ಬೆಂಗಳೂರು : ಕಾಂಗ್ರೆಸ್ ಪಕ್ಷ ಬಸ್ ಸೀಟ್ ರೀತಿ ಅಲ್ಲ, ಹತ್ತಿ ಇಳಿಯುವ ಕೆಲಸ ಮಾಡಬಾರದು, ಇದೊಂದು ಖಾಯಂ ಸೀಟ್, ಕಾಂಗ್ರೆಸ್ ಸದಸ್ಯತ್ವ ಪಡೆಯುವುದೇ ಸೌಭಾಗ್ಯದ ಕೆಲಸ, ಬೇರೆ ಯಾವ ಪಕ್ಷದವರಿಗೆ ಬಾವುಟದ ಶಾಲು ಹಾಕಲು ಆಗಲ್ಲ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.
ಕಾಂಗ್ರೆಸ್ ಕಚೇರಿಯಲ್ಲಿ ಇಂದು ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಪಕ್ಷ ಸೇರುತ್ತಿರುವ ನಾಯಕರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು. ಹಾಗೆಯೇ ಅವರನ್ನು ಪಕ್ಷದ ಶಾಲು ಮತ್ತು ಬಾವುಟ ನೀಡಿ ಬರಮಾಡಿಕೊಂಡರು. ಬಿಜೆಪಿ ಎಂಎಲ್ ಸಿ ಆಯನೂರು ಮಂಜುನಾಥ್ ಮತ್ತು ನಾಗರಾಜ್ ಗೌಡ ಇಂದು ಕಾಂಗ್ರೆಸ್ ಸೇರ್ಪಡೆಗೊಂಡರು.
ನಂತರ ಮಾತನಾಡಿದ ಡಿ ಕೆಶಿವಕುಮಾರ್, ಈಗಾಗಲೇ ಐದು ಗ್ಯಾರಂಟಿ ಜಾರಿ ಮಾಡುತ್ತಿದ್ದೇವೆ, ಇವುಗಳನ್ನು ಬಿಜೆಪಿ, ಜೆಡಿಎಸ್ ಯಾಕೆ ಕೊಡಲಿಲ್ಲ, ಬಿಜೆಪಿಗೆ ಒಂದೇ ಒಂದು ಕಾರ್ಯಕ್ರಮ ಕೊಡಲು ಆಗಲಿಲ್ಲ ಎಂದು ಪ್ರಶ್ನಿಸಿದರು. ಜನರ ಬದುಕಿನಲ್ಲಿ ಬದಲಾವಣೆ ತಂದಿದ್ದು ಕಾಂಗ್ರೆಸ್ ಎಂದು ತಿಳಿಸಿದರು.
ನದಿ ನೀರು ಸಮುದ್ರ ಸೇರಲೇಬೇಕು, ಸಮುದ್ರ ಅಂದ್ರೇನೆ ಕಾಂಗ್ರೆಸ್ ಪಕ್ಷ, ಯಾವುದೇ ಹುದ್ದೆ ಆಕಾಂಕ್ಷೆ ಇಲ್ಲದೆ ಆಯನೂರು ಮಂಜುನಾಥ್ ನಮ್ಮ ಪಕ್ಷ ಸೇರ್ತಿದ್ದಾರೆ, ವ್ಯಕ್ತಿ, ಅರ್ಹತೆ ನೋಡಿ ಅಧಿಕಾರ ಕೊಡ್ತೀವಿ, ಹಿರಿಯರ ಜೊತೆ ಹೊಸಬರು ಕೆಲಸ ಮಾಡಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.

ಯಾರಿಗೂ ಟಿಕೆಟ್ ನೀಡುತ್ತೇನೆಂದು ಭರವಸೆ ನೀಡಿಲ್ಲ
ಪಕ್ಷಕ್ಕೆ ನೂತನವಾಗಿ ಸೇರ್ಪಡೆಗೊಳ್ಳುವವರಿಗೆ ನಾನು ಯಾವುದೇ ರೀತಿಯಲ್ಲಿ ಟಿಕೇಟ್ ನೀಡುತ್ತೇನೆಂದು ಭರವಸೆ ನೀಡಿಲ್ಲ ಎಂದು ಹೇಳಿದ ಅವರು, ನಾವು ಚುನಾವಣೆ ಸಂಧರ್ಭದಲ್ಲಿ ಸರ್ವೆ ಮಾಡಿಸುತ್ತೇವೆ, ಆಗ ಟಿಕೆಟ್ ಯಾರಿಗೆ ನೀಡಬೇಕೆಂದು ನಿರ್ಧರಿಸ್ತೇವೆ ಎಂದರು.
ಪಕ್ಷದ ಕಾರ್ಯಕರ್ತರಾಗಿ ನಿಷ್ಠೆಯಿಂದ ಕೆಲಸ ಮಾಡಬೇಕು ಅಷ್ಟೇ, ಆವಾಗ ಅವರಿಗೆ ಸ್ಥಾನ ಮಾನ ತಂತಾನೆ ಸಿಗುತ್ತೆ, ಈ ಕುರಿತು ಸಿಎಂ, ಹೈಕಮಾಂಡ್ ನಿರ್ಧಾರ ಮಾಡಲಿಗೆ ಎಂದರು, ನಾವು ಆಯನೂರು ಮಂಜುನಾಥ್ ಗೂ ಟಿಕೆಟ್ ಭರವಸೆ ನೀಡಿಲ್ಲ, ನಾಗರಾಜ್ ಗೌಡ ಅವರಿಗೆ ವಿಧಾನಸಭೆ ಟಿಕೆಟ್ ನೀಡಲಾಗಲಿಲ್ಲ ಎಂದರು.
ಅಧ್ಯಕ್ಷರು ಹೇಳಿದ್ದು ನನಗೆ ಹೇಳಿದಂತೆ ಇತ್ತು

ಕೆಪಿಸಿಸಿ ಅಧ್ಯಕ್ಷರು ಹೇಳಿದ್ದು ನನಗೆ ಹೇಳಿದಂತೆ ಇತ್ತು ಎಂದು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದ ಆಯನೂರು ಮಂಜುನಾಥ್ ಹೇಳಿದರು. ಅವರು ನೀಡಿದ ಸಲಹೆ ಮತ್ತು ಸೂಚನೆಗಳನ್ನ ಸ್ವೀಕರಿಸುತ್ತೇನೆ, ಕಾರ್ಮಿಕರ ಹೋರಾಟದ ಹಿನ್ನಲೆಯಿಂದ ಬಂದವನು ನಾನು, ಇವರ ಯೋಜನೆಗಳನ್ನು ನೋಡಿ ಬಂದಿದ್ದೇನೆ, ಲೋಕಸಭಾ ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದರು.




