ಹುಬ್ಬಳ್ಳಿ: ಉಂಡಾಡಿ ಗುಂಡನಂತಿದ್ದ ಪತಿಯನ್ನ ಕೆಲಸಕ್ಕೆ ಹೋಗುವಂತೆ ಒತ್ತಾಯಿಸಿದ ಕಾರಣಕ್ಕೆ ಪತ್ನಿಯನ್ನ ಹತ್ಯೆಗೈದು, ತಾನೂ ನೇಣಿಗೆ ಶರಣಾದ ಘಟನೆ ಹುಬ್ಬಳ್ಳಿಯ ಕಟಕರ ಓಣಿ ಯಲ್ಲಿ ಘಟನೆ ನಡೆದಿದೆ.
ಮೊದಲ ಪತಿ ತೀರಿಕೊಂಡ ಕಾರಣ ಶಾಹಿಸ್ತಾಬಾನು, ಮಲ್ಲೀಕ್ ಎಂಬಾತನನ್ನು ಎರಡನೇ ಬಾರಿ ವಿವಾಹವಾಗಿದ್ದಾರೆ. ಮೊದಲ ಪತಿಯಿಂದ ಎರಡು ಗಂಡು ಮಕ್ಕಳಿದ್ದ ಶಾಹಿಸ್ತಾಬಾನು ಬದುಕಿನ ಬಂಡಿಯನ್ನ ನಡೆಸಿಕೊಂಡು ಬಂದಿದ್ದಾರೆ. ಪ್ರಾರಂಭದಲ್ಲಿ ಸಭ್ಯನಂತೆ ಕಂಡ ಮಲ್ಲೀಕ್ ನಂತರ ಹುಟ್ಟು ಸೋಮಾರಿ ಎಂಬುದು ಶಾಹಿಸ್ತಾ ಬಾನುಗೆ ತಿಳಿಯಿತು. ಮನೆಯಲ್ಲೇ ಇದ್ದು ಏನು ಮಾಡ್ತೀರಿ..? ಮಕ್ಕಳಿದ್ದಾರೆ.. ಬದ್ಕು ನಡೆಯಬೇಕಲ್ವೇ..? ದುಡಿಯಲು ಹೋಗಿ ಎಂದೇಳಿದಾಗಲೆಲ್ಲಾ ಪತಿ ಜಗಳ ತೆಗೆಯುತ್ತಿದ್ದನಂತೆ. ಇದರಿಂದಾಗಿ ಇಬ್ಬರ ನಡುವೆ ಆಗಾಗ ಗಲಾಟೆ ಕೂಡ ನಡೆಯುತ್ತಿತ್ತಂತೆ

ಕೆಲಸ ಮಾಡುವಂತೆ ಇಂದು ಕೂಡ ಪತ್ನಿ ಶಾಹಿಸ್ತಾಬಾನು ಪತಿಗೆ ಒತ್ತಾಯಿಸಿದ್ದಾಳೆ. ದುಡಿಯಲು ಹೇಳಿದರೆ ಸದಾ ಜಗಳ ತೆಗೆಯುತ್ತಿದ್ದ ಮಲೀಕ್, ಇಂದು ಕೂಡ ಅದೇ ವರಸೆ ತೆಗೆದಿದ್ದಾನೆ. ಜಗಳದ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ವಿಕೋಪಕ್ಕೆ ತಿರುಗಿದೆ. ಇದರಿಂದ ಕೋಪೋದ್ರಿಕ್ತಗೊಂಡ ಪತಿ ಮಲ್ಲೀಕ್, ಪತ್ನಿಯನ್ನ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ
ಪತ್ನಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಪತಿರಾಯ ಮಲೀಕ್, ನಂತರ ಆತಂಕಗೊಂಡು ಮನೆಯಲ್ಲೇ ತಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಕರಣ ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.




