Residential Schools Slogan Change: ವಸತಿ ಶಾಲೆಗಳ ಘೋಷ ವಾಕ್ಯ ಬದಲಾವಣೆ : ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆರ್.‌ಅಶೋಕ್ ಆಗ್ರಹ

ಬೆಂಗಳೂರು : ವಸತಿ ಶಾಲೆಗಳ ಘೋಷವಾಕ್ಯ ಬದಲಾವಣೆ ವಿಚಾರವಾಗಿ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ಮಾತನಾಡಿದ ಅವರು,
ಮಣಿವಣ್ಣನ್ ಅವರು ಪ್ರಧಾನ ಕಾರ್ಯದರ್ಶಿಯಾಗಿ ಬದಲಾವಣೆಯಾಗಿದ್ದಾರೆ ಅಂತ ಪ್ರಪಂಚವೇ ಬದಲಾಗಬೇಕು ಎನ್ನುವ ಮನಸ್ಥಿತಿಯಲ್ಲಿದ್ದಾರೆ. ಕುವೆಂಪು ಅವರ ವಾಕ್ಯ ಜ್ಞಾನ ದೇಗುಲ ಕೈಮುಗಿದು ಒಳಗೆ ಬನ್ನಿ ಎನ್ನುವುದು. ಇದು ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಎತ್ತಿ ಹಿಡಿಯುವಂಥದ್ದು. ನೀವು ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಹೋದ್ರು ಎಲ್ಲಾ ಕಡೆ ಜ್ಞಾನ ದೇಗುಲ ಎಂದು ಹೇಳುತ್ತೇವೆ. ಶಾಲೆ ಕಲಿಯಲು ಒಂದು ದೇವಸ್ಥಾನ ವಿದ್ದಂತೆ. ಇವರು ಧೈರ್ಯದಿಂದ ಪ್ರಶ್ನಿಸಿ ಅಂದ್ರೆ ಪ್ರಶ್ನೆ ಮಾಡೋದು ಎಲ್ಲಿ? ಎಂದು ಕೇಳಿದರು.

ಪ್ರಶ್ನೆಯನ್ನು ಶಿಕ್ಷಕರ ಬಳಿ ಮಾಡಬೇಕು ಯಾವ ಪಾಠ ಅರ್ಥವಾಗಲ್ವೋ ಅಲ್ಲಿ ಪ್ರಶ್ನೆ ಮಾಡಬೇಕು. ಅದನ್ನು ಬಿಟ್ಟು ಕುವೆಂಪು ಅವರ ಈ ವೇದವಾಕ್ಯವನ್ನು ತೆಗೆದುಹಾಕುವಂಥದ್ದು ಇದು ಕೆಟ್ಟ ಸಂಸ್ಕೃತಿ. ನನಗೆ ಅನಿಸುತ್ತಿದೆ ಇಡೀ ಸರ್ಕಾರ ಇದರ ಹಿಂದೆ ಇದೆ. ಮೊನ್ನೆ ಗಣೇಶನ ಪೂಜೆ ಮಾಡೋ ಹಾಗಿಲ್ಲ ಸರಸ್ವತಿ ಪೂಜೆ ಮಾಡೋ ಹಾಗಿಲ್ಲ ಅಂತ ಆದೇಶ ಮಾಡಿದ್ರು. ಆ‌ ಮೇಲೆ ಏನಾಯ್ತೋ ವಾಪಸ್ ತೆಗೆದುಕೊಂಡರು, ಈಗ ಮತ್ತೊಂದು ಕಥೆ ಎಂದು ವಾಗ್ದಾಳಿ ನಡೆಸಿದರು.

