ಬೆಂಗಳೂರು : ಬೆಂಗಳೂರು ನಗರದ ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿದ್ದ ಬಸ್ ತಂಗುದಾಣ ಕಳವು ಪ್ರಕರಣ ಸುಖಾಂತ್ಯ ಕಂಡಿದೆ. ಬಿಬಿಎಂಪಿ ಅಧಿಕಾರಿಗಳು ಬಸ್ ಶೆಲ್ಟರ್ ಅನ್ನು ಕೆಡವಿ ಗೋದಾಮಿಗೆ ಸ್ಥಳಾಂತರ ಮಾಡಿದ್ದಾರೆ.
ಪಾದಚಾರಿಗಳ ಜೀವಕ್ಕೆ ಅಪಾಯವಿದೆ ಎಂದು ಸಾರ್ವಜನಿಕರಿಂದ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಬಸ್ ತಂಗುದಾಣವನ್ನು ಕೆಡವಿದ್ದಾರೆ.

ಸುಮಾರು ಹತ್ತು ಲಕ್ಷ ರೂಪಾಯಿ ಖರ್ಚು ಮಾಡಿ ಸ್ಟೇನ್ ಲೆಸ್ ಸ್ಟೀಲ್ ಬಳಸಿ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಶೆಲ್ಟರ್ ನಿರ್ಮಾಣವಾಗಿತ್ತು. ಇದು ನಾಪತ್ತೆಯಾಗಿದೆ ಎಂದು ಸೈನ್ ಪೋಸ್ಟ್ ಇಂಡಿಯಾ ಕಂಪನಿಯು ಸೆಪ್ಟಂಬರ್ 30ರಂದು ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿದ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದಾಗ ಆಘಾತ ಕಾದಿತ್ತು. ಬಿಬಿಎಂಪಿ ಸಿಬ್ಬಂದಿ ಬಸ್ ನಿಲ್ದಾಣವನ್ನು ತೆರವುಗೊಳಿಸುತ್ತಿರುವುದು ಕಂಡುಬಂದಿತ್ತು. ಈ ಸಂಬಂಧ ಬಿಬಿಎಂಪಿ ಅಧಿಕಾರಿಗಳನ್ನು ಸಂಬಂಧಿಸಿದಾಗ ಸತ್ಯಾಂಶ ಹೊರಬಂದಿದೆ.

ಬಸ್ ನಿಲ್ದಾಣ ಕಳ್ಳತನವಾಗಿಲ್ಲ, ಗುಣಮಟ್ಟವಿಲ್ಲದ ಕಾರಣ ಅದನ್ನು ಬಿಬಿಎಂಪಿ ತೆಗೆದಿದೆ ಎಂದು ತಿಳಿದುಬಂದಿದೆ. ಕಂಪನಿಯು ತಪ್ಪುದಾರಿಗೆ ತರುವ ಉದ್ದೇಶದಿಂದ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ. ಕಳಪೆ ಗುಣಮಟ್ಟ ಸಂಬಂಧ ಕಂಪನಿಗೆ ನೋಟೀಸ್ ನೀಡಿದರೂ ಉತ್ತರ ಬಾರದ ಹಿನ್ನೆಲೆಯಲ್ಲಿ ತಂಗುದಾಣವನ್ನು ತೆಗೆದುಹಾಕಲಾಗಿದೆ. ಅದು ಕಳ್ಳತನವಲ್ಲ, ನಷ್ಟವೂ ಅಲ್ಲ. ಅಪಾಯಕಾರಿ ಎಂದು ಭಾವಿಸಿ ಬಿಬಿಎಂಪಿ ಅಧಿಕಾರಿಗಳು ಬಸ್ ತಂಗುದಾಣವನ್ನು ತೆಗೆದಿದ್ದಾರೆ ಎಂದು ಪೊಲೀಸ್ ಆಯುಕ್ತ ಬಿ ದಯಾನಂದ ಅವರು ಮಾಧ್ಯಮದವರಿಗೆ ತಿಳಿಸಿದ್ದಾರೆ.
#COMMISSIONERORPOLICE #BBMP #CUNNINGHAMRAOD #BUSSHELTER #THEFT #REMOVED #SIGNPOSTINDIA #PUBLICINTEREST




