ಚಿಕ್ಕಬಳ್ಳಾಪುರ: ಹಾಲಿ ಶಾಸಕರಿಗೆ ಅರಿವಿನ ಕೊರತೆ ಇದೆ. ಯಾವುದೇ ತನಿಖೆ ಮಾಡಲಿ, ನಮ್ಮದು ಕೇಂದ್ರ ಸರ್ಕಾರ ಇದೆ. ಈ ರೀತಿ ದ್ವೇಷದ ರಾಜಕಾರಣ ಮಾಡುವುದು ಬೇಡ ಎಂದು ಮಾಜಿ ಸಚಿವ ಕೆ ಸುಧಾಕರ್ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಚಿಕ್ಕಬಳ್ಳಾಪುರದ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜಿನ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ಆರೋಪಿಸಿದ್ದರು. ಈ ಆರೋಪಕ್ಕೆ ತಿರುಗೇಟು ನೀಡುವ ಭರದಲ್ಲಿ ಕೇಂದ್ರದಲ್ಲಿ ನಮ್ಮ ಪಕ್ಷದ ಸರ್ಕಾರವಿದೆ ಎಂದು ಹೇಳಿ, ಏನಿದ್ದರೂ ನಮ್ಮನ್ನು ಕೇಂದ್ರ ಸರ್ಕಾರ ಬಚಾವ್ ಮಾಡುತ್ತಾರೆ ಎಂಬ ಧಾಟಿಯಲ್ಲಿ ಮಾತನಾಡಿದ್ದಾರೆ.

ಶಾಸಕ ಪ್ರದೀಪ್ ಈಶ್ವರ್ಗೆ ಕನಸಿನಲ್ಲೂ ನಾನೇ ಬರುತ್ತಿದ್ದೇನೆ ಎಂದು ವ್ಯಂಗ್ಯವಾಡಿದ ಮಾಜಿ ಸಚಿವ ಸುಧಾಕರ್, ಲಾಟರಿ ಹೊಡೆದು ಶಾಸಕರಾಗಿದ್ದೇನೆಂದು ಹೇಳಿಕೊಂಡವರಲ್ಲಿ ಇವರು ಮೊದಲಿಗರು ಇರಬೇಕೆಂದು ಪ್ರದೀಪ್ ಈಶ್ವರ್ಗೆ ಸುಧಾಕರ್ ಟಾಂಗ್ ನೀಡಿದರು.
ಪ್ರದೀಪ್ ಈಶ್ವರ್ ದ್ವೇಷ ರಾಜಕಾರಣ ಮಾಡುವುದು ಬೇಡ ಎಂದು ಕಿವಿಮಾತು ಹೇಳಿದ ಸುಧಾಕರ್, ರಾಜ್ಯದಲ್ಲಿ 2013 ರಿಂದ 2018ರ ವರೆಗೂ ನಡೆದಿರುವ ಅನೇಕ ಭ್ರಷ್ಟಾಚಾರಗಳು ನನಗೇನು ಗೊತ್ತಿಲ್ಲವಾ ಎಂದು ಪ್ರಶ್ನಿಸಿದ್ದಾರೆ. ಬಾಯಿ ಬಿಡುವ ಸಮಯ ಸಂದರ್ಭ ಬಂದಾಗ ಬಿಡುವೆ ಎಂದು ವಾಗ್ದಾಳಿ ನಡೆಸಿದರು.




