗುದಿ ಹಾಗೂ ಅಸಮಾಧಾನದ ಹೊಗೆ ಚುನಾವಣೆ ಮುಗಿದು ಒಂದು ತಿಂಗಳಾದರೂ ಕಾಣುತ್ತಿದೆ. ಶಿಸ್ತಿನ ಪಕ್ಷ ಎಂದೇ ಬಿಂಬಿತವಾಗಿದ್ದ ರಾಜ್ಯ ಬಿಜೆಪಿಯಲ್ಲಿ ಇಂದು ಎಲ್ಲಾವೂ ಸರಿಯಲ್ಲ ಎಂಬಂತೆ ಗೋಚರಿಸುತ್ತಿದೆ.
ಲೋಕಸಭಾ ಚುನಾವಣೆಗೆ ಇಂದು ಕೆಲವು ತಿಂಗಳು ಬಾಕಿ ಉಳಿದಿವೆ. ಈಗಾಗಲೇ ಹಾವೇರಿ ಲೋಕಸಭಾ ಚುನಾವಣೆಯ ಟಿಕೆಟ್ ಗಾಗಿ ಪೈಟ್ ಶುರುವಾಗಿದೆ. ಮಾಜಿ ಸಚಿವ ಬಿಸಿ ಪಾಟೀಲ್ & ಮಾಜಿ ಸಚಿವ ಈಶ್ವರಪ್ಪ ಮಗ ಟಿಕೆಟ್ ಲಾಬಿ ಒಂದೆಡೆ ಮಾಡುತ್ತಿದ್ದರೆ, ಇನ್ನೊಂದೆಡೆ ಮತ್ತೊಬ್ಬ BJP ಮುಖಂಡ ಟಿಕೆಟ್ ಆಕಾಂಕ್ಷಿ ಎಂದು ಬಹಿರಂಗವಾಗಿಯೇ ಘೋಷಿಸಿದ್ದಾರೆ.
ಬಿಜೆಪಿ ಮುಖಂಡ ಪಾಲಾಕ್ಷಗೌಡ ಪಾಟೀಲ್ ನಾನು ಕೂಡ ಟಿಕೆಟ್ ಆಕಾಂಕ್ಷಿ ಎಂದು ಹೇಳುವುದರ ಮೂಲಕ ಹಾವೇರಿ ಲೋಕಸಭಾ ಚುನಾವಣಾ ಕಣಕ್ಕೆ ರಂಗು ತಂದಿದ್ದಾರೆ. ಹಾವೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಪಾಲಾಕ್ಷಗೌಡ ಪಾಟೀಲ್ ಈ ಹೇಳಿಕೆ ನೀಡಿದ್ದಾರೆ.
ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಲು ಸಿದ್ದನಾಗಿದ್ದೇನೆ, ಈ ನಿಟ್ಟಿನಲ್ಲಿ ಹಲವು ಮಠಾಧೀಶರನ್ನ ಭೇಟಿಯಾಗಿ ಆಶೀರ್ವಾದ ಪಡೆದಿದ್ದೇನೆ, ಸಂಸದ ಶಿವಕುಮಾರ್ ಉದಾಸಿಯವರು ಸಾಕಷ್ಟು ಕೆಲಸ ಮಾಡಿದ್ದಾರೆ, ಶಿವಕುಮಾರ್ ಉದಾಸಿಯವರ ಜೊತೆ ಮಾತನಾಡಿದ್ದೇನೆ, ನಾನು ಚುನಾವಣಾ ಕಣದಿಂದ ಹಿಂದೆ ಸರಿಯುತ್ತೇನೆಂದು ಅವರು ಹೇಳಿದ್ದಾರೆ ಎಂದು ತಿಳಿಸಿದರು.

ಸೂರ್ಯ ಚಂದ್ರ ಇರೋದು ಎಷ್ಟು ಸತ್ಯವೋ, ನಾನು ಬಿಜೆಪಿ ಅಭ್ಯರ್ಥಿ ಆಗೋದು ಅಷ್ಟೇ ಸತ್ಯ ಎಂದು ಅವರು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಹೇಳಿಕೆ ಹೇಳುವುದರ ಮೂಲಕ ಬಿಜೆಪಿ ನಾಯಕರುಗಳಿಗೆ ಸ್ಟ್ರಾಂಗ್ ಮಸೇಜ್ ಕಳುಹಿಸಿದ್ದಾರೆ.
ಈಶ್ವರಪ್ಪನವರು ಅವರ ಮಗನಿಗೆ ಟಿಕೆಟ್ ಕೇಳಿದ್ದು ತಪ್ಪಲ್ಲ. ಈಶ್ವರಪ್ಪನವರು ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದವರು, ಅವರು ಮಗನಿಗೆ ಟಿಕೆಟ್ ಕೇಳಿದ್ದನ್ನ ಸ್ವಾಗತ ಮಾಡುತ್ತೇನೆ, ಆದರೆ ನಾನೇ ಲೋಕಸಭಾ ಕ್ಷೇತ್ರದ ಟಿಕೇಟ್ ಆಕಾಂಕ್ಷಿ ಎಂದು ಸ್ಪಷ್ಟಪಡಿಸಿದರು.




