ಬೆಂಗಳೂರು (ಜನವರಿ 3):- ಹಳೇ ಪ್ರಕರಣಗಳ ವಿಲೇವಾರಿ ವಿಚಾರವನ್ನೇ ರಾಜಕೀಯಗೊಳಿಸಲಾಗಿದೆ. ಬಿಜೆಪಿಯವರು ಇಲ್ಲದ ವಿಚಾರವನ್ನು ರಾಜಕೀಯಕ್ಕೆ ತಳಕು ಹಾಕುತ್ತಿದ್ದು, ಅವರಿಗೆ ಶೋಭೆ ತರುವುದಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.
ಸದಾಶಿವನಗರದ ನಿವಾಸದ ಬಳಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಬಂಧಿತನಾದ ವ್ಯಕ್ತಿ ಕರಸೇವಕ ಎಂಬುದು ಗೊತ್ತಿಲ್ಲ. ಆತನ ವಿರುದ್ಧ 16 ಕೇಸ್ಗಳಿದ್ದವು. ಕೆಲವು ಪ್ರಕರಣಗಳು ವಿಲೇವಾರಿಯಾಗಿಲ್ಲ. ವಿಲೇವಾರಿಯಾಗದೇ ಇರುವ ಪ್ರಕರಣಗಳಲ್ಲಿ ಬಂಧಿಸಲಾಗಿದೆ. ಇದನ್ನೇ ಅಯೋಧ್ಯೆ ರಾಮಜನ್ಮಭೂಮಿಗೆ ತಳುಕು ಹಾಕಿ ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗೆ ಸಹಕಾರ ನೀಡುತ್ತಿರುವುದಕ್ಕೆ ಏನು ಹೇಳಬೇಕು ಎಂದರು.
ಹಿಂದುಪರ ಸಂಘಟನೆಗಳ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂಬುದು ತಪ್ಪು ಕಲ್ಪನೆ. ಹುಬ್ಬಳ್ಳಿಯಲ್ಲಿ ಹಳೇ ಪ್ರಕರಣಗಳನ್ನು ವಿಲೇವಾರಿ ಮಾಡುವಾಗ ಈ ಪ್ರಕರಣವು ಬಂದಿದೆ. ನಾವು ಯಾರನ್ನು ಟಾರ್ಗೆಟ್ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಕರಣಗಳ ವಿಲೇವಾರಿಗೆ 31 ವರ್ಷ ಯಾಕೆ ಕಾಯುತ್ತಿದ್ದರು, ಅಂದಿನಿಂದ ಏಕೆ ಸುಮ್ಮನಿದ್ದರು ಎಂದು ಬಿಜೆಪಿಯವರು ಕೇಳುತ್ತಿದ್ದಾರೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮನ್ನು ಪ್ರಶ್ನಿಸುವ ಬಿಜೆಪಿಯವರು 2008ರಲ್ಲಿಯೂ ಸಹ ಅವರೇ ಅಧಿಕಾರದಲ್ಲಿದ್ದರು. ಈ ಹಿಂದೆಯೂ ಅವರೇ ಅಧಿಕಾರದಲ್ಲಿದ್ದರು. ಆಗ ಪ್ರಕರಣವನ್ನು ತೆಗೆದು ಹಾಕಬಹುದು ಅಥವಾ ಖುಲಾಸೆ ಮಾಡಬಹುದು. ಯಾಕೆ ಮಾಡಲಿಲ್ಲ.? ಹೀಗಾಗಿ ಯಾರ ಮೇಲೆ ಯಾರು ಆರೋಪ ಮಾಡಬೇಕು ಎಂದರು ಮರುಪ್ರಶ್ನಿಸಿದರು.
ಹುಬ್ಬಳ್ಳಿಯಲ್ಲಿ 26 ಪ್ರಕರಣಗಳಲ್ಲಿ 36 ಮಂದಿಯನ್ನು ಬಂಧಿಸಲಾಗಿದೆ. ಆ ಪ್ರಕರಣಗಳಲ್ಲಿ ಯಾರು ಹಿಂದುಗಳಿಲ್ಲವ? ಅವರ ಬಗ್ಗೆ ಏಕೆ ಮಾತನಾಡುತ್ತಿಲ್ಲ. ಬಂಧಿತನಷ್ಟೇ ಹಿಂದು ವ್ಯಕ್ತಿಯೇ? ಬಿಜೆಪಿಯವರಿಗೆ ಮಾತನಾಡಲು ಬೇರೆ ವಿಷಯಗಳೇ ಇಲ್ಲ. ಆರೋಪ ಮಾಡಲು ಇಲ್ಲದ ವಿಷಯವನ್ನು ಕೆದಕುತ್ತಿದ್ದಾರೆ ಎಂದು ಹರಿಹಾಯ್ದರು.
