ಬೆಂಗಳೂರು : ಅಹಮದಾಹಾದ್ ನಲ್ಲಿ ನಿನ್ನೆ ನಡೆದ ಇಂಡಿಯಾ- ಪಾಕಿಸ್ತಾನ ಏಕದಿನ ಕ್ರಿಕೆಟ್ ಪಂದ್ಯದ ಸಂದರ್ಭದಲ್ಲಿ ಪಾಕ್ ಆಟಗಾರ ಮೊಹಮ್ಮದ್ ರಿಜ್ವಾನ್ ಔಟ್ ಆಗಿ ಪೆವಿಲಿಯನ್ ತೆರಳುತ್ತಿದ್ದ ಸಂದರ್ಭದಲ್ಲಿ ಅಭಿಮಾನಿಗಳು ಜೈ ಶ್ರೀರಾಮ್ ಘೋಷಣೆ ಕೂಗಿದ್ದರು. ಪ್ರಸ್ತುತ ಈ ವಿಚಾರಕ್ಕೆ ಇದೀಗ ಪರ ವಿರೋಧ ಪ್ರತಿಕ್ರಿಯೆ ವ್ಯಕ್ತವಾಗಿವೆ.
ಪಾಕ್ ಪರ ಅತ್ಯುತ್ತಮವಾಗಿ ಆಟವಾಡುತ್ತಿದ್ದ ರಿಜ್ವಾನ್ 49 ರನ್ ಗಳಿಸಿ ಔಟ್ ಆದರು. ಇವರು ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕುತ್ತಿದ್ದಂತೆ ಜೈ ಶ್ರೀರಾಮ್ ಘೋಷಣೆಯನ್ನು ಅಭಿಮಾನಿಗಳು ಕೂಗಿದರು. ಇದು ರಿಜ್ವಾನ್ ಅವರು ಪೆವಿಲಿಯನ್ ನ ಮೆಟ್ಟಿಲು ಏರುತ್ತಿದ್ದಂತೆ ಇನ್ನೂ ಜೋರಾಗಿತ್ತು.
ಜೈ ಶ್ರೀರಾಮ್ ಕೂಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದಕ್ಕೆ ಪರ ಮತ್ತು ವಿರೋಧ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಕೆಲವು ಅಭಿಮಾನಿಗಳು ಆಟದ ಮೈದಾನದಲ್ಲಿ ಪಾಕ್ ಆಟಗಾರರು ನಮಾಜ್ ಮಾಡಬಹುದಾದರೆ, ಜೈಶ್ರೀರಾಮ್ ಘೋಷಣೆ ನಾವು ಏಕೆ ಕೂಗಬಾರದು ಎಂದು ಪ್ರಶ್ನಿಸಿದ್ದಾರೆ.

ಈ ಹಿಂದಿನ ಪಂದ್ಯ ಶ್ರೀಲಂಕಾದ ವಿರುದ್ಧ ರಿಜ್ವಾನ್ ಅವರು ಶತಕ ಗಳಿಸಿದ್ದರು. ಈ ತಮ್ಮ ಶತಕವನ್ನು ಯುದ್ದ ಪೀಡಿತ ಗಾಜಾದ ಜನರಿಗೆ ಅರ್ಪಿಸುವುದಾಗಿ ಹೇಳಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು. ಅದೇ ರೀತಿಯಲ್ಲಿ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿಕೆ ಕೊಟ್ಟು ವಿವಾದಕ್ಕೆ ಒಳಗಾಗಿದ್ದ ತಮಿಳುನಾಡು ಸಚಿವ ಉದಯನಿಧಿ ಸ್ಟ್ಯಾಲಿನ್ ಅವರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಇನ್ನು ಕೆಲವು ಅಭಿಮಾನಿಗಳು 2017ರಲ್ಲಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಪಾಕ್ ಅಭಿಮಾನಿಗಳು ಭಾರತೀಯ ಆಟಗಾರರ ವಿರುದ್ಧ ಕೆಟ್ಟದಾಗಿ ವರ್ತಿಸಿದ್ದರು. ಇದಕ್ಕೀಗ ತಿರುಗೇಟು ನೀಡಲಾಗಿದೆ ಎಂದು ಪ್ರತಿಕ್ರಯಿಸಿದ್ದಾರೆ.

ಪಂದ್ಯದ ಟಾಸ್ ಸಂದರ್ಭದಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ವಿರುದ್ಧವೂ ಸ್ಟೇಡಿಯಂನಲ್ಲಿದ್ದ ಅಭಿಮಾನಿಗಳು ಕಿರುಚಾಡಿದ್ದರು ಎಂಬ ಆರೋಪದ ಬಗ್ಗೆಯೂ ಖ್ಯಾತ ಪರ್ತಕರ್ತ ರಾಜ್ ದೀಪ್ ಸರ್ದೇಸಾಯಿ ಖಂಡಿಸಿದ್ದರು.




