ಶಿವಮೊಗ್ಗ: ಕಾಶಿಯಲ್ಲಿ ಇರುವ ಮಸೀದಿ ಒಡೆದು ಹಾಕಿ,
ದೊಡ್ಡದಾಗಿ ಕಾಶಿ ವಿಶ್ವನಾಥ ದೇವಸ್ಥಾನ ನಿರ್ಮಾಣ ಮಾಡುತ್ತೇವೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಗೋಷ್ಠಿ ನಡೆಸಿ ಮಾತನಾಡಿದ ಕೆ ಎಸ್ ಈಶ್ವರಪ್ಪ, ಸುಮಾರು 496 ವರ್ಷಗಳ ಹಿಂದೆ ಅಯೋಧ್ಯೆಯಲ್ಲಿ ರಾಮಮಂದಿರ ಧ್ವಂಸವಾಗಿತ್ತು. ಮೊಘಲ್ ರಾಜ ಬಾಬರ್ ದೇವಾಲಯದ ಮೇಲೆ ಮಸೀದಿಯನ್ನು ನಿರ್ಮಿಸಿದ್ದ. ಇದೀಗ ಅಯೋಧ್ಯೆಯಲ್ಲಿ ಗುಲಾಮಗಿರಿಯ ಪ್ರತೀಕ ಕಳೆದು ಹಿಂದೂಗಳ ಸ್ವಾಭಿಮಾನದ ಪ್ರತಿಬಿಂಬವಾದ ರಾಮ ಮಂದಿರ ನಿರ್ಮಾಣವಾಗಿದೆ. ದೇವರ ಆಶೀರ್ವಾದದಿಂದ ನಮ್ಮ ಜೀವಿತಾವಧಿಯಲ್ಲಿಯೇ ರಾಮ್ ಲಲ್ಲಾನ ವಿಗ್ರಹವನ್ನು ಪ್ರತಿಷ್ಠಾಪಿಸುವ ಅದೃಷ್ಟವನ್ನು ನಾವು ಪಡೆದಿದ್ದೇವೆ ಎಂದಿದ್ದಾರೆ. ಇದೇ ವೇಳೆ ಹೊಸ ವಿವಾದವೊಂದನ್ನು ಹುಟ್ಟು ಹಾಕಿದ ಅವರು, ಮಥುರಾ ದಲ್ಲೂ ದೇವಸ್ಥಾನ ನಿರ್ಮಾಣ ಮಾಡುತ್ತೇವೆ. ಕಾಶಿ ಮಥುರಾ ಅಯೋಧ್ಯ ನಮ್ಮ ಪುಣ್ಯ ಕ್ಷೇತ್ರಗಳು ಎಂದಿದ್ದು, ಪರ ವಿರೋಧ ಚರ್ಚೆಗೆ ಗ್ರಾಮವಾಗಿದೆ.
ಇಷ್ಟಕ್ಕೆ ಸುಮ್ಮನಾಗದ ಮಾಜಿ ಡಿಸಿಎಂ, ರಾಮಮಂದಿರ ನಿರ್ಮಾಣದ ನಿರ್ಧಾರದ ಸಮಯದಲ್ಲಿ ಹಿಂದೂ ಯಾತ್ರಾ ಕೇಂದ್ರಗಳಾದ ಕಾಶಿ ಮತ್ತು ಮಥುರಾದಲ್ಲಿ ಸಮೀಕ್ಷೆ ನಡೆಸಲು ಅನುಮತಿ ನೀಡಲಾಗಿತ್ತು. ಅಲ್ಲಿಯೂ ದೇವಾಲಯಗಳನ್ನು ನಿರ್ಮಿಸಲು ನಾವು ನ್ಯಾಯಾಲಯದಲ್ಲಿ ಅನುಕೂಲಕರ ತೀರ್ಪು ಪಡೆಯುತ್ತೇವೆ. ಕಾಶಿಯಲ್ಲಿರುವ ಮಸೀದಿಯನ್ನು ಕೆಡವಿ ಕಾಶಿ ಮಂದಿರ ನಿರ್ಮಿಸುತ್ತೇವೆ. ನಾವು ಮಥುರಾದಲ್ಲಿ ಶ್ರೀಕೃಷ್ಣ ದೇವಾಲಯವನ್ನು ನಿರ್ಮಿಸುತ್ತೇವೆ ಎಂದಿದ್ದು, ಭಾರೀ ಚರ್ಚೆ ಗೆ ಗ್ರಾಮವಾಗಿದೆ.




