ಬೆಂಗಳೂರು : ನ್ಯಾಯಾಲಯ ನಿಜವಾಗಿ ನ್ಯಾಯವನ್ನ ಎತ್ತಿ ಹಿಡಿಯುತ್ತೆ ಅನ್ನೋದಕ್ಕೆ ಇದು ಒಂದು ನಿದರ್ಶನ. ರಾಹುಲ್ ಪ್ರಚಾರದ ವೇಳೆ ಆಡಿದ ಒಂದು ಮಾತಿಗೆ ಲಕ್ಷಾಂತರ ಮತದಾರರು ಆಯ್ಕೆ ಮಾಡಿದ ಸಂಸತ್ ಸದಸ್ಯತ್ವ ರದ್ದು ಮಾಡಿದ್ದರು. ಅದು ನ್ಯಾಯ ಸಮ್ಮತವಲ್ಲ ಎಂಬ ದೃಷ್ಟಿಕೋನದಲ್ಲಿ ಉಚ್ಚ ನ್ಯಾಯಾಲಯ ತೀರ್ಪು ನೀಡಿದೆ, ಬಹುಶಃ ಮುಂದೆ ಅಂತಿಮ ತೀರ್ಪು ರಾಹುಲ್ ಪರ ಬರಲಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದನ್ನ ನಾನು ಸ್ವಾಗತ ಮಾಡುತ್ತೇನೆ, ರಾಹುಲ್ ಗಾಂಧಿ ಲೋಕಸಭೆಯಲ್ಲಿ ಇವತ್ತಿನ ಸಮಸ್ಯೆಗಳ ಬಗ್ಗೆ ಪ್ರಸ್ತಾಪ ಮಾಡುತ್ತಾರೆ ಅನ್ನೋ ವಿಶ್ಚಾಸ ಇದೆ ಎಂದರು.

ನನಗೆ ಮಾಹಿತಿ ಇಲ್ಲ
ಸಚಿವ ಚೆಲುವರಾಯಸ್ವಾಮಿ ವಿರುದ್ದ ಕೃಷಿ ಅಧಿಕಾರಿಗಳು ರಾಜ್ಯಪಾಲರಿಗೆ ಪತ್ರ ಬರೆದಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಅದು ನನಗೆ ಗೊತ್ತಿಲ್ಲ, ಗೌಪ್ಯವಾಗಿ ಬರೆದಿದ್ದಾರೇನೊ ಗೊತ್ತಿಲ್ಲ, ಮಂಡ್ಯ ಪೊಲೀಸರು ಕೂಡ ನನಗೇನು ಮಾಹಿತಿ ನೀಡಿಲ್ಲ ಎಂದರು.

ಸದಾಶಿವ ಆಯೋಗದ ವರದಿ ಜಾರಿ
ಸದಾಶಿವ ಆಯೋಗ ವರದಿ ಜಾರಿಗೆ ನಾವು ಕಮಿಟ್ ಆಗಿದ್ದೇವೆ, ಬಿಜೆಪಿಯವರು ಹಿಂದೆ 2% ಹಂಚಿಕೆ ಮಾಡಿದ್ದಾರೆ, ಆದರೆ ಅವರ ಕೇಂದ್ರ ಮಂತ್ರಿ ನಾರಾಯಣಸ್ವಾಮಿಯೇ ಇದು ಸಾಧ್ಯವಿಲ್ಲ ಅಂತ ಹೇಳಿದ್ದಾರೆ, ಹೀಗಾಗಿ ನಾವು ಕುಳಿತು ಚರ್ಚೆ ಮಾಡಿ, ಯಾರ್ಯಾರಿಗೆ ಎಷ್ಟೆಷ್ಟು ಮೀಸಲಾತಿ ಹಂಚಿಕೆ ಅಂತ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
ಪೊಲೀಸ್ ವರ್ಗಾವಣೆ ವಿಳಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಒಂದು ವಾರದೊಳಗೆ ಅಂತಿಮ ಮಾಡುತ್ತೇವೆ, ವರ್ಗಾವಣೆಗೆ ಶಾಸಕರ ಶಿಫಾರಸ್ಸು ಪತ್ರ ಒಂದು ಹಂತ, ಶಾಸಕರ ಶಿಫಾರಸ್ಸು ಪತ್ರದ ಜೊತೆ ಪರಿಶೀಲನೆ ಮಾಡಿ ವರ್ಗಾವಣೆ ಮಾಡಲಾಗುವುದು ಎಂದರು.




