Pradeep Eshwar vs Sudhakar: ಈಶ್ವರ್ ಗೆ ಧಮ್ಮಿದ್ರೆ ರಾಜೀನಾಮೆ ಕೊಟ್ಟು ಏಕಾಂಗಿಯಾಗಿ ಸ್ಫರ್ಧಿಸಲಿ ಎಂದ ಸುಧಾಕರ್: ಬೇರೆ ಕ್ಷೇತ್ರದಿಂದ ಸ್ಪರ್ಧಿಸಿ ವಿಧಾನಸೌಧಕ್ಕೆ ಬನ್ನಿ ಎಂದು ಕುಟುಕಿದ ಪ್ರದೀಪ್

ಪ್ರದೀಪ್‌ ಮುಖ ನೋಡಿ 5 ಸಾವಿರ ವೋಟ್‌ ಕೂಡ ಬರಲ್ಲ
ಧಮ್ಮಿದ್ರೆ ರಾಜೀನಾಮೆ ಕೊಟ್ಟು ಏಕಾಂಗಿಯಾಗಿ ಸ್ಫರ್ಧಿಸಲಿ
ಎಂದು ಶಾಸಕ ಪ್ರದೀಪ್‌ ಈಶ್ವರ್‌ಗೆ ಮಾಜಿ ಸಚಿವ ಕೆ.ಸುಧಾಕರ್‌ ಸವಾಲ್‌ ಹಾಕಿದ್ದಾರೆ.

ಪ್ರದೀಪ್‌ ಈಶ್ವರ್ ಬೆಂಬಲಿಗರಿಂದ ಸುಧಾಕರ್ ಬೆಂಬಲಿಗರಿಗೆ ಬೆದರಿಕೆವೊಡ್ಡಲಾಗ್ತಿದೆ ಎಂದು ಆರೋಪಿಸಿ
ಮಾಜಿ ಸಚಿವ ಸುಧಾಕರ್ ನೇತೃತ್ವದಲ್ಲಿ ಚಿಕ್ಕಬಳ್ಳಾಪುರದ ಎಸ್‌ಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯ್ತು. ಶಾಸಕ ಪ್ರದೀಪ್‌ ಈಶ್ವರ್‌ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಮಾಜಿ ಸಚಿವ ಸುಧಾಕರ್, ಶಾಸಕರ ಬೆಂಬಲಿಗರಿಂದ ದೌರ್ಜನ್ಯ ಹೆಚ್ಚಾಗಿದೆ ಎಂದು ಕಿಡಿ ಕಾರಿದರು.

ಇತ್ತೀಚೆಗೆ ಶಾಸಕರ ಬೆಂಬಲಿಗರಿಂದ ದೌರ್ಜನ್ಯ ಹೆಚ್ಚಾಗಿದೆ. ಅದಕ್ಕೆ ಶಾಸಕ ಪ್ರದೀಪ್ ಈಶ್ವರ್ ಕೂಡ ಉತ್ತೇಜನ ನೀಡುತಿದ್ದಾರೆ ಎಂದು ತಿಳಿದು ಬಂದಿದೆ. ಇಂದು ನಮ್ಮ ಪಕ್ಷದ ಮುಖಂಡನ ಮೇಲೆ ಕೆಲವರಿಂದ ಬೆದರಿಕೆ
ಬಂದಿದೆ.‌ ಅವರ ವಿರುದ್ದ ದೂರು ಕೊಡಲು ನಾನು ಬಂದಿದ್ದೇನೆ. ಇದೊಂದು ಬಾರಿ ಗೆದ್ದ ಮಾತ್ರಕ್ಕೆ ಈ ರೀತಿ ನಡೆದ್ಕೊಳ್ಳೋದು ಸರಿ ಅಲ್ಲ. ಪ್ರದೀಪ್‌ ಮುಖ ನೋಡಿ 5 ಸಾವಿರ ವೋಟ್‌ ಕೂಡ ಬರಲ್ಲ ಕ್ಷೇತ್ರದಲ್ಲಿ. ಧಮ್ಮಿದ್ರೆ ರಾಜೀನಾಮೆ ಕೊಟ್ಟು ಏಕಾಂಗಿಯಾಗಿ ಸ್ಫರ್ಧಿಸಿ ತೋರಿಸಲಿ ಎಂದು ಗರಂ ಆದರು.

ಸುಧಾಕರ್ ಸವಾಲಿಗೆ ವ್ಯಂಗ್ಯ ವಾಗಿ ಉತ್ತರ ಕೊಟ್ಟ ಶಾಸಕ ಪ್ರದೀಪ್ ಈಶ್ವರ್, ಸುಧಾಕರ್ ನಮ್ಮೂರಿನ ಹುಡುಗ, ಅವರ ಬಗ್ಗೆ ನನಗೆ ಗೌರವ ಇದೆ. ನೀವು ಬೇರೆ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ರೆ ಮುಂದಿನ ಬಾರಿ ವಿಧಾನಸೌಧಕ್ಕೆ ಬರ್ತೀರಾ. ಚಿಕ್ಕಬಳ್ಳಾಪುರದಿಂದಲೇ ಸ್ಪರ್ಧೆ ಮಾಡಿದ್ರೆ ಮತ್ತೆ 5 ವರ್ಷ ಕಷ್ಟಪಡಬೇಕಾಗುತ್ತೆ ಎಂದು ಟಾಂಗ್ ನೀಡಿದ್ದಾರೆ.

ಕಾರ್ಯಕರ್ತರ ದಾಳಿ ಆರೋಪದ ಕುರಿತು ಮಾತನಾಡಿದ ಪ್ರದೀಪ್ ಈಶ್ವರ್, ತಾಕತ್ತಿದ್ದರೆ ನಮ್ಮ ಹುಡುಗರು ಹಲ್ಲೆ, ದಾಳಿ ಮಾಡಿದ್ದಾರೆ ಅನ್ನೋದರ ಬಗ್ಗೆ ಪ್ರೂಫ್ ತೋರಿಸ್ಲಿ. ನಿಮ್ಮದೇ ಕಾರ್ಯಕರ್ತನನ್ನ ಜೈಲಿಗೆ ಕಳುಹಿಸಿದವರು ನೀವು. ಈಗ ಅವನನ್ನೇ ಜೊತೆಗೆ ಕೂರಿಸಿಕೊಂಡು ಆರೋಪ ಮಾಡ್ತಿದ್ದೀರಾ..!? ಎಂದು ದೂರಿದರು.

ಪಕ್ಷೇತರರಾಗಿ ಸ್ಪರ್ಧೆ ಮಾಡೋಣ ಎಂಬ ಸುಧಾಕರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಯಾಕೆ ಸುಧಾಕರ್ ಅವ್ರೇ ಬಿಜೆಪಿಯವರು ನಿಮಗೆ ಟಿಕೆಟ್ ಕೊಡಲ್ವಾ? ಎರಡು ತಿಂಗಳ ಹಿಂದೆಯಷ್ಟೇ ನಿಮ್ಮನ್ನ ಸೋಲಿಸಿದ್ದೇನೆ. ಮತ್ತೆ ಯಾಕೆ ಬರಬೇಕು. ನೀವು ಬೇಕಾದ್ರೆ 5 ವರ್ಷ ಆದ್ಮೇಲೆ ಪಕ್ಷೇತರರಾಗಿ ಬಂದು ಸ್ಪರ್ಧೆ ಮಾಡಿ ಎಂದು ವ್ಯಂಗ್ಯ ಮಾಡಿದರು‌.

More News