ರಾಜ್ಯದಲ್ಲಿ ಒಂದೇ ಡಿಸಿಎಂ ಯಾಕೆ..? ಮೂರು ಡಿಸಿಎಂ ಸ್ಥಾನ ನೀಡಿ ಎಂಬ ರಾಜಣ್ಣ ಹೇಳಿಕೆ ಯಿಂದ ಹಿಡಿದು, ಬೇರೆ ಕಡೆಯಿಂದ ಬಂದವ್ರೆಲ್ಲಾ ಸಿಎಂ ಆಗ್ಬಿಡ್ತಾರೆ. ಇಲ್ಲೇ ಇದ್ದು ಕೆಲಸ ಮಾಡ್ದವ್ರು ಮೂಲೆ ಗುಂಪಾಗ್ಬಿಡ್ತಾರೆ ಎಂಬ ಬಿಕೆ ಹರಿಪ್ರಸಾದ್ ವರೆಗಿನ ಹೇಳಿಕೆ ಕೈ ನಾಯಕರಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಬಿಸಿ ಬಿಸಿ ಚರ್ಚೆಗೆ ಗ್ರಾಸ ಮಾಡಿಕೊಟ್ಟಿತ್ತು. ಭಾಗ್ಯ ದ ಮೇಲೆ ಭಾಗ್ಯಗಳ ಕೊಟ್ಟು ಲೋಕ ಗೆಲ್ಲಲು ಸಜ್ಜಾಗಿರುವ ಹೈಕಮಾಂಡ್ ಗೆ, ಕೈ ನಾಯಕರ ಒಳ ಬೇಗುದಿಯ ಹೇಳಿಕೆ ಇರಿಸುಮುರಿಸು
ಉಂಟುಮಾಡಿದ್ದು, ಎಚ್ಚರಿಕೆ ಸಂದೇಶ ರವಾನಿಸಿದೆ.
ಪಕ್ಷಕ್ಕೆ ಅನಾನುಕೂಲ ಹಾಗೂ ಗೊಂದಲ ಮೂಡಿಸುವ ವಿಚಾರವನ್ನ ಪ್ರಸ್ತಾಪಿಸದಂತೆ ಸ್ವಪಕ್ಷದ ನಾಯಕರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಪತ್ರ ಬರೆಯುವ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಕೈ ನಾಯಕ ವಾಕ್ಸಮರಕ್ಕೆ ಬ್ರೇಕ್ ಹಾಕಲು ಮುಂದಾದ ಹೈಕಮಾಂಡ್, ಪ್ರಕಟಣೆ ಮೂಲಕ ಖಡಕ್ ಸೂಚನೆ ರವಾನಿಸಿದ್ದಾರೆ. ಪಕ್ಷದ ವಿಚಾರವನ್ನ ಕೇವಲ ಪಕ್ಷದ ವೇದಿಕೆಯಲ್ಲಷ್ಟೇ ಪ್ರಸ್ತಾಪಿಸ ಬೇಕು. ಪಕ್ಷಕ್ಕೆ ಅನಾನುಕೂಲ ಹಾಗೂ ಗೊಂದಲ ಮೂಡಿಸುವ ವಿಚಾರವನ್ನ ಪ್ರಸ್ತಾಪಿಸಿದರೆ ಕ್ರಮ ವಹಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಹೈಕಮಾಂಡ್ ಸೂಚನೆ ಏನು..?
“ಕಾಂಗ್ರೆಸ್ ಗ್ಯಾರಂಟಿ ಯೋಜನೆ ಯಶಸ್ಸಿನ ಹಿನ್ನಲೆ ಬಿಜೆಪಿ ಹಾಗೂ ಸ್ಥಳೀಯ ಪಕ್ಷ ಹತಾಶವಾಗಿದೆ. ಈ ಹಿನ್ನಲೆ ಜನರಲ್ಲಿ ಗೊಂದಲ ಮೂಡಿಸುವ ಯತ್ನ ನಡೆಯುತ್ತಿದೆ. ಕೆಲ ಕಾಂಗ್ರೆಸ್ ನಾಯಕರ ಹೇಳಿಕೆಗಳು ಬಿಜೆಪಿಗೆ ಪ್ರಯತ್ನಕ್ಕೆ ಸಹಕಾರಿಯಾಗಲಿದೆ. ಇನ್ನು ಮುಂದೆ ಪಕ್ಷದ ಹಾಗೂ ಸರ್ಕಾರದ ವಿಷಯವನ್ನ ಪಕ್ಷದ ವೇದಿಕೆಯಲ್ಲಿ ಪ್ರಸ್ತಾಪಿಸಬೇಕು. ಸೂಚನೆಯನ್ನು ಉಲ್ಲಂಘಿಸಿದರೆ ಅಶಿಸ್ತು ಎಂದು ಭಾವಿಸಲಾಗುವುದು. ಮುಂದಿನ ದಿನಗಳಲ್ಲಿ ಈ ಬಗ್ಗೆ ಎಲ್ಲಾ ನಾಯಕರು ಕಾರ್ಯಕರ್ತರು ಈ ವಿಚಾರವನ್ನ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.




