ಬೆಳಗಾವಿ: ಸ್ಪೀಕರ್ ಸ್ಥಾನದ ಬಗ್ಗೆ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಸಚಿವ ಜಮೀರ್ ಅಹ್ಮದ್ ಖಾನ್
ಪಾಕಿಸ್ತಾನದ ಏಜೆಂಟ್ ಎಂದು ಬಿಜೆಪಿ ಸದಸ್ಯರು ಸದನದಲ್ಲಿ ಘೋಷಣೆ ಕೂಗಿದರು.
ಬಿಜೆಪಿ ಗದ್ದಲದ ಹಿನ್ನಲೆಯಲ್ಲಿ ಸದನವನ್ನು ಹತ್ತು ನಿಮಿಷ ಮುಂದೂಡಿದ ಬಳಿಕ ಮತ್ತೆ ಸದನ ಆರಂಭವಾದರೂ ಬಿಜೆಪಿ ಸದಸ್ಯರು ಸದನದ ಬಾವಿಗೆ ಇಳಿದು ಧರಣಿ ನಡೆಸಿದರು.
ಈ ವೇಳೆ ಜಮೀರ್ ವಿರುದ್ಧ ವಾಗ್ದಾಳಿ ನಡೆಸಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಶೋಕಿಗಾಗಿ ಹಿಂದೂಗಳ ವಿರುದ್ಧ ಜಮೀರ್ ಅವಹೇಳನ ಮಾಡಿದ್ದಾರೆ. ಹಿಂದೂಗಳ ಮತ ಬೇಡವೇ? ಕಾಂಗ್ರೆಸ್ ನವರು ಕೋಮುವಾದಿಗಳು. ಕಾಂಗ್ರೆಸ್ ಗೆ ಹಿಂದೂಗಳ ಮತ ಬೇಡವೇ? ಹಿಂದೂಗಳನ್ನು ಕಾಂಗ್ರೆಸ್ ಎರಡನೇ ದರ್ಜೆ ಪ್ರಜೆಯನ್ನಾಗಿ ಮಾಡ್ತೀರಿ. ನಮ್ಮಲ್ಲಿ ಪಾಕಿಸ್ತಾನದ ಸಂವಿಧಾನ ಇಲ್ಲ. ಭಾರತದ ಸಂವಿಧಾನ ಇದೆ.
ಎಸ್ ಎಂ ಕಷ್ಣ ಅವರು ಈ ರೀತಿ ಹೇಳಿಕೆ ಕೊಟ್ಟಿದ್ದ ಸಚಿವರನ್ನು ವಜಾ ಮಾಡಿದ್ದರು. ಆದರೆ ಸಿಎಂ
ಸಿದ್ದರಾಮಯ್ಯ ಅವರಿಗೆ ಧಮ್ ಇಲ್ಲವೇ? ಎಂದು ಆರ್.ಅಶೋಕ್ ಪ್ರಶ್ನಿಸಿದರು.
ನಾವು ಪೀಠಕ್ಕೆ ಗೌರವ ಕೊಡುತ್ತೇವೆ. ಹಿಂದೂ- ಮುಸ್ಲಿಂ ಎಂದು ನೋಡಲ್ಲ. ಇದು ಸಂವಿಧಾನದ ವಿರೋಧಿ ನಡೆ ಎಂದು ಅಶೋಕ್ ವಾಗ್ದಾಳಿ ನಡೆಸಿದರು.

ಜಮೀರ್ ಅಹ್ಮದ್ ಖಾನ್ ಹೇಳಿಕೆಯನ್ನು ಸಮರ್ಥನೆ ಮಾಡಿದ ಸಚಿವ ಕೃಷ್ಣ ಬೈರೇಗೌಡ, ‘ಪೀಠಕ್ಕೆ ಅಗೌರವ ಆಗುವ ಮಾತನ್ನು ಜಮೀರ್ ಆಡಿಲ್ಲ. ಯಾರೇ ಇರಲಿ ಎಲ್ಲರೂ ಪೀಠಕ್ಕೆ ಗೌರವ ಕೊಡುತ್ತಾರೆ. ಆ ಸ್ಥಾನವನ್ನು ಮುಸ್ಲಿಮರಿಗೆ ಕಾಂಗ್ರೆಸ್ ನೀಡಿದೆ ಎಂದು ಹೇಳಿದ್ದಾರೆ. .ಮತಗಳನ್ನು ಬೇಟೆಯಾಡಲು ಕ್ಷುಲ್ಲಕ ರಾಜಕಾರಣಕ್ಕಾಗಿ ಸದನದ ಸಮಯವನ್ನು ರಾಜಕೀಯ ಕಾರಣಕ್ಕಾಗಿ ಹಾಳು ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
ಗದ್ದಲದ ನಡುವೆ ವಿಧೇಯಕ ಅಂಗೀಕಾರ

ಕರ್ನಾಟಕ ಸರಕು ಹಾಗೂ ಸೇವೆಗಳ ತೆರಿಗೆ ( ಎರಡನೇ ತಿದ್ದುಪಡಿ) ವಿಧೇಯಕ ಹಾಗೂ 2023 ನೇ ಸಾಲಿನ ಕರ್ನಾಟಕ ವೈದ್ಯಕೀಯ ಕೋರ್ಸ್ ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ( ತಿದ್ದುಪಡಿ) ವಿಧೇಯಕ ಹಾಗೂ 2023 ನೇ ಸಾಲಿನ ಕರ್ನಾಟಕ ಸ್ಟಾಂಪ್ ( ತಿದ್ದುಪಡಿ) ವಿಧೇಯಕ ಪರ್ಯಾಲೋಚನೆ ಮಾಡಲಾಯಿತು.
ಸ್ಪೀಕರ್ ಆಕ್ರೋಶ

ಯಾವುದೇ ನೋಟಿಸ್ ಕೊಡದೆ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡುದು ಸರಿಯಲ್ಲ. ಜಮೀರ್ ಹೇಳಿಕೆಗೆ ನಾನು ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದೇನೆ. ಬರ ಹಾಗೂ ಉತ್ತರ ಕರ್ನಾಟಕದ ಚರ್ಚೆಯ ಮಾಡದೆ ಇದನ್ನು ಪ್ರಸ್ತಾಪ ಮಾಡುವುದು ಸರಿಯಲ್ಲ. ಈ ಚರ್ಚೆಯಿಂದ ರಾಜ್ಯದ ಜನರಿಗೆ ಯಾವುದೇ ಪ್ರಯೋಜನ ಇಲ್ಲ ಎಂದರು.




