ಬೆಂಗಳೂರು: ಈಗಾಗಲೇ ಹಲವು ರಸ್ತೆಗಳ ಹೆಸರನ್ನು ಬದಲಾವಣೆ ಮಾಡಲಾಗಿದೆ, ಇವಾಗ ದೇಶದ ಹೆಸರನ್ನು ಬದಲಾವಣೆ ಮಾಡಲು ಕೇಂದ್ರದ ಬಿಜೆಪಿ ಸರ್ಕಾರ ಹೊರಟಿದೆ ಎಂದು ಬಿಜೆಪಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವರೆಲ್ಲಾ ವಾಟ್ಸ ಅಪ್ ವಿವಿಯಲ್ಲಿ ಬೆಳೆದು ಬಂದವರು. ಇತಿಹಾಸವನ್ನು ತಿಳಿದುಕೊಂಡು ಬಂದಿಲ್ಲ. ಮೊದಲು ಭಾರತ, ಇಂಡಿಯಾ ಎಂಬ ಹೆಸರು ಹೇಗೆ ಬಂತು ಅಂತ ತಿಳಿದುಕೊಳ್ಳಲಿ ಎಂದು ತಿರುಗೇಟು ನೀಡಿದರು.
ಹೆಸರು ಬದಲಾವಣೆಯಿಂದ ಏನು ಮಾಡಲು ಸಾಧ್ಯವಿಲ್ಲ ಮೊದಲು ದೇಶದ ಹಣೆಬರಹ ಬದಲಾವಣೆ ಮಾಡಿ. ಹಸಿವಿನಿಂದ ಎಷ್ಟು ಜನ ಸಾಯುತ್ತಿದ್ದಾರೆ, ಅವರಿಗೆ ಅನ್ನ ನೀಡಿ, ಅದರಿಂದ ಬದಲಾವಣೆ ಮಾಡಲಿ ಎಂದು ಸವಾಲು ಹಾಕಿದರು.

ದೇಶದ ಹಣಕಾಸಿನ ಪರಿಸ್ಥಿತಿ ಬಗ್ಗೆ ಶ್ವೇತ ಕೂಡಲೇ ಶ್ವೇತ ಪತ್ರ ಹೊರಡಿಸಲಿ ಎಂದು ಆಗ್ರಹಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಇನ್ನು ಸನಾತನ ಧರ್ಮದ ಕುರಿತಾದ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ನಾನು ಮಾಡಿದ ಟ್ವೀಟ್ ನಲ್ಲಿ ಯಾವ ತಪ್ಪು ಇಲ್ಲ. ಸಂವಿಧಾನವೇ ನನ್ನ ಧರ್ಮ ಅಂತ ಹೇಳಿದ್ದೇನೆ ಎಂದು ಸಮರ್ಥಿಸಿಕೊಂಡರು.
ಸಂವಿಧಾನದಿಂದ ಸ್ವಾಭಿಮಾನದ ಬದುಕು ಸಿಗುತ್ತದೆ. ನಿಮ್ಮ ಆಚರಣೆ ವಿರುದ್ಧ ನಾನಿಲ್ಲ ಅಂದ್ರೆ ನನ್ನ ಆಚರಣೆ ವಿರುದ್ಧ ಯಾಕೆ ಇದ್ದೀರಾ? ಮಾನವ ಕುಲ ಮುಂದುವರೆಯಬೇಕು ಅಂದರೆ ಕುತೂಹಲ ಮುಖ್ಯ. ಏನೇನು ಪ್ರಶ್ನೆ ಇದೆ, ಅದಕ್ಕೆ ಏನೇನು ಉತ್ತರ ಇದೆ ಕೊಡಿ ಎಂದು ಸವಾಲು ಹಾಕಿದರು.
ದೇಶದ ಸಂವಿಧಾನದ ಮೇಲೆ ನನಗೆ ಸಂಪೂರ್ಣವಾದ ನಂಬಿಕೆ ಇದೆ. ನಾನು ಸ್ಟಾಲಿನ್ ಅಥವಾ ಯಾರನ್ನು ಸಮರ್ಥನೆ ಮಾಡಬೇಕು ಎಂದಿಲ್ಲ. ನನ್ನ ವಿರುದ್ಧ ಎಫ್ ಆರ್ ಐ ಎಲ್ಲಿಯಾದರೂ ಹಾಕಲಿ. ಸಂವಿಧಾನವನ್ನು ಗೌರವಿಸುತ್ತೇನೆ ಎಂದರು. ಎಫ್ ಐ ಆರ್ ಹಾಕೋದಾದರೆ ಹಾಕಲಿ ಎಂದು ಬಿಜೆಪಿಗೆ ಸವಾಲು ಹಾಕಿದರು.




