ದಾವಣಗೆರೆ: ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಮತ್ತು ಹರಿಹರ ಬಿಜೆಪಿ ಶಾಸಕರ ಮಧ್ಯೆ ದೂಡಾ ಪ್ರಾಧಿಕಾರದ ಸಾಮಾನ್ಯ ಸಭೆಯಲ್ಲಿ ಮಾತಿನ ಚಕಮಕಿ ನಡೆದ ಘಟನೆ ನಡೆದಿದೆ.
ದಾವಣಗೆರೆ -ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ನಿಯಾಮವಳಿಗಳನ್ನು ಗಾಳಿಗೆ ತೂರಿ ಕೆಲವೊಂದು ಲೇಔಟ್ ಗಳನ್ನು ಅಪ್ರೋವಲ್ ಪಡೆಯಲಾಗಿದೆ ಎಂದು ಹರಿಹರ ಬಿಜೆಪಿ ಶಾಸಕ ಬಿಪಿ ಹರೀಶ್ ಆರೋಪಿಸಿದರು. ಇದಕ್ಕೆ ಸಚಿವರು ಏನಾದರೂ ಆಕ್ಷೇಪಣೆಗಳಿದ್ದಲ್ಲಿ ಲಿಖಿತ ರೂಪದಲ್ಲಿ ನೀಡಲು ಸೂಚಿಸಿದರು.

ಇದಕ್ಕೆ ಸಿಟ್ಟಾದ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಏಕಪಕ್ಷೀಯ ತೀರ್ಮಾನ ತೆಗೆದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಜೊತೆ ವಾಗ್ವಾದಕ್ಕಿಳಿದರು. ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ ವೆಂಕಟೇಶ್ ವಿರುದ್ಧ ಹರಿಹಾಯ್ದರು.

ಈ ಸಂದರ್ಭದಲ್ಲಿ ನನಗೆ ಬೇರೆ ಕೆಲಸ ಇದೆ ಎಂದು ಸಚಿವರು ಹೇಳಿದ್ದಕ್ಕೆ ಮತ್ತೆ ಆಕ್ಷೇಪ ವ್ಯಕ್ತಪಡಿಸಿದರು. ಐದು ವರ್ಷ ನೀವು ಲೂಟಿ ಹೊಡೆದಿದ್ದೀರಿ ಎಂದು ಶಾಸಕ ಬಿ ಪಿ ಹರೀಶ್ ವಿರುದ್ಧ ಸಚಿವರು ವಾಗ್ದಾಳಿ ನಡೆಸಿದರು. ಪರಸ್ಪರ ಏಕವಚನದಲ್ಲಿ ಸಂಬೋಧಿಸಿದ ಸಚಿವರು ಮತ್ತು ಶಾಸಕರು.

ಭ್ರಷ್ಟಾಚಾರದಲ್ಲಿ ದೂಡಾ ಅಧ್ಯಕ್ಷರಾದ ಡಿಸಿ ಪಾಲುದಾರರಾಗಿದ್ದಾರೆಂದು ಶಾಸಕರು ಇದೇ ಸಂದರ್ಭದಲ್ಲಿ ಆರೋಪಿಸಿದರು. ಮಿನಿಸ್ಟರ್ ಹೇಳಿದಂತೆ ಐಎಎಸ್ ಅಧಿಕಾರಿ ತಲೆ ಆಡಿಸುತ್ತಾರೆ, ಈ ಭ್ರಷ್ಟ ವ್ಯವಸ್ಥೆ ಅಧಿಕಾರಿಗಳು ಸಚಿವರ ವಿರುದ್ಧ ಹೋರಾಟ ಮಾಡುತ್ತೇವೆ ಎಂದರು.




