ಬೆಂಗಳೂರು : ರಾಮನಗರದಲ್ಲಿ ರಾಜಕಾರಣ ನಡೀತಾ ಇದೆ, ಬಿಜೆಪಿಯವರು ಲಾಯರ್ ಎಲ್ಲಾರನ್ನು ಕರೆದು ತಂದು ತಪ್ಪು ದಾರಿಗೆ ಎಳೆದು ರಾಜಕಾರಣ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಆರೋಪಿಸಿದರು.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣ ಮಾಡೋರನ್ನ ನಾವೇನೂ ಬೇಡ ಅನ್ನಲ್ಲ, ಏನು ಬೇಕಾದ್ರೂ ಮಾಡಲಿ, ಆದರೆ, ಕಾನೂನು ಪ್ರಕಾರ ಎಲ್ಲಾರಿಗೂ ರಕ್ಷಣೆ, ಗೌರವ ಕೊಡಬೇಕು ಎಂದು ಹೇಳಿದರು.
ರಾಮನಗರದಲ್ಲಿ ವಕೀಲರು ಪ್ರತಿಭಟನೆ ನಡೆಸುತ್ತಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಡಿ ಕೆ ಶಿವಕುಮಾರ್, ಬಂದು ಕುಳಿತುಕೊಂಡು ಮಾತನಾಡಿದರೆ ಏನು ಬೇಕಾದ್ರೂ ಮಾಡಲು ನಾವು ರೆಡಿ ಇದ್ದೀವಿ, ರಾಜಕಾರಣ ಮಾಡ್ತೀವಿ ಅಂದ್ರೆ ಮಾಡ್ಕೋಳಿ ನಮ್ಮ ಅಭ್ಯಂತರ ಇಲ್ಲ ಎಂದು ಹೇಳಿದರು.
ಸುಪ್ರೀಂಕೋರ್ಟ್ ನ್ಯಾಯಾಧೀಶರಿಗೆ ಬೈದಿದ್ದಾರೆ ಅನ್ನೋ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಆ ವಿಚಾರ ನನಗೆ ಇನ್ನೂ ಗೊತ್ತಿಲ್ಲ, ನೀವೇನೋ ಮಾಧ್ಯಮದವರು ತೋರಿಸಿದ್ದೀರಾ ಅದನ್ನ ನೋಡಿದ್ದೇನೆ, ನನಗೆ ಇದರಲ್ಲಿ ಭಾಗಿಯಾಗಲು ಇಷ್ಟವಿಲ್ಲ, ಭಾಗಿನೂ ಆಗಲ್ಲ ಎಂದರು.
ಯಾರಾದ್ರೂ ಬಂದು ಅವರ ನೋವು ಹೇಳಿಕೊಂಡರೆ, ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ಕೊಡಬಹುದು, ನನಗೆ ವಕೀಲರ ಬಗ್ಗೆ ಬಹಳ ಗೌರವ ಇದೆ ಎಂದು ತಿಳಿಸಿದರು.




