ಬೆಂಗಳೂರು : ಕೃಷಿ ಸಚಿವ ಚಲುವರಾಯ ಸ್ವಾಮಿ ಅವರು ಮಾಕಳಿ ಬಳಿ 3ಎಕರೆ 31 ಗುಂಟೆ ಕೆರೆ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಮುಖ್ಯ ಕಾರ್ಯದರ್ಶಿಗೆ ದೂರು ದಾಖಲಾಗಿದೆ. ಈ ಸಂಬಂಧ ಪರಿಶೀಲನೆ ನಡೆಸುವಂತೆ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ ಅವರು ಅರಣ್ಯ ಇಲಾಖೆಯ ಹೆಚ್ಚುವರು ಕಾರ್ಯದರ್ಶಿ ಅವರಿಗೆ ಸೂಚನೆ ನೀಡಿದ್ದಾರೆ.
ಮಾಕಳಿ ಬಳಿ ಕೆರೆ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಗೋಪಿನಾಥ್ ಎಂಬುವವರು ಕಳೆದ 18ರಂದು ಮುಖ್ಯಕಾರ್ಯದರ್ಶಿ ಅವರಿಗೆ ದೂರು ಸಲ್ಲಿಸಿ, ಪ್ರಕರಣ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ಮನವಿ ಮಾಡಿದ್ದರು.

ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿಯೇ ಇರುವ ಹಿಮಾಲಯ ಡ್ರಗ್ ಹೌಸ್ ಸಮೀಪದ ಕೆರೆ ಅಂಗಳ ಒತ್ತುವರಿ ಮಾಡಿ, ಅಲ್ಲಿ ಶೆಡ್, ಗೋದಾಮುಗಳನ್ನು ನಿರ್ಮಿಸಿ ಕಾನೂನು ಉಲ್ಲಂಘನೆ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಈ ಜಮೀನಿನ ಪ್ರಸ್ತುತ ಬೆಲೆ ಸುಮಾರು 100 ಕೋಟಿ ರೂಪಾಯಿಯಾಗಲಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿಗೂ ದೂರು ನೀಡಿರುವ ಗೋಪಿನಾಥ್ ಅವರು, ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಮನವಿ ಮಾಡಿದ್ದಾರೆ. ಭೂ ಮಾಪನ, ದಾಖಲೆಗಳ ಪ್ರಕಾರ ಸರ್ವೇ ನಂ 13 ರಲ್ಲಿ ಕೆರೆ ಇದೆ. ಏಪ್ರಿಲ್ 2021 ರಲ್ಲಿ ನೋಂದಾಯಿತ ದಾನ ಪತ್ರದ ಮೂಲಕ ವರ್ಗಾವಣೆ ಆಗಿದೆ.
ದೂರಿನಲ್ಲಿ ಏನಿದೆ

ಭೂಮಾಪನ ಮತ್ತು ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಸಿದ್ದಪಡಿಸಿರುವ ಮಾಕಳಿ ಗ್ರಾಮದ ನಕ್ಷೆಯಲ್ಲಿ ಸರ್ವೇ ನಂಬರ್ 13ರಲ್ಲಿ ಕೆರೆ ಇರುವ ಬಗ್ಗೆ ಸ್ಪಷ್ಟ ಮಾಹಿತಿ ಇದೆ. ಈ ಜಾಗದ ಮಾಲೀಕತ್ವವು 2021 ರ ಏಪ್ರಿಲ್ 27ರಂದು ನೋಂದಾಯಿತ ದಾನಪತ್ರದ ಮೂಲಕ ವರ್ಗಾವಣೆ ಮಾಡಲಾಗದೆ. ಸಚಿವ ಚಲುವರಾಯಸ್ವಾಮಿ ಸಹೋದರ ಲಕ್ಷ್ಮೀಕಾಂತ್ ಅವರಿಗೆ ದಾನವಾಗಿ ಭೂಮಿ ಪಡೆದ್ದಾರೆ.
ಲಕ್ಷ್ಮೀಕಾಂತ ಅವರು ತಿಮ್ಮರಾಯಪ್ಪ ಎಂಬುವವ ರಿಂದ 2007 ರ ಮಾರ್ಚ್ 3 ರಂದು ಬೆಂಗಳೂರು ಉತ್ತರ ಉಪನೋಂದಣಿ ಕಚೇರಿಯಲ್ಲಿ ನೋಂದಾಯಿತ ಡೀಡ್ ಮೂಲಕ ಈ ಜಾಗವನ್ನು ಸ್ವಾಧೀನಕ್ಕೆ ಪಡೆದುಕೊಂಡಿದ್ದರು. ಇದಕ್ಕೆ ಮೊದಲು ತಿಮ್ಮರಾಯಪ್ಪ ಅವರು ತಮ್ಮ ಪಹಣಿಯಲ್ಲಿ ಈ ಜಾಗದ ಸ್ವಾಧೀನ ಹೊಂದಿದ್ದರು. ಲಕ್ಷ್ಮೀಕಾಂತ ಅವರು ಈ ಭೂಮಿ ಮೇಲೆ ನಾನಾ ಬ್ಯಾಂಕ್ ಮೂಲಕ ಸಾಲವನ್ನು ಪಡೆದು ಅದನ್ನು ಮುಕ್ತಾಯಗೊಳಿಸಿದ್ದಾರೆ.
ಲಕ್ಷ್ಮೀಕಾಂತ ಅವರು ಸಹೋದರ ಎನ್ ಚಲುವರಾಯಸ್ವಾಮಿ ಅವರಿಗೆ 2021 ರ ಏಪ್ರಿಲ್ 27 ರಂದು ಮಾಕಳಿ ಗ್ರಾಮದ ಈ ಜಾಗವನ್ನು ದಾನವಾಗಿ ನೀಡಿದ್ದಾರೆ.




