ಬೆಂಗಳೂರು : ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಸಿಎಂ ಸಂಬಂಧಿಯಿಂದ ಹಾಗೂ ಅಧ್ಯಕ್ಷರ ನಡುವೆ ಕೋಲ್ಡ್ ವಾರ್ ಆರಂಭವಾಗಿದ್ದು, ಇದು ಅರಣ್ಯ ಮತ್ತು ವಿಜ್ಞಾನ ಸಚಿವ ಈಶ್ವರ್ ಖಂಡ್ರೆಯವರಿಗೆ ತಲೆನೋವಾಗಿ ಪರಿಣಮಿಸಿದೆ.

ಸಿಎಂ ಸಂಬಂಧಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಲಾಗಿದೆ ಎಂಬ ದೂರು ಅಧ್ಯಕ್ಷರದ್ದಾಗಿದೆ. ಸಿಎಂ ಸಿದ್ದರಾಮಯ್ಯ ಸೊಸೆ ಸಂಬಂಧಿಗೆ ನಿಯಮ ಮೀರಿ ದೊಡ್ಡ ಹುದ್ದೆಯನ್ನು ನೀಡಲಾಗಿದೆ. ಯಾವುದೇ ಅರ್ಹತೆ ಇಲ್ಲದಿದ್ದರೂ ಸದಸ್ಯ ಕಾರ್ಯದರ್ಶಿ ಹುದ್ದೆಗೆ ಸೂರಿ ಪಾಯಲ್ ಅವರನ್ನು ನೇಮಿಸಲಾಗಿದೆ ಎಂದು ಮಾಲೀನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಶಾಂತ ತಮ್ಮಯ್ಯ ಅವರು ಸಿಎಂ ಅವರಿಗೆ ಪತ್ರ ಬರೆದಿದ್ದಾರೆ.

ಸದಸ್ಯ ಕಾರ್ಯದರ್ಶಿ ಹುದ್ದೆಗೆ ಐಎಫ್ಎಸ್ ಅಧಿಕಾರಿಗಳನ್ನೇ ನೇಮಿಸಬೇಕೆಂಬ ನಿಯಮವಿದ್ದರೂ, ಅದನ್ನು ಗಾಳಿಗೆ ತೂರಿ ಐಟಿ ವ್ಯವಸ್ಥಾಪಕನಾದ ಸೂರಿ ಪಾಯಲ್ಗೆ ಸದಸ್ಯ ಕಾರ್ಯದರ್ಶಿ ಹುದ್ದೆ ಸರ್ಕಾರ ನೇಮಕ ಮಾಡಿರುವುದು ಅಕ್ಷ್ಯಮ್ಯ ಅಪರಾಧ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಸರ್ಕಾರದ ನಡೆ ವಿರೋಧಿಸಿ ಸಿಎಂ ಅವರಿಗದೆ ಮಂಡಳಿ ಅಧ್ಯಕ್ಷ ಶಾಂತಾ ತಮ್ಮಯ್ಯ ಅವರು ಪತ್ರ ಬರೆದಿದ್ದಾರೆ. ಈ ಅಧ್ಯಕ್ಷ ಮತ್ತು ಸದಸ್ಯ ಕಾರ್ಯದರ್ಶಿ ಜಟಾಪಟಿಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಸೊರಗಿದ್ದು, ಇಲಾಖೆ ಹೊಣೆ ಹೊತ್ತ ಸಚಿವ ಈಶ್ವರ್ ಖಂಡ್ರೆಗೆ ಇದು ನುಂಗಲಾರದ ತುತ್ತಾಗಿದೆ.

ಸಿಎಂ ಸಿದ್ದರಾಮಯ್ಯ ಕಡೆಯಿಂದಲೇ ಆಗಿರುವ ನೇಮಕ ಎನ್ನುವ ಕಾರಣಕ್ಕೆ ಸಚಿವರು ಸೈಲೆಂಟ್ ಆಗಿದ್ದಾರೆ ಎಂದು ತಿಳಿದುಬಂದಿದ್ದು, 2016ರಲ್ಲಿ ಗುತ್ತಿಗೆ ಆಧಾರದಲ್ಲಿ ಐಟಿ ವ್ಯವಸ್ಥಾಪಕನಾದ ಸೂರಿ ಪಾಯಲ್, ಆಂದಿನ ಅಧ್ಯಕ್ಷ ಲಕ್ಷ್ಮಣ್ ಮೇಲುಸ್ತುವಾರಿಯಲ್ಲಿ ಖಾಯಂ ಉದ್ಯೋಗಿಯಾಗಿದ್ದರು.

2016ರಲ್ಲೂ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರ ಪ್ರಭಾವ ಬಳಿಸಿದ್ದ ಸೂರಿ ಪಾಯಲ್ ಅಲ್ಲಿಯೇ ಮುಂದುವರೆದಿದ್ದರು. ಇದೀಗ ಮತ್ತೆ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಸೂರಿ ಪಾಯಲ್ ದರ್ಬಾರ್ ಆರಂಭವಾಗಿದೆ. ಸಚಿವ ಈಶ್ವರ್ ಖಂಡ್ರೆ ಸೂಚನೆಗಳಿಗೂ ಸೂರಿ ಪಾಯಲ್ ಕ್ಯಾರೆ ಅನ್ನುತ್ತಿಲ್ಲ ಎಂದು ಮಂಡಳಿಯಲ್ಲಿ ಕೇಳಿಬರುತ್ತಿರುವ ಮಾತಾಗಿದೆ.




