ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಬೆಳಿಗ್ಗೆ ಮಂಜು ಕವಿದ ವಾತಾವರಣ ಇದ್ದಕಾರಣ ರೈಲು ಸಂಚಾರ ಮತ್ತು ವಿಮಾನ ಹಾರಾಟದಲ್ಲಿ ಭಾರೀ ವ್ಯತ್ಯಯ ಕಂಡುಬಂದಿದೆ.
ದೆಹಲಿಯಲ್ಲಿ ತಾಪಮಾನ ಕನಿಷ್ಠ5 ಡಿಗ್ರಿ ಸೆಲ್ಸಿಯಸ್ ಇಂದು ದಾಖಲಾಗಿದೆ. ಆದ್ದರಿಂದ ನಾನಾರೀತಿಯ ಸಂಚಾರದಲ್ಲಿ ವ್ಯತ್ಯಯ ಕಂಡುಬಂದಿದೆ. ದೂರದ ಊರಿಗೆ ಪ್ರಯಾಣ ಬೆಳೆಸುವ ಅನೇಕ ಪ್ರಯಾಣಿಕರು ಪರದಾಡುವಂತಾಗಿತ್ತು.

ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ ವೇ ಕಾಣಿಸದಷ್ಟು ದಟ್ಟವಾದ ಮಂಜು ಆವರಿಸಿದ್ದರಿಂದ ದೆಹಲಿಯಿಂದ ಪ್ರಯಾಣ ಬೆಳಸಬೇಕಾಗಿದ್ದ ಸುಮಾರು 30ಕ್ಕೂ ಹೆಚ್ಚು ವಿಮಾನಗಳು ವಿಳಂಬವಾಗಿವೆ. ಸುಮಾರು 15ಕ್ಕೂ ಹೆಚ್ಚು ವಿಮಾನಗಳು ತಮ್ಮ ಹಾರಾಟವನ್ನು ರದ್ದುಗೊಳಿಸಿವೆ ಎಂದು ವಿಮಾನನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.
ಹಾಗೆಯೇ ದಟ್ಟ ಮಂಜು ಕವಿದಿದ್ದರಿಂದ ದೆಹಲಿಯಿಂದ ಹೊರಡಬೇಕಾಗಿದ್ದ ರೈಲು ಗಳು ವಿಳಂಬವಾಗಿವೆ. ಹಾಗೆಯೇ ನಿಲ್ದಾಣಕ್ಕೆ ಬರಬೇಕಾಗಿದ್ದ ರೈಲುಗಳೂ ಕೂಡ ವಿಳಂಬವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಸ್ತೆಯಲ್ಲಿ ವಾಹನಗಳ ಓಡಾಟಕ್ಕೆ ತೊಂದರೆಯಾಗಿದ್ದು, ಸಂಚಾರದಲ್ಲಿ ಸಂಪೂರ್ಣ ವ್ಯತ್ಯಯ ಕಂಡುಬಂದಿದೆ. ದೆಹಲಿ ಸೇರಿದಂತೆ ಉತ್ತರ ಭಾರತದ ಅನೇಕ ಕಡೆಗಳಲ್ಲಿ ದಟ್ಟ ಮಂಜಿನಿಂದಾಗಿ ಹಲವೆಡೆ ಶೂನ್ಯ ಗೋಚರತೆ ದಾಖಲಾಗಿದೆ. ಅನಗತ್ಯ ಪ್ರಯಾಣ ಮಾಡದಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.




