ಚೆನ್ನೈ: ತಮಿಳುನಾಡಿನ ಸುಪ್ರಸಿದ್ದ ಪಳನಿ ಮುರುಗನ್ ದೇವಸ್ಥಾನಕ್ಕೆ ಹಿಂದೂಯೇತರರು ಪ್ರವೇಶಿಸುವ ಹಾಗಿಲ್ಲ, ಈ ಸಂಬಂಧ ಧ್ವಜಸ್ಥಂಭದ ಬಳಿ ಸೂಚನಾ ಫಲಕ ಅಳವಡಿಸಲು ಮದ್ರಾಸ್ ಹೈಕೋರ್ಟ್ ಆದೇಶಿಸಿದೆ.
ಒಂದು ವೇಳೆ ಹಿಂದೂ ಅಲ್ಲದವರು ದೇವಸ್ಥಾನಕ್ಕೆ ಪ್ರವೇಶಿಸಲು ಬಯಸಿದ್ದರೆ ಅಂತಹವರು ಹಿಂದೂ ಧರ್ಮ ಮತ್ತು ಪದ್ದತಿ ಹಾಗೂ ದೇವರಲ್ಲಿ ನಂಬಿಕೆ ಇರಿಸುವುದಾಗಿ ಘೋಷಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ.
ಕಳೆದ ವರ್ಷ ಜೂನ್ ತಿಂಗಳಲ್ಲಿ ಪಳನಿ ಬೆಟ್ಟಕ್ಕೆ ತೆರಳಲು ಮುಸ್ಲಿಂ ಕುಟುಂಬವೊಂದು ಟಿಕೆಟ್ ಪಡೆದಿತ್ತು. ಆದರೆ ಈ ಕುಟುಂಬಕ್ಕೆ ಬೆಟ್ಟ ಪ್ರವೇಶಕ್ಕೆ ಅಲ್ಲಿನ ಅಧಿಕಾರಿಗಳು ತಡೆದಿದ್ದರು. ಈ ಸಂದರ್ಭದಲ್ಲಿ ಹಿಂದೂಯೇತರರಿಗೆ ಪ್ರವೇಶವಿಲ್ಲ ಎಂಬ ಬೋರ್ಡ್ ಇಲ್ಲ ಎಂದು ವಾದಿಸಿದ್ದರಿಂದ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು.

ಈ ಸಂಬಂಧ ಸೆಂಥಿಲ್ ಕುಮಾರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಮಧುರೈ ಪೀಠ ಮತ್ತು ದೇವಾಲಯಗಳು ಪಿಕ್ನಿಕ್ ತಾಣಗಳಲ್ಲ ಎಂದು ಹೇಳಿದೆ. ಇತರ ಸಮುದಾಯಗಳಂತೆ ಹಿಂದೂಗಳೂ ಕೂಡ ಹಸ್ತಕ್ಷೇಪವಿಲ್ಲದೆ ತಮ್ಮ ಧರ್ಮವನ್ನು ಆಚರಿಸುವ ಅಧಿಕಾರ ಹೊಂದಿದ್ದಾರೆ ಎಂದು ನ್ಯಾಯಮೂರ್ತಿ ಎಸ್ ಶ್ರೀಮತಿ ಅವರು, ದೇವಾಲಯದ ಮುಂದೆ ಹಿಂದೂಯೇತರರಿಗೆ ಪ್ರವೇಶವಿಲ್ಲ ಎಂಬ ನಾಮಫಲಕ ಹಾಕುವಂತೆ ತಮಿಳುನಾಡು ಸರ್ಕಾರ ಮತ್ತು ಧಾರ್ಮಿಕ ದತ್ತಿ ಇಲಾಖೆಗೆ ಸೂಚನೆ ನೀಡಿದ್ದಾರೆ. ತಮ್ಮ
ದೇವಸ್ಥಾನಕ್ಕೆ ಪ್ರತಿದಿನ ಸಾವಿರಾರು ಜನರು ಭೇಟಿ ನೀಡುತ್ತಾರೆ. ಅವರಲ್ಲಿ ಹಿಂದೂ ಸೇರಿದಂತೆ ಇತರ ಧರ್ಮದವರು ದೇಗುಲಕ್ಕೆ ಬರುತ್ತಾರೆ. ಇವರಲ್ಲಿ ಹಿಂದೂ ದೇವರ ಮೇಲೆ ನಂಬಿಕೆ ಇಲ್ಲದವರು ಇರುತ್ತಾರೆ. ಆದರೂ ಕೂಡ ದೇವಾಲಯ ಪ್ರವೇಶಿಸುತ್ತಾರೆ. ಇದು ದೇವರನ್ನು ನಂಬುವವರಿಗೆ ನೋವುಂಟು ಮಾಡುತ್ತದೆ ಎಂದು ಪಿಐಎಲ್ ನಲ್ಲಿ ಸೆಂಥಿಲ್ ಕುಮಾರ್ ಮನವಿ ಮಾಡಿದ್ದರು.