ಪ್ರಕರಣದಲ್ಲಿ ಬಂಧಿತ ವ್ಯಕ್ತಿ ಕರಸೆವಕ ಎಂಬುದು ಎಫ್ಐಆರ್ ನಲ್ಲಿ ಎಲ್ಲಿಯೂ ಉಲ್ಲೇಖ ಆಗಿಲ್ಲ. ಆತ ಒಬ್ಬ ಅಪರಾಧಿ ಸ್ಥಾನದಲ್ಲಿರುವಂತಹವನು. ಆತನ ಮೇಲೆ ಹದಿನಾರು ಕೇಸುಗಳು ದಾಖಲಾಗಿವೆ. ಇಂತಹ ಅಪರಾಧ ಹಿನ್ನೆಲೆ ಇರುವಂತವನ ಮೇಲೆ ಬಿಜೆಪಿ ನಾಯರಕು ಸಹಕಾರ ಮಾಡುತ್ತಾರೆ ಎಂದು ತಿರುಗೇಟು ನೀಡಿದರು.
ಇನ್ನುಳಿದ ಪ್ರಕರಣಗಳಲ್ಲಿ ಬಂಧಿತರಾದವರು ಹಿಂದುಗಳಲ್ಲವಾ? ಅವರ ಬಗ್ಗೆ ಏಕೆ ಮಾತನಾಡುತ್ತಿಲ್ಲ ಬಿಜೆಪಿಯವರು. ಬಂಧಿತನಷ್ಟೇ ಹಿಂದುವೇ. ಇನ್ನುಳಿದ ಬಂಧಿತದ್ದಾರ ಬಗ್ಗೆಯೂ ಕಾಳಜಿ ತೋರಿಸಲಿ. ಬಿಜೆಪಿಯವರಿಗೆ ಮಾತನಾಡಲು ಬೇರೆ ವಿಷಯಗಳಿಲ್ಲ ಆರೋಪ ಮಾಡಬೇಕೆಂದು ಇಲ್ಲದನ್ನು ಹುಡುಕುತ್ತಿದ್ದಾರೆ ಎಂದು ಹೇಳಿದರು.
ಮುಂದಿನ ಚುನಾವಣೆಯಲ್ಲಿ ಜನರು ಪಾಠ ಕಲಿಸುತ್ತಾರೆ ಎಂದು ವಿಪಕ್ಷದವರು ಹೇಳುತ್ತಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯವರಿಗೆ ಪಾಠ ಕಲಿಸುತ್ತಾರೆ ಎಂದು ಟೀಕಿಸಿದರು. ಜನಸಮುದಾಯ ತೀರ್ಮಾನ ಮಾಡುವಾಗ ಎಲ್ಲರಿಗೂ ಪಾಠವಾಗುತ್ತದೆ. ರಾಜ್ಯದಲ್ಲಿ ಬಿಜೆಪಿಯವರಿಗೆ ಪಾಠ ಕಲಿಸಿಲ್ಲವೇ? ನಮಗೆ 136 ಸೀಟುಗಳನ್ನು ಗೆಲ್ಲಿಸಿಕೊಟ್ಟು ಜನರು ಅವರಿಗೆ ಪಾಠ ಕಲಿಸಿದ್ದಾರಲ್ಲ ಎಂದು ವಿಧಾನಸಭಾ ಚುನಾವಣೆಯ ಬಿಜೆಪಿ ಸೋಲನ್ನು ಅವರು ನೆನಪಿಸಿದರು.
ಪೊಲೀಸ್ ಅಧಿಕಾರಿಗಳಿಗೆ ದಿನನಿತ್ಯ ನಾವು ನಿರ್ದೇಶನಗಳನ್ನು ನೀಡುವುದಿಲ್ಲ. ಅಗತ್ಯ ಸಂದರ್ಭದಲ್ಲಿ ಮಾತ್ರ ಕೆಲವು ಕಟ್ಟುನಿಟ್ಟಿ ಸೂಚನೆಗಳನ್ನು ನೀಡುತ್ತೇವೆ. ಪೊಲೀಸರು ತರಬೇತಿ ಪಡೆದಿದ್ದಾರೆ. ಕಾನೂನು ಪುಸ್ತಕವನ್ನು ಅವರ ಕೈಗೆ ಕೊಟ್ಟಿದ್ದೇವೆ. ಅವರ ಕರ್ತವ್ಯವನ್ನು ಮುಕ್ತವಾಗಿ ಕೈಗೊಳ್ಳುತ್ತಾರೆ ಎಂದು ಹೇಳಿದರು.




