ಬೆಂಗಳೂರು : ಚಿತ್ರನಟ ದರ್ಶನ್ ಅವರ ಮನೆಯ ಸಾಕು ನಾಯಿಗಳು ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ ಎಂದು ಮಹಿಳ ವಕೀಲರೊಬ್ಬರು ನೀಡಿದ ದೂರಿನ ಹಿನ್ನೆಲೆಯಲ್ಲಿ ನಟ ದರ್ಶನ್ ಮತ್ತು ಇನ್ನೊಬ್ಬರ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ಕಳೆದ ಮೂರು ದಿನಗಳ ಹಿಂದೆಯಷ್ಟೇ ಈ ಘಟನೆ ನಡೆದಿದ್ದು, ಆರ್ ಆರ್ ನಗರದ ಬಿಇಎಂಎಲ್ 5ನೇ ಹಂತದ ನಿವಾಸಿ ವಕೀಲರಾದ ಅಮಿತಾ ಜಿಂದಾಲ್ ಅವರು ದೂರು ನೀಡಿದ್ದರು. ದೂರಿನ ಸಾರಾಂಶವೇನೆಂದರೆ, ಸ್ಪರ್ಶ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅಕ್ಟೋಬರ್ 28ರಂದು ತೆರಳಿದ್ದೆ.
ತಾವು ತಂದಿದ್ದ ಕಾರನ್ನು ದರ್ಶನ್ ಮನೆ ಪಕ್ಕದಲ್ಲಿದ್ದ ಖಾಲಿ ಪ್ರದೇಶದಲ್ಲಿ ಎದುರಿನ ರಸ್ತೆಯಲ್ಲಿ ನಿಲ್ಲಿಸಲಾಗಿತ್ತು. ಕಾರ್ಯಕ್ರಮ ಮುಗಿಸಿ ವಾಪಾಸ್ಸು ಬಂದಾಗ ಎರಡು ನಾಯಿಗಳು ತಮ್ಮನ್ನು ಕಚ್ಚಿವೆ ಎಂದು ದೂರಿನಲ್ಲಿ ವಕೀಲರು ತಿಳಿಸಿದ್ದಾರೆ.

ನಾಯಿಗಳನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿ ಕಾರು ಪಾರ್ಕಿಂಗ್ ವಿಚಾರಕ್ಕೆ ಜಗಳ ತೆಗೆದಿದ್ದ. ಈ ಸಂದರ್ಭದಲ್ಲಿ ಆತನ ಬಳಿಯಿದ್ದ ಎರಡು ನಾಯಿಗಳು ದಾಳಿ ಮಾಡಿವೆ ಎಂದು ಅವರು ತಿಳಿಸಿದ್ದಾರೆ. ಹೊಟ್ಟೆ ಭಾಗದಲ್ಲಿ ಗಾಯಗಳಾಗಿವೆ, ಬಟ್ಟೆ ಹರಿದುಹಾಕಿವೆ ನಾಯಿಗಳು ಕಚ್ಚುತ್ತಿವೆ ಎಂದು ತಿಳಿದಿದ್ದರೂ ಆತ ಎಚ್ಚರ ವಹಿಸಲಿಲ್ಲ, ಶ್ವಾನಗಳ ಮಾಲೀಕರು ಮತ್ತು ಅವುಗಳನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.




