ಬೆಂಗಳೂರು : ಖಾಸಗಿ ಕಂಪನಿಯೊಂದರ ಎಂಡಿ ಮತ್ತು ಸಿಇಓವನ್ನು ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ, ಭೀಕರವಾಗಿ ಕೊಲೆ ಮಾಡಿದ ಘಟನೆ ಇಂದು ಬೆಂಗಳೂರಿನಲ್ಲಿ ಹಾಡುಹಗಲೇ ನಡೆದಿದೆ.
ಫಣೀಂದ್ರ ಸುಬ್ರಹ್ಮಣ್ಯ ಮತ್ತು ವಿನುಕುಮಾರ್ ಎಂಬುಬವರೇ ಬರ್ಬರವಾಗಿ ಹತ್ಯೆಗೊಳಗಾದ ಖಾಸಗಿ ಕಂಪನಿಯ ಸಿಇಓ ಮತ್ತು ಎಂಡಿಯಾಗಿದ್ದಾರೆ. ಇವರನ್ನು ಫೆಲಿಕ್ಸ್ ಎಂಬಾತ ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎಂದು ಅಮೃತಹಳ್ಳಿ ಪೊಲೀಸರು ತಿಳಿಸಿದ್ದಾರೆ.

ಏರೋನಿಕ್ಸ್ ಸಂಸ್ಥೆ ಎಂಡಿ ಫಣೀಂದ್ರ
ಅಮೃತಹಳ್ಳಿಯ ಪಂಪಾ ಬಡಾವಣೆಯಲ್ಲಿ ಈ ಘಟನೆ ಇಂದು ಸಂಜೆ ಹಾಡುಹಗಲೇ ನಡೆದಿದ್ದು, ಅಕ್ಕಪಕ್ಕದವರು ಭಯದ ವಾತಾವರಣದಲ್ಲಿ ನೆಲೆಸುವಂತಾಗಿದೆ. ಏರೋನಿಕ್ಸ್ ಮಿಡೀಯಾ ಪ್ರೈವೇಟ್ ಲಿಮಿಟೆಡ್ ನ ಎಂಡಿ ಫಣೀಂದ್ರ ಮತ್ತು ಅದೇ ಕಂಪನಿಯಲ್ಲಿ ಸಿಇಓ ಆಗಿದ್ದ ವಿನುಕುಮಾರ್, ಅವರದ್ದೇ ಕಂಪನಿಯಲ್ಲಿ ಕೆಲಸಗಾರನಾಗಿದ್ದ ಫಿಲಿಕ್ಸ್ ಎಂಬಾತನಿಂದ ಹತ್ಯೆಗೊಳಗಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಂಕಿತ ಆರೋಪಿ ಫೆಲಿಕ್ಸ್
ಕೆಲ ದಿನಗಳ ಹಿಂದೆ ಕೆಲಸ ಬಿಟ್ಟು ಫೆಲಿಕ್ಸ್ ಪ್ರತ್ಯೇಕವಾಗಿ ಕಂಪನಿ ತೆರೆದಿದ್ದ, ತಮ್ಮ ವ್ಯವಹಾರಕ್ಕೆ ಫಣೀಂದ್ರ ಮ್ತತು ವಿನು ಕುಮಾರ್ ಅಡ್ಡ ಬರುತ್ತಾರೆ ಎಂದು ಫೆಲಿಕ್ಸ್ ಕೊಲೆಗೆ ಸಂಚು ರೂಪಿಸಿದ್ದ, ಅದರಂತೆಯೇ ಇಂದು ಸಂಜೆ ಸುಮಾರು 5 ಗಂಟೆಗೆ ಕಚೇರಿಗೆ ನುಗ್ಗಿ ಫಣೀಂದ್ರ ಮತ್ತು ವಿನುಕುಮಾರ್ ಮೇಲೆ ತಲ್ವಾರ್ ನಿಂದ ದಾಳಿ ಮಾಡಿದ್ದ ಎನ್ನಲಾಗಿದೆ.

ತೀವ್ರ ರಕ್ತಸ್ರಾವದಿಂದ ಕಚೇರಿಯಲ್ಲಿ ಬಿದ್ದಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಲ್ವಾರ್ ನಿಂದ ಕೊಚ್ಚಿ ಕೊಲೆ ಮಾಡಿ ಆರೋಪಿ ಫೆಲಿಕ್ಸ್ ಎಸ್ಕೇಪ್ ಆಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದು, ಸ್ಥಳಕ್ಕೆ ಅಮೃತಹಳ್ಳಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





