ಚಿಕ್ಕಮಗಳೂರು : ತಮ್ಮ ಪಕ್ಷದ ಎಂಎಲ್ ಸಿಯ ಪುತ್ರಿಯ ನಿಶ್ಚಿತಾರ್ಥಕ್ಕೆ ಎರಡು ದಿನ ಮೊದಲೇ ಕಾಫಿನಾಡಿನ ರೆಸಾರ್ಟಿನಲ್ಲಿ ಜೆಡಿಎಸ್ ದಳಪತಿ ಎಚ್.ಡಿ.ಕುಮಾರಸ್ವಾಮಿ ವಾಸ್ತವ್ಯ ಹೂಡಿದ್ದಾರೆ.

ಭಾನುವಾರದ ಕಾರ್ಯಕ್ರಮಕ್ಕೆ 2 ದಿನದ ಮೊದಲೇ ಆಗಮಿಸಿದ ಕುಮಾರಸ್ವಾಮಿ, ನಿಶ್ಚಿತಾರ್ಥದ ನೆಪದಲ್ಲಿ ಜೆಡಿಎಸ್ ಶಾಸಕರೊಂದಿಗೆ ರೆಸಾರ್ಟಿನಲ್ಲಿ ವಾಸ್ತವ್ಯ ಹೂಡಿದ್ದಾರೆ ಎನ್ನಲಾಗಿದೆ.

ನಾಳೆ ಶಾಸಕರೊಂದಿಗೆ ಕುಮಾರಸ್ವಾಮಿ ಮಹತ್ವದ ಸಭೆ ನಡೆಸಲು ತಯಾರಿ ನಡೆಸಿದ್ದಾರೆ ಎಂದು ತಿಳಿದುಬಂದಿದ್ದು, ಪಕ್ಷ ಬಿಟ್ಟು ಹೋಗಲು ಮುಂದಾಗಿರುವ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ದಳಪತಿ ಪ್ರಯತ್ನಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಕಳೆದ ವಾರ ಹಾಸನದ ಹಾಸನಾಂಬೆ ದೇವಿಯ ದರ್ಶನದ ನೆಪದಲ್ಲಿ ಸಭೆ ನಡೆಸಿದ ಕುಮಾರಸ್ವಾಮಿ ಇದೀಗ ಕಾಫಿನಾಡಲ್ಲಿ ಜೆ.ಡಿ.ಎಸ್ ಶಾಸಕರೊಂದಿಗೆ ಮತ್ತೆ ಸಭೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಕಾಫಿನಾಡಿನ ಹೊಸಪೇಟೆ ಗ್ರಾಮದ ಹನಿ ಡ್ಯೂ ರೆಸಾರ್ಟಿನಲ್ಲಿ ಕುಮಾರಸ್ವಾಮಿ ವಾಸ್ತವ್ಯ ಹೂಡಿದ್ದಾರೆ. ಹನಿ ಡ್ಯೂ ಮುಂಭಾಗದ ಬ್ಲಾಸಮ್ ರೆಸಾರ್ಟಿನಲ್ಲಿ ಶಾಸಕರು ತಂಗಿದ್ದಾರೆ ಎಂದು ತಿಳಿದುಬಂದಿದೆ.




