ಮೈಸೂರು: ವಿದ್ಯಾರ್ಥಿನಿಯ ಮೇಲೆ ದುಷ್ಕರ್ಮಿಗಳ ಗುಂಪೊಂದು ಅತ್ಯಾಚಾರ ಮಾಡಿರುವುದು ಖಂಡನೀಯವಾಗಿದ್ದು, ಇದೊಂದು ಮೃಗೀಯ ಕೃತ್ಯ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರು ಘಟನೆಯನ್ನ ಖಂಡಿಸಿದ್ದಾರೆ. ಮೈಸೂರು ನಗರಕ್ಕೆ ಆಗಮಿಸಿದ ಅವರು ಸಂತ್ರಸ್ಥ ಯುವತಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಈ ರೀತಿಯ ದುಷ್ಕೃತ್ಯ ನಡೆದಿರುವುದು ನೋವಿನ ಸಂಗತಿ. ನಾನು ಒಬ್ಬ ಮಹಿಳೆಯಾಗಿ ಸರ್ಕಾರದಲ್ಲಿ ಮಹಿಳಾ ಸಚಿವೆಯಾಗಿ ಒಂದು ಹೆಣ್ಣಿನ ನೋವು ಒಬ್ಬಳು ಹೆಣ್ಣಾಗಿ ನನಗೆ ಅರ್ಥ ಆಗುತ್ತದೆ. ನಾಗರಿಕ ಸಮಾಜದಲ್ಲಿ ಈ ರೀತಿಯ ದುಷ್ಕೃತ್ಯವನ್ನು ಯಾರೂ ಸಹಿಸುವುದಿಲ್ಲ. ನಾಗರಿಕರು ಇದನ್ನು ಸಾಮೂಹಿಕವಾಗಿ ಖಂಡಿಸಬೇಕು ಎಂದು ಕರೆನೀಡಿದರು.
ಈ ಪ್ರಕರಣವನ್ನು ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಣಗಣಿಸಿದ್ದಾರೆ. ಗೃಹ ಸಚಿವರೂ ಆರೋಪಿಗಳ ಪತ್ತೆಗೆ ಹಿರಿಯ ಪೊಲೀಸ್ ಅಧಿಕಾರಿಗಳ ತಂಡ ರಚಿಸಿದ್ದಾರೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳುವಂತೆ ಗೃಹ ಸಚಿವರಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ನಮ್ಮ ಸರ್ಕಾರ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ಎಲ್ಲ ರೀತಿಯಲ್ಲೂ ಸಮರ್ಥವಾಗಿದೆ. ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವ ಕೆಲಸ ಆಗುತ್ತದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.