ಬೆಳಗಾವಿ: ಬೆಳಗಾವಿ ಅಧಿವೇಶನ ಹಾಲ್ನಲ್ಲಿರುವ ಸಾವರ್ಕರ್
ಫೋಟೋ ಮತ್ತೆ ಮುನ್ನಲೆಗೆ ಬಂದಿದೆ. ಬಿಜೆಪಿ ಸರ್ಕಾರ ಅವಧಿಯಲ್ಲಿ ಅಳವಡಿಸಿದ ಸಾವರ್ಕರ್ ಫೋಟೋವನ್ನು ತೆರವು ಮಾಡ್ಲಿ ಎಂದು ಕಾಂಗ್ರೆಸ್ ಪ್ರತಿಭಟಿಸಿತ್ತು. ಇದೀಗ ಆ ಹೇಳಿಕೆಯನ್ನ ಸಮರ್ಥಿಸಿಕೊಂಡಿರುವ ಸಚಿವ ಪ್ರಿಯಾಂಕ ಖರ್ಗೆ ನನಗೆ ಬಿಟ್ಟರೆ ಈಗಲೇ ಸಾವರ್ಕರ್ ಫೋಟೋ ತೆರವು ಮಾಡ್ತೇನೆ ಎಂದು ಹೇಳಿದರು.
ಸುವರ್ಣಸೌಧದಲ್ಲಿ ಸಾರ್ವಕರ್ ಫೋಟೋ ಇಟ್ಟಿರುವ ವಿಚಾರದ ಬಗ್ಗೆ ಬೆಳಗಾವಿಯಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಯಾವ ತತ್ವ ಸಿದ್ದಾಂತದಲ್ಲಿ ಸಮಾನತೆ ಇಲ್ಲವೋ, ಸ್ವಾಭಿಮಾನದ ಬದುಕಿಲ್ಲವೋ ಅದನ್ನು ನಾನು ಒಪ್ಪಲ್ಲ . ಗಾಂಧಿ ಹತ್ಯೆಗೆ ಪ್ರೇರಣೆಯಾದ ತತ್ವವನ್ನು ನಾನು ಒಪ್ಪಲ್ಲ . ಸಾವರ್ಕರ್ ಫೋಟೋ ತೆಗೆದರೆ ಸೂಕ್ತ, ನನಗೆ ಬಿಟ್ಟರೆ ಇವತ್ತೇ ತೆರವು ಮಾಡ್ತೇನೆ. ಆದರೆ ನಿಯಮಾನುಸಾರ ಮಾಡಬೇಕು, ನಮ್ಮ ಕೈಯಲ್ಲಿ ಇಲ್ಲ. ಸ್ಪೀಕರ್ ಕ್ರಮ ಕೈಗೊಳ್ಳಬೇಕಾಗುತ್ತದೆ. ನಾನು ಸಂವಿಧಾನದಲ್ಲಿ ನಂಬಿಕೆ ಇಟ್ಟ ವ್ಯಕ್ತಿ. ವೀರ ಸಾವರ್ಕರ್ ಗೆ ವೀರ್ ಬಿರುದು ಕೊಟ್ಟದ್ದು ಯಾರು? ಸಾವರ್ಕರ್ ಬ್ರಿಟೀಷರ ಬಳಿ ಪಿಂಚಣಿ ತೆಗೆದುಕೊಳ್ಳುತ್ತಿದ್ರಾ? ಮಾಫಿ ಪತ್ರವನ್ನು ಅವರು ಬರೆದಿಲ್ಬಾ? ಇಂಡಿಯನ್ ನ್ಯಾಷನಲ್ ಆರ್ಮಿ ಮಾಡ್ತಾ ಇದ್ದಾಗ ಅವರ ವಿರುದ್ಧ ನಮ್ಮವರು ಬ್ರಿಟಿಷ್ ಆರ್ಮಿಗೆ ಸೇರ್ಪಡೆ ಆಗಿ ಎಂದು ಪ್ರೇರಣೆ ಮಾಡ್ತಿರಲಿಲ್ವಾ? ಇದಕ್ಕೆ ಬಿಜೆಪಿ ಉತ್ತರ ಕೊಡಲಿ ಎಂದರು.
ನಾನು ಅವರ ತತ್ವವನ್ನು ನಂಬಲ್ಲ, ಆ ತತ್ವವನ್ನು ಹುಟ್ಟು ಹಾಕಿದವರನ್ನು ಏಕೆ ನಂಬಬೇಕು..? ನನಗೆ ಬಸವ ತತ್ವ ಹಾಗೂ ಸಂವಿಧಾನದಲ್ಲಿ ನಂಬಿಕೆ ಇದೆ. ನಾನು ಸ್ಪೀಕರ್ ಬಳಿ ಈ ವಿಚಾರವಾಗಿ ಮಾತನಾಡಿಲ್ಲ. ವಿಧಾನಸಭೆಯಲ್ಲಿ ನೆಹರೂ ಫೋಟೋ ಹಾಕಬೇಕು. ಮೂರು ಸಾವಿರ ದಿನ ಜೈಲಿನಲ್ಲಿ ಕಳೆದಿದ್ದಾರೆ. ದೇಶವನ್ನು ಆಳಿ ವೈಜ್ಞಾನಿಕ ಮನೋಭಾವ ಬೆಳೆಸಿದ್ದಾರೆ. ಸಾವರ್ಕರ್ ಇತಿಹಾಸ ಅಶ್ವತ್ಥ ನಾರಾಯಣಗಿಂತ ಚೆನ್ನಾಗಿ ನನಗೆ ಗೊತ್ತಿದೆ ಎಂದು ಟೀಕಿಸಿದರು

ಇನ್ನು ಸಾವರ್ಕರ್ ಪೋಟೋ ತೆಗೆದು ನೆಹರು ಪೋಟೋ ಹಾಕುವ ವಿಚಾರದ ಕುರಿತು ಕೇಳಿದ ಪ್ರಶ್ನೆ ಗೆ ಸುವರ್ಣ ಸೌಧದಲ್ಲಿ ಮಾತನಾಡಿದ ಸ್ಪೀಕರ್ ಯು.ಟಿ.ಖಾದರ್,
ನನಗೆ ಯಾವುದೇ ಪ್ರಸ್ತಾವನೆ ಬಂದಿಲ್ಲ. ಬಂದ ಮೇಲೆ ನೋಡೋಣ ಈಗ್ಲೆ ಬ್ಯಾಟ್ ಬೀಸಿದ್ರೆ ಆಗುತ್ತಾ..? ಸಂವಿಧಾನದ ಬದ್ದವಾಗಿ ಏನು ಮಾಡಬೇಕು ಅದನ್ನ ಮಾಡುತ್ತೇನೆ. ನನಗೆ ಮಂತ್ರಿಗಳು ಒಂದೇ ಪ್ರತಿ ಪಕ್ಷದವರು ಒಂದೇ. ಪ್ರಜಾಪ್ರಭುತ್ವದಲ್ಲಿ ಅವರವರ ಹೇಳಿಕೆ ನೀಡಲು ಅವಕಾಶ ಇದೆ. ಸಂವಿಧಾನ ಬದ್ದವಾಗಿ ಯಾವುದೇ ವಿಚಾರದಲ್ಲಿ ನನ್ನ ಕರ್ತವ್ಯ ನಿರ್ವಹಿಸುತ್ತೇನೆ ಎಂದು ತಿಳಿಸಿದರು.




