ಬೆಂಗಳೂರು: ಒಂದು ಸಿನಿಮಾ ಮಾಡೋಕೆ ಎಷ್ಟು ಹಣ ಕೊಡ್ಬೆಕೋ ಅಷ್ಟು ಹಣ ಸುದೀಪ್ ಗೆ ಕೊಟ್ಟಿದ್ದೇನೆ. ಅಷ್ಟೇ ಅಲ್ಲದೇ, ಸುದೀಪ್ ನನ್ನಿಂದ ಒಂದಷ್ಟು ಮಂದಿಗೆ ಹಣ ಕೊಡಿಸಿದ್ದಾರೆ. ಬೇಕಿದ್ರೆ ಅವರೆಲ್ಲಾ ಬಂದು ಮಾತಾಡ್ತಾರೆ. ನಾನು ಸುದೀಪ್ ಗೆ ಹಣ ಕೊಟ್ಟ ವಿಷಯ ರವಿಚಂದ್ರನ್ ಅವರಿಗೂ ಗೊತ್ತಿದೆ ಎಂದು ನಿರ್ಮಾಪಕ ಎಂಎನ್ ಕುಮಾರ್ ಹೇಳಿದರು.
ನಿರ್ಮಾಪಕ ಎಂಎನ್ ಕುಮಾರ್ ವಿರುದ್ಧ ನಟ ಸುದೀಪ್ 10 ಕೋಟಿ ಮಾನನಷ್ಟ ಮೊಕದ್ದಮೆ ಮತ್ತು ಕ್ರಿಮಿನಲ್ ಕೇಸ್ ದಾಖಲಿಸಿದ ಬೆನ್ನಲ್ಲೇ ನಿರ್ಮಾಪಕ ಗೋಷ್ಟಿ ಕರೆದು ಅಳಲನ್ನು ತೋಡಿಕೊಂಡಿದ್ದಾರೆ. ನಾನು ಸಿನಿಮಾ ಮಾಡೋಕೆ ಸುದೀಪ್ಗೆ ಹಣ ಕೊಟ್ಟಿದ್ದು ನಿಜ. ಆದ್ರೆ ಹಣ ಪಡೆದ ಸುದೀಪ್ ನನ್ನೊಂದಿಗೆ ಮಾತನಾಡಲು ತಯಾರು ಇರ್ಲಿಲ್ಲ. ನಾನು ಈ ಬಗ್ಗೆ ಮಾತನಾಡಲು ಮನೆ ಹತ್ತಿರ ಹೋದ್ರೂ ಮನೆಯಲ್ಲಿದ್ದರೂ ಸ್ಪಂದಿಸಲಿಲ್ಲ. ಈ ಬಗ್ಗೆ ಬೇಸರಗೊಂಡು ರವಿಚಂದ್ರನ್ ಅವರ ಬಳಿ ಮಾತನಾಡಿದ್ದೆ. ಅವರು ಕೂಡ ಸುದೀಪ್ ಗೆ ಹೇಳಿದ್ದಾರೆ. ನಾನು ಹಣ ಕೇಳಿದ್ದೆ ತಪ್ಪಾ? ಎಂದು ಪ್ರಶ್ನೆ ಹಾಕಿದರು.

ಇವತ್ತು ಸುದೀಪ್ ನಮ್ಮನ್ನ ಬಿಟ್ಟು ಹೊರ ರಾಜ್ಯದವರಿಗೆ ಚಿತ್ರ ಮಾಡುತ್ತಿದ್ದೀರಿ. ನಾನು ಕೊಟ್ಟಿರೋ ಹಣ ನನಗೆ ಕೊಟ್ಟು ಬೇರೆ ಯಾರಿಗಾದ್ರು ಹೋಗಿ ಚಿತ್ರ ಮಾಡಿಕೊಡಿ. ಈ ಹಿಂದೆ ಅವರ ಮೇಲೆ ಇದ್ದ ಅಭಿಮಾನಕ್ಕೆ ಕಮಿಷನ್ ಇಲ್ಲದೆ ಚಿತ್ರ ಹಂಚಿಕೆ ಮಾಡಿದ್ದೇವೆ. ಇದೇ ಚಿತ್ರದ ಎದುರು ತಮ್ಮ ಆಟೋಗ್ರಾಫ್ ಸಿನಿಮಾ ರಿಲೀಸ್ ಆಗಬೇಕು ಅಂತ ಹಠ ಮಾಡಿದರು. ಅದನ್ನೂ ಮಾಡಿದ್ದೇನೆ. ಅವರಿಗಾಗಿ ಎಷ್ಟೆಲ್ಲ ಸಹಾಯ ಮಾಡಿದರೂ, ಕೊನೆಗೆ ನನಗೆ ಹೀಗಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

ನಿಮ್ಮ ವಿರುದ್ಧ 10 ಕೋಟಿ ರೂ ಮಾನನಷ್ಠ ಮೊಕದ್ದಮೆ ದಾಖಲಾಗಿದ್ಯಲ್ಲಾ.. ಏನ್ ಹೇಳ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಕರಣವನ್ನು ನಾನು ಇಂಡಸ್ಟ್ರಿ ಮೂಲಕವೇ ಬಗೆಹರಿಸಿಕೊಳ್ಳಲ್ಲು ರೆಡಿ ಇದ್ದೇನೆ. ನಮ್ಮ ಸಂಸ್ಥೆಗಳ ತೀರ್ಮಾನಕ್ಕೆ ನಾನು ರೆಡಿ ಇದ್ದೇನೆ. ಇಷ್ಟೆಲ್ಲ ಆದ ಮೇಲೆಯೂ ಕಾಲ್ ಶೀಟ್ ಕೊಟ್ಟರೆ ನಾನು ಅವರಿಗೆ ಚಿತ್ರ ಮಾಡ್ತೇನೆ. ಸುದೀಪ್ ಅವರು ಬಹಿರಂಗ ಸಭೆ ಮುಂದೆ ಯಾಕೆ ಬರುತ್ತಿಲ್ಲ. ನಾನು ತಪ್ಪು ಮಾಡಿದ್ರೆ ಕಾಲು ಹಿಡಿದು ಕ್ಷಮೆ ಕೇಳ್ತೇನೆ ಎಂದರು.