Prakash Raj Apologized to Siddharth: ಕಾವೇರಿ ವಿಚಾರವನ್ನ ನಾಲಾಯಕ್ ನಾಯಕರನ್ನ ಪ್ರಶ್ನಿಸದೇ ಅಸಹಾಯಕ ಜನ.. ಕಲಾವಿದರನ್ನು ಹಿಂಸಿಸುವುದು ತಪ್ಪು. “ಕ್ಷಮಿಸಿ ಸಿದ್ಧಾರ್ಥ್” : ಪ್ರಕಾಶ್ ರೈ

ಬೆಂಗಳೂರು: ಕಾವೇರಿ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಒತ್ತಡ ತರದ ನಾಲಾಯಕ್ ಸಂಸದರನ್ನು ತರಾಟೆಗೆ ತೆಗೆದುಕೊಳ್ಳದೆ, ಅಸಹಾಯಕ ಜನಸಾಮಾನ್ಯರನ್ನು.. ಕಲಾವಿದರನ್ನು ಹಿಂಸಿಸುವುದು ತಪ್ಪು. ಕ್ಷಮಿಸಿ ಸಿದ್ಧಾರ್ಥ್ ಎಂದು ನಟ ಪ್ರಕಾಶ್ ರೈ ಕ್ಷಮೆ ಯಾಚಿಸಿದ್ದಾರೆ.

ತಮಿಳು ನಟ ಸಿದ್ಧಾರ್ಥ್‌ ತಮ್ಮ ಹೊಸ ಸಿನಿಮಾ ‘ಚಿಕ್ಕು’ ( ‘ಚಿತ್ತ’) ಪತ್ರಿಕಾಗೋಷ್ಠಿಯನ್ನು ಬೆಂಗಳೂರಿನಲ್ಲಿ ಸೆ.28 ರಂದು ಆಯೋಜಿಸಿದ್ದರು. ಸಿನಿಮಾ ಪ್ರಚಾರಕ್ಕೆ ಕರೆದ ಪತ್ರಿಕಾಗೋಷ್ಠಿಗೆ ಆಗಮಿಸಿದ ಕನ್ನಡಪರ ಹೋರಾಟಗಾರರು ಘೋಷಣೆ ಕೂಗಿ, ಗೋಷ್ಠಿಗೆ ವಿರೋಧ ವ್ಯಕ್ತಪಡಿಸಿದರು. ನಾವು ಕಾವೇರಿ ನೀರಿನ ವಿಚಾರವಾಗಿ ಪ್ರತಿಭಟನೆ ಮಾಡ್ತಿದ್ದೀವಿ. ಸಿನಿಮಾ ಪ್ರಚಾರ ಮಾಡ್ಲಿಕ್ಕೆ ಬಿಡೋದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹೋರಾಟಗಾರರ ವಿರೋಧ ಬೆನ್ನಲ್ಲೇ ನಟ ಸಿದ್ಧಾರ್ಥ್‌ ಗೋಷ್ಠಿಯನ್ನ ಅರ್ಧಕ್ಕೆ ಮೊಟಕುಗೊಳಿಸಿ ಹೊರನಡೆದರು.

ಸಿದ್ದಾರ್ಥ್ ಸಿನಿಮಾ ಪ್ರಚಾರದ ವಿರುದ್ಧ ಘೋಷಣೆ ಕೂಗಿದ ಕನ್ನಡಪರ ಹೋರಾಟಗಾರರ ನಡೆಯಿಂದ ಬೇಸರಗೊಂಡ ಪ್ರಕಾಶ್ ರೈ, ಕಾವೇರಿ ನಮ್ಮದು ಹೌದು .. ನಮ್ಮದೇ.. ಆದರೆ..ದಶಕಗಳ ಈ ಸಮಸ್ಯೆಯನ್ನು ಪರಿಹರಿಸಲಾರದ ಎಲ್ಲಾ ಅಸಮರ್ಥ ರಾಜಕೀಯ ಪಕ್ಷಗಳನ್ನು .. ನಾಯಕರನ್ನು ಪ್ರಶ್ನಿಸದೆ, ಕೇಂದ್ರ ಸರ್ಕಾರಕ್ಕೆ ಒತ್ತಡ ತರದ ನಾಲಾಯಕ್ ಸಂಸದರನ್ನು ತರಾಟೆಗೆ ತೆಗೆದುಕೊಳ್ಳದೆ, ಅಸಹಾಯಕ ಜನಸಾಮಾನ್ಯರನ್ನು.. ಕಲಾವಿದರನ್ನು ಹಿಂಸಿಸುವುದು ತಪ್ಪು ..ಒಬ್ಬ ಕನ್ನಡಿಗನಾಗಿ ಸಹೃದಯ ಕನ್ನಡಿಗರ ಪರವಾಗಿ ಕ್ಷಮಿಸಿ ಎಂದು ನಟ ಪ್ರಕಾಶ್ ರೈ ಬರೆದುಕೊಂಡಿದ್ದಾರೆ.

More News