ಕುವೆಂಪು ಅವರ ವೇದವಾಕ್ಯವನ್ನು ತೆಗೆದು ಮಣಿವಣ್ಣನ್ ಅವರ ವೇದವಾಕ್ಯವನ್ನು ಹಾಕಿದ್ದಾರೆ.
ಸರ್ಕಾರದ ಆದೇಶ ಎಲ್ಲಿದೆ ಮಂತ್ರಿಗಳ ಆದೇಶ ಎಲ್ಲಿದೆ ? ಇದುವರೆಗೂ ಮಂತ್ರಿಗಳ ಆದೇಶದ ಪ್ರತಿ ನಮಗೆ ಸಿಕ್ಕಿಲ್ಲ. ಒಬ್ಬ ಪ್ರಧಾನ ಕಾರ್ಯದರ್ಶಿ ಹುಚ್ಚುಚ್ಚಾಗಿ ಅವನಿಗೆ ಮನಸ್ಸಿಗೆ ಬಂದ ಹಾಗೆ ಚೇಂಜ್ ಮಾಡಿದ್ದಾನೆ. ಈಗ ವಿಧಾನಸೌಧದ ಮುಂದೆ ಸರ್ಕಾರದ ಕೆಲಸ ದೇವರ ಕೆಲಸ ಅಂತ ಇದೆ. ಯಾರೋ ಕಾರ್ಯದರ್ಶಿ ಬಂದು ಅದನ್ನು ಅಳಿಸು ಹಾಕಿ ಅಂದ್ರೆ ಅರ್ಥ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಂಗಲ್ ಹನುಮಂತಯ್ಯ ನವರು ಆ ಕಾಲದಲ್ಲಿ ಯಾವ ಉದ್ದೇಶಕ್ಕೆ ಬಳಸಿದ್ರು. ಅದರ ಹಿಂದಿನ ಅರ್ಥ ಏನು? ಇದು ದೇವರ ಕೆಲಸ ಇಲ್ಲಿಗೆ ಬರುವರೆಲ್ಲ ಭ್ರಷ್ಟಾಚಾರ ಆಗಬಾರದು ಎಂಬ ತಿಳುವಳಿಕೆ ಹೇಳಲು ಮಾಡಿದ್ದರು. ಮಕ್ಕಳು ಕೈಮುಗಿದು ಒಳಗೆ ಬನ್ನಿ ಅಂತ ಅಂದ್ರೆ ತಪ್ಪೇನು? ಬೇರೆ ದೇಶದ ಪ್ರಧಾನಿಗಳು ನಮ್ಮ ದೇಶಕ್ಕೆ ಬಂದಾಗ ಅವರು ಕೈ ಮುಗಿಯುತ್ತಾರೆ ಎಂದರು.

ಅಂತದ್ರಲ್ಲಿ ಕೇಡುಗಾಲ ಬಂದಿರುವ ಈ ಸರ್ಕಾರ ಆದೇಶ ಇಲ್ಲದೆ ನಾಮಫಲಕ ಬದಲಾಯಿಸಿದ್ದಾರೆ.
ಯಾವ ಅಧಿಕಾರಿಗಳು ಸರ್ಕಾರದ ಮಾತು ಕೇಳುತ್ತಿಲ್ಲ. ಸರ್ಕಾರ ಇದಿಯೋ ಸತ್ತಿದೆಯೋ ಗೊತ್ತಿಲ್ಲ ಎಂದು ಕಿಡಿಕಾರಿದರು.

