ಬೆಳಗಾವಿ : ಅವರು ಮೈಸೂರು ಗರಡಿಯಲ್ಲಿ ಬೆಳೆದಿದ್ದರೆ, ನಾನು ಕೂಡ ಮೈಸೂರು ಗರಡಿಯಲ್ಲಿಯೇ ಬೆಳೆದವನು, ಅದೇ ಗರಡಿಯಲ್ಲಿಯೇ ನಾನೂ ಕುಸ್ತಿ ಆಡಿದ್ದೇನೆ, ನಮ್ಮವರಿಗೆ ಏಕವಚನದಲ್ಲಿ ಮಾತಾಡಿದರೆ ಏನು ಮಾಡಲಿ? ಯುದ್ಧಭೂಮಿಯಲ್ಲಿ ಶಾಸ್ತ್ರೀಯ ಸಂಗೀತ, ಭರತ ನಾಟ್ಯಕ್ಕೆ ಅವಕಾಶವಿಲ್ಲ, ಇಲ್ಲಿಯ ಭಾಷೆ ಬೇರೆ ಇರುತ್ತೆ ಎಂದು ಸಿಎಂ ಸಿದ್ದರಾಮಯ್ಯ ಅವರ ಹೆಸರು ಹೇಳದೇ ಸಂಸದ ಅನಂತ್ ಕುಮಾರ್ ಹೆಗಡೆಯ ಮತ್ತೆ ನಾಲಿಗೆ ಹರಿಬಿಟ್ಟಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಯುದ್ಧಭೂಮಿಯಲ್ಲಿ ಹೇಗೆ ಮಾತಾಡಬೇಕೋ ಹಾಗೆಯೇ ಮಾತನಾಡಬೇಕು, ಅಲ್ಲಿ ಹೋಗಿ ಭರತ ನಾಟ್ಯ ಮಾಡ್ತಾ ಕೂಡೋಕಾಗುತ್ತಾ ಎಂದು ಪ್ರಶ್ನಿಸಿದರು.
ನನಗೆ ಮತ ನೀಡಿದವರು ನೀವು, ನೀವು ಸ್ವಾಭಿಮಾನದಿಂದ ಮತ ನೀಡಿದ್ದು ನಿಜವಾದರೆ ನಾನು ಹೇಳಿದ್ದು ಸರಿ ಎಂದು ತಮ್ಮ ಹೇಳಿಕೆ ಅವರು ಸಮರ್ಥಿಸಿಕೊಂಡರು. ನಾನು ಬೇಡವೆಂದರೂ ನನ್ನ ಬೆನ್ನು ಬಿದ್ದವರು ನೀವು, ನಿಮ್ಮ ಪ್ರೀತಿಯಿಂದಲೇ ಇವತ್ತು ನಾನು ಇಲ್ಲಿದ್ದೇನೆ, ಕೊನೆಯವರೆಗೂ ನಾನು ನಿಮ್ಮೊಂದಿಗೆ ಇದ್ದೇನೆ ಎಂದು ಸೆಂಟಿಮೆಂಟಲ್ ಬಾಷಣ ಮಾಡಿದರು.

ಇದುವರೆಗೂ ನನ್ನ ಹಣೆ ಮೇಲೆ ಅಪವಾದವನ್ನು ದೇವರು ಬರೆದಿಲ್ಲ, ಇಲ್ಲಿ ನಿಮ್ಮ ಮುಂದೊಂದು ಭಾಷಣ, ಅಲ್ಲಿ ಹೋಗಿ ಬೇರೆಯವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳೋದು, ಇಂಥದ್ದು ಈ ನನ್ನ ರಕ್ತದಲ್ಲಿ ಇಲ್ಲ, ಮಹಾಸಂಗ್ರಾಮ ಶುರುವಾಗಿದೆ, ‘ನಾವು ಗೆದ್ದೆವು’ ಅನ್ನೋದಲ್ಲ, ‘ಗೆದ್ದಿದ್ದೇವೆ ಲೇ ಗೆದ್ಸಿದ್ದೇವೆ’ ಅಂತಾ ಗಟ್ಟಿಯಾಗಿ ಬರಬೇಕು ಎಂದು ಕರೆನೀಡಿದರು.
ಗಂಡು ದನಿಯ ನೆಲವಿದು, ಗಟ್ಟಿಯಾಗಿ ಮಾತಾಡಬೇಕು, ಅಭ್ಯರ್ಥಿ ಯಾರೇ ಆಗಿರಲಿ, ಈ ಕ್ಷೇತ್ರದಲ್ಲಿ ರಾಷ್ಟ್ರೀಯ ದಾಖಲೆಯಾಗಬೇಕು ಎಂದರು.




