ಬೆಂಗಳೂರು : ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನೇಮಕ ಪ್ರಶ್ನಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಅನ್ನು ರಾಜ್ಯ ಹೈಕೋರ್ಟ್ ಇಂದು ವಜಾಗೊಳಿಸಿದೆ.
ಸಿಎಂ ರಾಜಕೀಯ ಕಾರ್ಯದರ್ಶಿಗಳಾದ ನಜೀರ್ ಅಹಮದ್, ಕೆ.ಗೋವಿಂದರಾಜ್, ಮುಖ್ಯಮಂತ್ರಿಗಳ ಮುಖ್ಯ ಸಲಹೆಗಾರ ಸುನೀಲ್ ಕನಗೋಲು, ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ನೇಮಕಾತಿ ಪ್ರಶ್ನಿಸಿದ್ದ ಪಿಐಎಲ್ ಇಂದು ರಾಜ್ಯ ಹೈಕೋರ್ಟ್ ವಜಾಗೊಳಿಸಿ ಆದೇಶ ಹೊರಡಿಸಿದೆ.

ವಕೀಲ ಎಸ್.ಉಮಾಪತಿ ಎಂಬುವರು ಸಲ್ಲಿಸಿದ್ದ ಪಿಐಎಲ್ ವಜಾಗೊಂಡಿದ್ದು, ಸರ್ಕಾರ ಸಲಹೆಗಾರರನ್ನು ನೇಮಿಸಬಾರದೆಂಬ ನಿರ್ಬಂಧವಿಲ್ಲ ಎಂದು ಮುಖ್ಯನ್ಯಾಯಾಧೀಶರಾದ ಪ್ರಸನ್ನ ಬಿ.ವರಾಳೆ ಹಾಗೂ ನ್ಯಾಯಾಧೀಶರಾದ ಕೃಷ್ಣ ಎಸ್ ದೀಕ್ಷಿತ್ ರಿದ್ಧ ಪೀಠ ಆದೇಶ ಹೊರಡಿಸಿದೆ.
ಶಾಸಕರನ್ನು ಬಿಟ್ಟು ಬೇರೆಯವರಿಗೆ ಸಚಿವ ಸಂಪುಟ ಸ್ಥಾನಮಾನ ನೀಡಬಾರದು ಎಂಬ ನಿರ್ಬಂಧ ಎಲ್ಲಿದೆ ಎಂದು ಅರ್ಜಿದಾರರನ್ನು ಪ್ರಶ್ನಿಸಿದ ರಾಜ್ಯ ಹೈಕೋರ್ಟ್, ಸಲಹೆಗಾರರನ್ನು ಯಾವುದೇ ಕ್ಯಾಬಿನೆಟ್ ಖಾತೆ ಕೊಟ್ಟಿಲ್ಲ, ಅವರು ಸಚಿವರ ಅಧಿಕಾರ ಚಲಾಯಿಸುತ್ತಿಲ್ಲ, ಅಷ್ಟಕ್ಕೂ ಸಚಿವರಂತೆ ಅವರು ಸಂವಿಧಾನದ ಅಡಿ ನೇಮಕಗೊಂಡಿಲ್ಲ ಎಂದು ಕೋಟ್೯ ಹೇಳಿ ಅರ್ಜಿ ವಜಾಗೊಳಿಸಿದೆ.