ಕಳೆದ ಬಾರಿಯ ಸಿದ್ದರಾಮಯ್ಯನವರ ಬೇರೆ ಈಗಿರುವ ಸಿದ್ದರಾಮಯ್ಯನವರೇ ಬೇರೆ.ಸಿದ್ದರಾಮಯ್ಯನವರಿಗೆ ಆಡಳಿತದಲ್ಲಿ ಹಿಡಿತ ಇಲ್ಲ.‌ಮೊನ್ನೆ ಬಜೆಟ್ ಮಾಡಿದಾಗ್ಲೂ ನೋಡಿದ್ದೇವೆ. ಅದು ಅವರ ಬಜೆಟ್ ಅಲ್ಲ ಡೂಪ್ಲಿಕೇಟ್ ಬಜೆಟ್. ಅಧಿಕಾರಿಗಳು ಬೇಕಾಬಿಟ್ಟಿ ಆದೇಶನ ಬದಲಾವಣೆ ಮಾಡ್ತಿದ್ದಾರೆ. ಮಂತ್ರಿಗಳನ್ನ ಕೇಳಲ್ಲ ಮುಖ್ಯಮಂತ್ರಿಗಳನ್ನ ಕೇಳಲ್ಲ.
ಸರ್ಕಾರಕ್ಕೆ ಅಧಿಕಾರಿಗಳಿಂದ ಕವಡೆ ಕಾಸಿನ ಕಿಮ್ಮತ್ತಿಲ್ಲ. ಇಲ್ಲಿ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಅನ್ನೋದಲ್ಲ ವಿಚಾರ. ಇಲ್ಲಿ ಬರುವಾಗ ಭಕ್ತಿಯಿಂದ ಪವಿತ್ರತೆಯಿಂದ ಬಾ ಎಂದು ಹೇಳೋದು. ನೀವು ಧೈರ್ಯದಿಂದ ಪ್ರಶ್ನೆ ಮಾಡಬೇಕಾಗಿರುವುದು ಮೇಷ್ಟ್ರ ಬಳಿ.ಸರಿಯಾಗಿ ಊಟ ಕೊಟ್ಟಿಲ್ಲ ಅಂದಾಗ ವಾರ್ಡನ್ ಬಳಿ ಪ್ರಶ್ನೆ ಮಾಡಬೇಕು ಎಂದರು.

ಕಾಂಗ್ರೆಸ್ ಸರ್ಕಾರ ಎಡಬಿಡಂಗಿ ಸರ್ಕಾರ ದಿಕ್ಕು ದೆಸೆ ಇಲ್ಲದೆ ಓಡುತ್ತಿದೆ. ಅಧಿಕಾರಿಗಳ ಕೈಗೆ ಅಧಿಕಾರ ಕೊಟ್ಟು ಸಚಿವರು ಮೋಜು-ಮಸ್ತಿಯಲ್ಲಿದ್ದಾರೆ. ಹೇಳೋರು ಕೇಳೋರು ಇಲ್ಲದಂತ ಸರ್ಕಾರವಾಗಿದೆ. ಯಾರು ಪ್ರಧಾನ ಕಾರ್ಯದರ್ಶಿ ಇದ್ದಾರೋ ಅವರ ವಿರುದ್ಧ ಕ್ರಮ ಆಗಬೇಕು. ಅವರನ್ನು ಅಲ್ಲಿಂದ ಎತ್ತಂಗಡಿ ಮಾಡುವ ಕೆಲಸ ಮಾಡಬೇಕು ಎಂದರು.

ಶಿಕ್ಷಣ ಸಚಿವರು ಇದನ್ನ ಖಂಡಿಸಿದ್ದಾರೆ ನಾನು ನೋಡಿದ್ದೇನೆ.
ಆದರೆ ಬೇರೆ ಮಂತ್ರಿಗಳು ಸಮರ್ಥನೆ ಮಾಡಿಕೊಂಡಿದ್ದಾರೆ.‌ಮಂತ್ರಿಮಂಡಲದಲ್ಲೇ ಗೊಂದಲ ಇದೆ. ಮಂತ್ರಿಮಂಡಲದಲ್ಲೇ ವಿಭಿನ್ನ ಹೇಳಿಕೆಗಳಿದೆ. ಅಧಿಕಾರಿಗಳು ಮನಸೋ ಇಚ್ಛೆ ಅಧಿಕಾರ ನಡೆಸುತ್ತಿದ್ದಾರೆ ಅನ್ನೋದು ಸ್ಪಷ್ಟ. ಒಂದು ಅಗುಳು ಮುಟ್ಟಿ ನೋಡಿದರೆ ಅನ್ನ ಬೆಂದಿದ್ಯೋ ಇಲ್ವೋ ಗೊತ್ತಾಗುತ್ತೆ ಎಂದರು‌.

More News

You cannot copy content of this page