Heavy Rain: ಮಳೆ ಅಬ್ಬರ: ಬೆಂಗಳೂರು ನಗರ ತತ್ತರ..!: ಇನ್ನೂ 3 ದಿನ ಇದೇ ಕಥೆ ಎಂದ ಹವಾಮಾನ ಇಲಾಖೆ

ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಮಳೆರಾಯ ಅಬ್ಬರಿಸಿದ್ದಾನೆ. ನಿನ್ನೆ ಮಧ್ಯಾಹ್ನ ದಿಂದ ಸುರಿದ ಮಳೆಗೆ ಬೆಂಗಳೂರು ಸಂಪೂರ್ಣ ಅಸ್ತವ್ಯಸ್ಥವಾಗಿದೆ.

ರಾತ್ರಿ ಪೂರ್ತಿ ಗುಡುಗು-ಮಿಂಚು ಸಹಿತ ಸುರಿದ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಪ್ರಮುಖ ರಸ್ತೆಗಳೆಲ್ಲವೂ ಹೊಳೆ ರೂಪ ತಾಳಿದ್ದರಿಂದ ಟ್ರಾಫಿಕ್‌ಜಾಮ್‌ ಉಂಟಾಗಿ ಕಿ.ಮೀ.ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ರಸ್ತೆಗಳಲ್ಲಿ ವಾಹನಗಳ ಸಂಚಾರ ನಿಧಾನಗತಿಯಲ್ಲಿದ್ದು, ವಾಹನ ದಟ್ಟಣೆ ಉಂಟಾಗಿದ್ದರಿಂದ ಸವಾರರು ಪರದಾಡುವಂತಾಗಿದೆ.

ಮಳೆಯಿಂದಾಗಿ ಕೆಲವೆಡೆ ಮರಗಳೂ ಧರೆಗುರುಳಿ ಬಿದ್ದಿವೆ. ಸೆಂಟ್‌ಜಾನ್ಸ್‌ ವೃತ್ತದಲ್ಲಿ ಮರವೊಂದು ಉರುಳಿ ಬಿದ್ದ ಕಾರಣ ಮಾರ್ಗ ಬದಲಾಯಿಸಲಾಯ್ತು. ಯಲಹಂಕದಿಂದ ದೊಡ್ಡಬಳ್ಳಾಪುರ ಕಡೆ ಹೋಗುವ ರಸ್ತೆಯಲ್ಲಿ ಹಲವು ಮರಗಳು ಉರುಳಿ ಬಿದ್ದಿದೆ. ಅದನ್ನ ಯಲಹಂಕ ವಲಯದ ಬಿಬಿಎಂಪಿ ಸಿಬ್ಬಂದಿ ತೆರವು ಮಾಡಿದರು. ಇದರ ಜತೆಗೆ ಬೆಂಗಳೂರು ನಗರದ ಹಲವು ಕಡೆಗಳಲ್ಲಿ ಮರಗಳು ಬಿದ್ದಿರುವ ಘಟನೆಗಳು ವರದಿಯಾಗಿದೆ. ಆದರೆ ಮರಗಳು ಉರುಳಿದ್ದರಿಂದ ಭಾರೀ ಅನಾಹುತಗಳೇನೂ ಸಂಭವಿಸಿಲ್ಲ ಎಂದು ಬಿಬಿಎಂಪಿ ಮೂಲದಿಂದ ತಿಳಿದು ಬಂದಿದೆ.

ಮೂರು ದಿನ ಬೆಂಗಳೂರಲ್ಲಿ ಮಳೆ ಅಬ್ಬರ ಕನ್ಫರ್ಮ್

ಈ ಬಗ್ಗೆ ಮಾಹಿತಿ ಕೊಟ್ಟ ಹವಾಮಾನ ಇಲಾಖೆ,
ಎರಡು ದಿನ ಬೆಂಗಳೂರಲ್ಲಿ ಸಾಧಾರಣ ಮಳೆ ಆಗಿದ್ದು, ಮುಂದಿನ ಮೂರು ದಿನ ಮಳೆ ಮುಂದುವರೆಯಲಿದೆ ಎಂದು ಎಚ್ಚರಿಕೆ ನೀಡಿದೆ. ಮುಂದಿನ ನಲವತ್ತೆಂಟು ಗಂಟೆಗಳಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕೆಲವು ಕಡೆಗಳಲ್ಲಿ ಭಾರೀ ಮಳೆಯಾಗಲಿದೆ. ಗುಡುಗು ಹಾಗೂ ಮಿಂಚಿನ ವಾತಾವರಣವೂ ಇರಲಿದೆ ಎಂದು ತಿಳಿಸಿದೆ.

More News