ಅಯೋಧ್ಯೆ : ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಮತ್ತು ರಾಮಲಲ್ಲಾ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ನಂತರ ಇಂದಿನಿಂದ ಶ್ರೀರಾಮನ ದರ್ಶನಕ್ಕೆ ಸಾರ್ವಜನಿಕರಿಗೆ ಉಚಿತ ದರ್ಶನದ ಅವಕಾಶ ಕಲ್ಪಿಸಲಾಗಿದೆ.
ವಿಶೇಷ ಪೂಜೆ ಕೈಕಂರ್ಯಕ್ಕಾಗಿ ಹಾಗೂ ಬಾಲರಾಮನ ದರ್ಶನಕ್ಕೆ ದೇಶದ ನಾನಾ ಭಾಗಗಳಿಂಗ ಭಕ್ತರ ದಂಡೇ ಹರಿದುಬರುತ್ತಿದ್ದು, ಎಲ್ಲೆಡೆ ಜೈ ಶ್ರೀರಾಮ ಘೋಷಣೆ ಮೊಳಗುತ್ತಿದೆ.

ದೇಗುಲಕ್ಕೆ ಇಂದು ಮುಂಜಾನೆಯಿಂದಲೇ ಭಕ್ತರು ಗುಂಪು ಗುಂಪಾಗಿ ಆಗಮಿಸುತ್ತಿದ್ದು, ದೇವಾಲಯದ ಆವರಣದಲ್ಲಿ ನೂಕುನುಗ್ಗಲು ಉಂಟಾಗಿದೆ. ಕೇಸರ ಧ್ವಜ ಮತ್ತು ಕೇಸರಿ ಬಟ್ಟೆ ಧರಿಸಿ ಬರುತ್ತಿರುವ ಭಕ್ತರ ದಂಡನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಪೊಲೀಸರ ಬಿಗಿ ಬಂದೋಬಸ್ತ್ ಮಾಡಲಾಗಿದ್ದು. ಸುಮಾರು 500 ವರ್ಷಗಳ ನಂತರ ತನ್ನ ಜನ್ಮಭೂಮಿಯಲ್ಲಿ ನೆಲೆಸಿದ ಆದರ್ಶಪುರುಷ ಶ್ರೀರಾಮನ ದರ್ಶನಕ್ಕಾಗಿ ದೇಶದ ನಾನಾ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುತ್ತಿದ್ದಾರೆ.