ಬೆಂಗಳೂರು : ಅಕ್ಕಿರಾಜ ಎಂದೇ ಖ್ಯಾತಿ ಪಡೆದಿರುವ ವಿನಾಯಗನ್ ಎಂಬ ಆರಣ್ಯ ಇಲಾಖೆಯ ಆನೆಯೊಂದು ಇಂದು ಬಂಡೀಪುರದಲ್ಲಿ ಹಠಾತ್ ಆಗಿ ಕುಸಿದು ಸಾವಿಗೀಡಾಗಿದೆ.
ಅಕ್ಕಿರಾಜನ ಈ ಸಾವು ಪ್ರಾಣಿಪ್ರಿಯರಲ್ಲಿ ಅನೇಕ ಸಂಶಯಗಳನ್ನು ಹುಟ್ಟುಹಾಕಿದ್ದು, ಶೀಘ್ರದಲ್ಲೇ ಸೂಕ್ತ ರೀತಿಯ ತನಿಖೆ ನಡೆಸಲು ಒತ್ತಾಯಿಸಿದ್ದಾರೆ.

36 ವರ್ಷದ ಗಂಡಾನೆ ವಿನಾಯಗನ್ ಹಠಾತ್ ಕುಸಿದು ಬಿದ್ದು ಮೃತಪಟ್ಟಿದೆ. ಬಂಡೀವುರದ ರಾಮಾಪುರ ಆನೆ ಶಿಬಿರದಲ್ಲಿ ವಾಸವಿದ್ದ ಆನೆ ಸಾವು ಮಾತ್ರ ನಿಗೂಢವಾಗಿದೆ. ಆನೆ ಕುಸಿದು ಬಿದ್ದ ಕೂಡಲೇ ಸ್ಥಳದಲ್ಲಿದ್ದ ಪಶುವೈದ್ಯರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ತುರ್ತು ಚಿಕಿತ್ಸೆ ನೀಡಿ ಅದನ್ನು ಎಚ್ಚರಿಸುವ ಕೆಲಸ ಮಾಡಿದರೂ ಅದು ಫಲಕಾರಿಯಾಗದೇ ಸಾವನ್ನಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅನೆಯ ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಅನೆಯ ಸಾವಿಗೆ ನಿಜವಾದ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮುಂಬರುವ ದಿನಗಳಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾದ ಅಂಬಾರಿ ಹೊರುವ ಅನೆಯಾಗಲು ವಿನಾಯಕನ್ ಗೆ ತರಬೇತಿ ನೀಡಲು ಅರಣ್ಯ ಅಧಿಕಾರಿಗಳು ಮುಂದಾಗಿದ್ದರು.




