ಬೆಂಗಳೂರು: ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಷಡಾಕ್ಷರಿ ಅವರನ್ನು ರಾಜ್ಯ ಸರ್ಕಾರವು ವರ್ಗಾವಣೆ ಮಾಡಿದೆ. ಶಿವಮೊಗ್ಗ ಜಿಲ್ಲೆಯಿಂದ ಕೋಲಾರ ಸಮಾಜ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇದ್ದ ಲೆಕ್ಕಾಧೀಕ್ಷಕ ಹುದ್ದೆಗೆ ವರ್ಗಾವಣೆಗೊಳಿಸಿ ಆರ್ಥಿಕ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶಿಸಿದ್ದಾರೆ.

ಷಡಕ್ಷರಿ ಶಿವಮೊಗ್ಗದಲ್ಲಿ ಕರ್ತವ್ಯ ಸ್ಥಾನದಲ್ಲಿರದೇ ಬೆಂಗಳೂರಿನಲ್ಲಿಯೇ ಹೆಚ್ಚು ಸಮಯ ಇರುತ್ತಾರೆ. ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಹೆಚ್ಚು ಕೆಲಸ ಇಲ್ಲದೇ ಇರುವುದರಿಂದ ಶಿವಮೊಗ್ಗದ ಬದಲು ಬೆಂಗಳೂರಿನಲ್ಲಿಯೇ ಸಮಯ ಕಳೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೇ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಿಎಂ ಆಗಿದ್ದ ಬಿ.ಎಸ್.ಯಡಿಯೂರಪ್ಪರ ಜೊತೆ ಷಡಕ್ಷರಿ ನಿಕಟ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪ ಕೂಡ ಇತ್ತು. ಅಲ್ಲದೇ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ಗೆ ಪ್ರಯತ್ನಿಸಿದ್ದರು ಎಂಬ ಸುದ್ದಿ ಯೂ ಸದ್ದು ಮಾಡಿತ್ತು…
ಷಡಾಕ್ಷರಿ ಈ ಹಿಂದೆ ಶಿವಮೊಗ್ಗ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಲೆಕ್ಕಾಧೀಕ್ಷರಾಗಿದ್ದರು. ಖಾಸಗಿ ಲೇಔಟ್ ಗೆ ಡೆವಲಪ್ಮೆಂಟ್ ಮಾಡಲು ಕೆರೆಯ ಮಣ್ಣನ್ನು ತೆಗೆಸಿ ಅಕ್ರಮ ಸಾಗಾಣಿಕೆ ಮಾಡಿದ್ದಾರೆ. ಅಲ್ಲದೇ ೭೧.೪೧ ಲಕ್ಷರೂ ರಾಯಲ್ಟಿ ಹಣ ಸರ್ಕಾರಕ್ಕೆ ಕಟ್ಟದೆ ಅಕ್ರಮ ಎಸಗಿದ ಆರೋಪ ಹಿನ್ನಲೆಯಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯತ್ ಕಾರ್ಯಪಾಲಕ ಎಂಜಿನಿಯರ್ ವರದಿ ಆಧರಿಸಿ ಷಡಾಕ್ಷರಿ ವರ್ಗಾವಣೆಗೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮನವಿ ಮಾಡಿದ್ದರು. ವರದಿ ಆಧರಿಸಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿಯವ್ರನ್ನ ಎತ್ತಂಗಡಿ ಮಾಡಲಾಗಿದೆ.




